ನನ್ನೆಲ್ಲ ಸ್ನೇಹಿತರಿಗೂ ಒಳ್ಳೆಯದಾಗುತ್ತದೆ ಎಂದ ಸಚಿವ ಜಮೀರ್ ಅಹ್ಮದ್
ರಾಮನಗರ, ಜೂನ್ 23: ಹಜ್ ಭವನಕ್ಕೆ ಟಿಪ್ಪು ಹೆಸರನ್ನು ಇಡುವ ವಿಚಾರಕ್ಕೆ ಬಿಜೆಪಿಯವರು ಈಗ ವಿರೋಧ ಮಾಡುತ್ತಿದ್ದಾರೆ. ಆದರೆ ಹಿಂದೆ ಯಡಿಯೂರಪ್ಪನವರ ಸರಕಾರದಲ್ಲಿ ಅವರೆಲ್ಲ ಟಿಪ್ಪು ಜಯಂತಿ ಆಚರಣೆ ಮಾಡಿಲ್ಲವಾ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಶೋಭಾ ಕರಂದ್ಲಾಜೆ ಸೇರಿದಂತೆ ಬಿಜೆಪಿ ಮುಖಂಡರಿಗೆ ಪ್ರಶ್ನೆ ಮಾಡಿದರು.
ಚನ್ನಪಟ್ಟಣದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಅಗಮಿಸಿದ್ದ ವೇಳೆ ಮಾಧ್ಯಮಗಳೂಂದಿಗೆ ಅವರು ಮಾತನಾಡಿ, ಯಡಿಯೂರಪ್ಪ, ಆರ್.ಅಶೋಕ್ ಸೇರಿದಂತೆ ಅನೇಕರು ಟಿಪ್ಪು ಜಯಂತಿಯಲ್ಲಿ ಭಾಗಿಯಾಗಿದ್ದಾರೆ. ಅಂದು ಇಲ್ಲದ ವಿರೋಧ ಇಂದು ಯಾಕೆ ಎಂದು ಪ್ರಶ್ನಿಸಿದರು.
ಹಜ್ ಭವನಕ್ಕೆ ಟಿಪ್ಪು ಹೆಸರು ನಾಮಕರಣಕ್ಕೆ ಬಿಜೆಪಿ ತೀವ್ರ ವಿರೋಧ: ಕರಂದ್ಲಾಜೆ
ನಾವು ಸರಕಾರಕ್ಕೆ ಈ ಬಗ್ಗೆ ಪ್ರಸ್ತಾವ ಕಳುಹಿಸಿದ್ದೇವೆ ಅಷ್ಟೇ. ಯಾವುದೇ ತೀರ್ಮಾನ ಕೈಗೊಂಡಿಲ್ಲ. ಈ ಕುರಿತು ಬಿಜೆಪಿಯವರ ಜೊತೆಗೂ ಚರ್ಚೆ ಮಾಡುತ್ತೇವೆ. ಅವರು ನಮಗೆ ಸಹಕಾರ ಕೊಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಇನ್ನು ನನಗೆ ಸಚಿವ ಸ್ಥಾನ ಸಿಕ್ಕಿರುವುದಕ್ಕೆ ಕಾಂಗ್ರೆಸ್ ನ ಹಿರಿಯ ಮುಸ್ಲಿಂ ನಾಯಕರಿಗೆ ಯಾವುದೇ ಅಸಮಾಧಾನವಿಲ್ಲ. ರೋಷನ್ ಬೇಗ್, ತನ್ವೀರ್ ಸೇಠ್ ಎಲ್ಲರೂ ಕಾಂಗ್ರೆಸ್ ನಲ್ಲಿ ಹಿರಿಯರು. ಹಲವು ಬಾರಿ ಸಚಿವರಾಗಿದ್ದಾರೆ. ನಾನು ಮೊದಲ ಬಾರಿಗೆ ಕಾಂಗ್ರೆಸ್ ನಿಂದ ಮಂತ್ರಿಯಾಗಿದ್ದೇನೆ. ಅವರಿಗೆ ಅವಕಾಶ ತಪ್ಪಿರುವುದಕ್ಕೆ ಬೇಸರವಿರಬಹುದು. ಆದರೆ ನನ್ನ ಬಗ್ಗೆ ಯಾರಿಗೂ ಅಸಮಾಧಾನವಿಲ್ಲ ಎಂದರು.
ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಕುಮಾರಸ್ವಾಮಿ ಅವರ ಜೊತೆ ಕೆಲಸ ಮಾಡಬೇಕಿದೆ. ಹಾಗಾಗಿ ನಾವಿಬ್ಬರು ಎಲ್ಲವನ್ನೂ ಮರೆತು ಸ್ನೇಹಿತರಾಗಿದ್ದೇವೆ. ಬಾಲಕೃಷ್ಣ, ಚೆಲುವರಾಯಸ್ವಾಮಿ ಹಾಗೂ ನನ್ನೆಲ್ಲ ಸ್ನೇಹಿತರಿಗೂ ಒಳ್ಳೆಯದಾಗುತ್ತದೆ. ಅದಕ್ಕೆ ಸಮಯ ಬರಬೇಕು ಎಂದರು.