ರಮೇಶ್ ಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿ ಹೊತ್ತ ಪರಮೇಶ್ವರ್
ರಾಮನಗರ, ಅಕ್ಟೋಬರ್ 24: ಮಾಜಿ ಡಿಸಿಎಂ, ಕಾಂಗ್ರೆಸ್ ಮುಖಂಡ ಡಾ.ಜಿ.ಪರಮೇಶ್ವರ ಒಡೆತನದ ಕಾಲೇಜುಗಳು ಮತ್ತು ಮನೆ ಮೇಲೆ ಐಟಿ ದಾಳಿ ನಡೆದ ಸಮಯದಲ್ಲಿ ಐಟಿ ವಿಚಾರಣೆಗೆ ಹೆದರಿ ಆತ್ಮಹತ್ಯೆಗೆ ಶರಣಾಗಿದ್ದ ಪರಮೇಶ್ವರ ಆಪ್ತ ಸಹಾಯಕ ರಮೇಶ್ ಅವರ ಮಕ್ಕಳ ಶಿಕ್ಷಣದ ಸಂಪೂರ್ಣ ಜವಾಬ್ದಾರಿಯನ್ನು ಹೊರುವುದಾಗಿ ಪರಮೇಶ್ವರ್ ತಿಳಿಸಿದ್ದಾರೆ.
ರಮೇಶ್ ಅಸಹಜ ಸಾವು; ಕೊನೆ ಎರಡು ಕರೆ, ಡೈರಿಯಲ್ಲಿ ಏನಿದೆ?
ರಮೇಶ್ ಪುಣ್ಯತಿಥಿ ಕಾರ್ಯ ಅವರ ಸ್ವಗ್ರಾಮ ರಾಮನಗರದ ಮೆಳೇಹಳ್ಳಿ ಗ್ರಾಮದಲ್ಲಿ ನಿನ್ನೆ ನಡೆದಿದ್ದು, ಅಲ್ಲಿಗೆ ಭೇಟಿ ನೀಡಿದ್ದ ಪರಮೇಶ್ವರ್ ರಮೇಶ್ ಕುಟುಂಬದ ಜೊತೆ ಮಾತುಕತೆ ನಡೆಸಿದರು.
ಇದೇ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಡಾ.ಜಿ.ಪರಮೇಶ್ವರ, "ನನ್ನ ಆಪ್ತ ಸಹಾಯಕ ರಮೇಶ್ ಸಾವು ಬಹಳ ನೋವು ತಂದಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ಈ ನಷ್ಟ ಭರಿಸುವ ಶಕ್ತಿ ಕೊಡಲಿ ಭಗವಂತ. ಅವರ ಇಬ್ಬರು ಮಕ್ಕಳಾದ ಶ್ರೇಯಾ, ಮೋಹಿತ್ ವಿದ್ಯಾಭ್ಯಾಸದ ಜವಾಬ್ದಾರಿಯನ್ನ ನಾನೇ ವಹಿಸಿಕೊಳ್ಳುತ್ತೇನೆ. ಅವರ ಕುಟುಂಬಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ನನ್ನ ಕರ್ತವ್ಯ" ಎಂದರು.