ಹೆಸರಿಗೆ ಮಾತ್ರ "ಎ ಗ್ರೇಡ್", ಗ್ರಾಮಕ್ಕೆ ಹೋದರೆ ಆಗುತ್ತದೆ ನಿಜ ದರ್ಶನ
ಚನ್ನಪಟ್ಟಣ, ಡಿಸೆಂಬರ್ 23: ಹೆಸರಿಗೆ ಮಾತ್ರ ಇದು "ಎ ಗ್ರೇಡ್" ಗ್ರಾಮ ಪಂಚಾಯಿತಿ. ಆದರೆ ಈ ಗ್ರಾಮದ ಒಳ ಹೊಕ್ಕರೆ ಕಾಣಸಿಗುವ ದೃಶ್ಯವೇ ಬೇರೆ. ಮಹಾನಗರದಂಥ ಬೆಂಗಳೂರು ಮಾತ್ರವಲ್ಲ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಗ್ರಾಮಗಳಲ್ಲಿ ಕೂಡ ಸೂಕ್ತ ಕಸ ವಿಲೇವಾರಿಯಾಗದೇ ಕಸದ ಸಮಸ್ಯೆ ದೊಡ್ಡದಾಗಿ ಬೆಳೆಯುತ್ತಿದೆ.
ಕೋಡಂಬಳ್ಳಿ ಗ್ರಾಮ ಪಂಚಾಯಿತಿ ಪ್ರಮುಖ ವಾಣಿಜ್ಯ ಕೇಂದ್ರವಾದ ಚನ್ನಪಟ್ಟಣ-ಹಲಗೂರು ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕೆಎಸ್ ಆರ್ ಟಿಸಿ ನಿಲ್ದಾಣದ ಬಳಿಯೂ ಕಸವನ್ನು ಗುಡ್ಡೆ ಹಾಕುತ್ತಿದ್ದಾರೆ. ಜೊತೆಗೆ ತ್ಯಾಜ್ಯವನ್ನು ಸುಡಬಾರದು ಎಂಬ ನಿಯಮ ಇದ್ದರೂ ಕಸದ ಗುಡ್ಡೆಗೆ ಬೆಂಕಿ ಹಾಕುವ ಮೂಲಕ ತ್ಯಾಜ್ಯವನ್ನು ಹೊರ ಸಾಗಿಸದೆ, ಅಲ್ಲಿಯೇ ಸುಟ್ಟು ಹಾಕಲಾಗುತ್ತಿದೆ.
ಕಸ ವಿಲೇವಾರಿಗೆ ಪಂಚಾಯ್ತಿಯಿಂದ ಹರಿಯುತ್ತದೆ ಹಣ
ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಸುಮಾರು ಒಂದು ಟನ್ ನಷ್ಟು ತ್ಯಾಜ್ಯವನ್ನು ಬೇರೆಡೆ ಸಾಗಿಸಿ, ವಿಲೇವಾರಿ ಮಾಡಲು ಸಾವಿರಾರು ರೂ.ಗಳನ್ನು ಪಂಚಾಯಿತಿ ವತಿಯಿಂದ ವ್ಯಯಿಸಲಾಗುತ್ತಿದೆ. ಆದರೆ, ಇದು ಪಂಚಾಯಿತಿ ಕಡತದಲ್ಲಿನ ಖರ್ಚು ಮಾಡುವ ಲೆಕ್ಕಕ್ಕೆ ಸೀಮಿತವಾಗಿದ್ದು, ಕೆಲವೊಮ್ಮೆ ತ್ಯಾಜ್ಯವನ್ನು ಕೋಡಂಬಳ್ಳಿ ಕೆರೆ ಏರಿಯ ಮೇಲೆ ರಾತ್ರಿ ವೇಳೆ ಸುರಿಯಲಾಗುತ್ತಿದೆ ಎನ್ನುವ ಆರೋಪ ಕೂಡ ಕೇಳಿ ಬಂದಿದೆ.
ಇದುವರೆಗೂ ಕ್ರಮ ತೆಗೆದುಕೊಂಡಿಲ್ಲ
ಈ ಬಗ್ಗೆ ಪ್ರತಿಕ್ರಿಯೆ ನೀಡುವ ಗ್ರಾ.ಪಂ. ಅಧಿಕಾರಿಗಳು ಹಾಗೂ ಸಿಬ್ಬಂದಿ, ಕೆರೆಯ ಏರಿ ಮೇಲೆ ಅಂಗಡಿ ಮಾಲೀಕರು ಕಸವನ್ನು ನೇರವಾಗಿ ಹಾಕುತ್ತಾರೆ ಎಂದು ಸಬೂಬು ಹೇಳುತ್ತಾರೆ. ಆದರೆ, ಕಸವನ್ನು ಕೆರೆಯ ಏರಿ ಮೇಲೆ ಹಾಕುವ ಅಂಗಡಿ ಮಾಲೀಕರ ಮೇಲೂ ಇದುವರೆಗೆ ಯಾವುದೇ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿಲ್ಲ ಎನ್ನುವ ದೂರು ಕೂಡ ಕೇಳಿಬಂದಿದೆ. ಕಳೆದ ಹಲವಾರು ವರ್ಷಗಳಿಂದ ಕೆರೆ ಏರಿ ಮೇಲೆ ತ್ಯಾಜ್ಯ ಸುರಿಯಲಾಗುತ್ತಿದೆ. ಇದರಿಂದ ಕೆರೆಯ ಅಂಗಳ ಮತ್ತು ಆಸುಪಾಸಿನ ಜಮೀನುಗಳು ಕಲುಷಿತವಾಗುತ್ತಿವೆ.
ಕಸ ಸುಟ್ಟಿದ್ದಕ್ಕಾಗಿ ಮಥುರಾದಲ್ಲಿ 16 ರೈತರ ಬಂಧನ
ಪಿಡಿಒಗಳು ಇದ್ದರೂ ಸಿಗುವುದು ಅಪರೂಪ
ತ್ಯಾಜ್ಯ ಹಾಕುವ ಕೋಳಿ ಅಂಗಡಿ ಮಾಲೀಕರು ಸೇರಿದಂತೆ ಯಾರೊಬ್ಬರ ಮೇಲೂ ಕ್ರಮ ಜರುಗಿಸುವ ಅಥವಾ ಕನಿಷ್ಠ ಒಂದು ನೋಟೀಸ್ ನೀಡುವ ಕೆಲಸವನ್ನು ಪಂಚಾಯಿತಿ ಅಧಿಕಾರಿಗಳು ಮಾಡಿಲ್ಲ. ಇನ್ನು ಅಂಗಡಿ ಬೀದಿಯಲ್ಲಿ ಅಮಾಲಿಗಳು ಸ್ವಚ್ಛಗೊಳಿಸಿ, ಕಸವನ್ನು ಪಂಚಾಯಿತಿ ಅಸುಪಾಸಿನಲ್ಲಿ ಗುಡ್ಡೆ ಹಾಕುತ್ತಿದ್ದಾರೆ. ಕಸದ ಗುಡ್ಡೆ ವಾರಗಟ್ಟಲೆ ಇಲ್ಲಿಂದ ವಿಲೇವಾರಿ ಆಗದೇ ಕೊಳೆಯುವುದರಿಂದ ರಸ್ತೆಯಲ್ಲಿ ಸಂಚರಿಸುವುದೇ ಕಷ್ಟವಾಗಿದೆ ಎನ್ನುತ್ತಾರೆ ಸ್ಥಳೀಯರು. ಇಬ್ಬರು ಪಿಡಿಓಗಳು ಇದ್ದರೂ ಜನರಿಗೆ ಅವರು ಸಿಗುವುದೇ ಅಪರೂಪವಾಗಿದೆ. ತಿಂಗಳ ಅವಧಿಗೆ ರಜೆ ಮೇಲೆ ತೆರಳಿದ್ದ ಶಿವಲಿಂಗಯ್ಯ ಎಂಬುವವರು ಮತ್ತೆ ಕೆಲಸಕ್ಕೆ ಹಾಜರಾಗಿದ್ದಾರೆ. ಇಲ್ಲಿ ಪ್ರಭಾರ ವಹಿಸಿಕೊಂಡಿದ್ದ ಹೊಂಗನೂರು ಪಂಚಾಯಿತಿ ಪಿಡಿಓ ಭಾಗ್ಯಲಕ್ಷ್ಮಮ್ಮ ಕೂಡ ರಜೆ ಮೇಲೆ ತೆರಳಿದ್ದ ಶಿವಲಿಂಗಯ್ಯಗೆ ಅಧಿಕಾರ ಕೊಟ್ಟಿಲ್ಲ.
ಇನ್ನಷ್ಟು ಸಮಸ್ಯೆಗಳ ಉದ್ಭವ
ಈ ಕುರಿತು ಪ್ರಶ್ನಿಸಿದರೆ, ಪಿಡಿಓ ಶಿವಲಿಂಗಯ್ಯ ಅವರು ಇನ್ನೂ ತಾವು ಭಾಗ್ಯಲಕ್ಷ್ಮಮ್ಮ ಅವರಿಂದ ಅಧಿಕಾರವನ್ನು ಹಸ್ತಾಂತರ ಮಾಡಿಕೊಂಡಿಲ್ಲ ಎಂದು ಉತ್ತರಿಸುತ್ತಾರೆ. ಯಾವುದಾದರೂ ಚೆಕ್ ಅಥವಾ ದಾಖಲೆಗಳಿಗೆ ಸಹಿ ಬೇಕೆಂದರೆ ಜನತೆ ಭಾಗ್ಯಲಕ್ಷ್ಮಮ್ಮ ಅವರು ಕರ್ತವ್ಯ ನಿರ್ವಹಿಸುವ ಹೊಂಗನೂರು ಗಾ.ಪಂ. ಅಥವಾ ಚನ್ನಪಟ್ಟಣದಲ್ಲಿ ಅವರು ಹೇಳಿದ ಸ್ಥಳಕ್ಕೆ ಹೋಗಿ ಸಹಿ ಪಡೆಯಬೇಕಾದ ಪರಿಸ್ಥಿತಿ ಇದೆ. ಹೆಸರಿಗೆ ಎ-ಗ್ರೇಡ್ ಪಂಚಾಯಿತಿ ಎಂದು ಕರೆಸಿಕೊಂಡಿರುವ ಕೋಡಂಬಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರಿಗಳು ಹಾಗೂ ಪಂಚಾಯಿತಿ ಪ್ರತಿನಿಧಿಗಳ ಬೇಜವಾಬ್ದಾರಿಯಿಂದಾಗಿ ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿದೆ. ಇದರಿಂದ ಕಸದ ವಿಲೇವಾರಿ ಸಮಸ್ಯೆ ಒಂದೇ ಅಲ್ಲ, ಹತ್ತು ಹಲವು ಸಮಸ್ಯೆಗಳು ಪಂಚಾಯಿತಿ ವ್ಯಾಪ್ತಿಯಲ್ಲಿ ತಾಂಡವವಾಡುತ್ತಿವೆ.