ಐಎಂಎ ವಂಚನೆ: ನ್ಯಾಯದ ಭರವಸೆ ನೀಡಿದ ಕುಮಾರಸ್ವಾಮಿ
ಬೆಂಗಳೂರು, ಜೂನ್ 18: ಐಎಂಎ ಸಂಸ್ಥೆಯಿಂದ ವಂಚನೆಗೊಳಗಾಗಿರುವ ಎಲ್ಲರಿಗೂ ನ್ಯಾಯದ ಭರವಸೆಯನ್ನು ಇಂದು ಸಿಎಂ ಕುಮಾರಸ್ವಾಮಿ ಅವರು ನೀಡಿದ್ದಾರೆ.
ಚನ್ನಪಟ್ಟಣದಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ಐಎಂಎ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವವರು ಎಷ್ಟೆ ದೊಡ್ಡವರಾಗಿದ್ದರೂ ಸರಿ ಅವರನ್ನು ಕ್ಷಮಿಸುವುದಿಲ್ಲ, ವಂಚೆನೆಗೆ ಒಳಗಾದವರಿಗೆ ನ್ಯಾಯ ದೊರಕಿಸಲಾಗುವುದು ಎಂದು ಕುಮಾರಸ್ವಾಮಿ ಹೇಳಿದರು.
ಐಎಂಎ ಜ್ಯುವೆಲ್ಸ್ ವಂಚನೆ ಕೇಸ್, ಮನ್ಸೂರ್ ಗೆ 'ಇಡಿ' ನೋಟಿಸ್
ಐಎಂಎ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಆರೋಪಿ ವಿದೇಶಕ್ಕೆ ಹಾರಿದ್ದರೂ ಸಹಿತ ಅವರ ಬೆನ್ನು ಬಿಡುವುದಿಲ್ಲ, ವಂಚನೆಗೆ ಒಳಗಾಗಿರುವವರಿಗೆ ನ್ಯಾಯ ಒದಗಿಸಿಯೇ ತೀರುತ್ತೇನೆ ಎಂದು ಕುಮಾರಸ್ವಾಮಿ ನುಡಿದರು.
ಗ್ರಾಮ ವಾಸ್ತವ್ಯಕ್ಕೆ ಮುನ್ನವೇ ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಇಲಾಖೆ ಡಿಐಜಿ ಜೊತೆ ಸಭೆ ನಡೆಸಿ ಸೂಚನೆ ನೀಡುತ್ತೇನೆ ಎಂದು ಅವರು ಹೇಳಿದರು.
ಐಎಂಎ ಹಗರಣ : ಜಯನಗರದ ಆಭರಣ ಮಳಿಗೆಯಲ್ಲಿ ಸಿಕ್ಕಿದ್ದೇನು?
ಇದೇ ಸಮಯ ಮೇಕೆದಾಟು ಅಣೆಕಟ್ಟೆ ನಿರ್ಮಾಣದ ಬಗ್ಗೆ ಮಾತನಾಡಿರುವ ಕುಮಾರಸ್ವಾಮಿ, ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ಯಾವ ಅಡ್ಡಿಯನ್ನೂ ನ್ಯಾಯಾಲಯಗಳು ವಿಧಿಸಿಲ್ಲ, ಈ ಬಗ್ಗೆ ತಮಿಳುನಾಡು ಸರ್ಕಾರಕ್ಕೆ ಮಾಹಿತಿ ಕೊರತೆ ಇದೆ, ಮತ್ತು ರಾಜಕೀಯದ ಕಾರಣದಿಂದ ಕಾಮಗಾರಿ ವಿಳಂಬವಾಗುತ್ತಿದೆ. ಈ ಬಗ್ಗೆ ಕೇಂದ್ರ ಸಚಿವರ ಗಮನ ಸೆಳೆಯಲಾಗಿದೆ ಎಂದು ಅವರು ಹೇಳಿದರು.