ಸ್ನೇಹಿತನ ನೆನಪಿಗೆ ಹತ್ತೇ ದಿನದಲ್ಲಿ ಮನೆ ಕಟ್ಟಿ ಕುಟುಂಬದ ಕೈ ಹಿಡಿದ ದೋಸ್ತರು
ರಾಮನಗರ, ಜೂನ್ 03: "ಉಪ್ಪಿಗಿಂತ ರುಚಿ ಇಲ್ಲ, ಸ್ನೇಹಕ್ಕಿಂತ ಬಂಧುವಿಲ್ಲ' ಎನ್ನುತ್ತಾರೆ. ಹೌದು, ರಕ್ತ ಸಂಬಂಧಗಳನ್ನು ಮೀರಿದ್ದು ಈ ಸ್ನೇಹ ಸಂಬಂಧ. ಇದಕ್ಕೆ ಸಾಕ್ಷಿಯಂತಿದೆ ಈ ಒಂದು ಕೆಲಸ. ಸ್ನೇಹಿತನ ಅಕಾಲಿಕ ಮರಣದಿಂದ ದಿಕ್ಕಿಲ್ಲದಂತಾಗಿದ್ದ ಆತನ ಕುಟುಂಬಕ್ಕೆ ಸ್ನೇಹಿತರು ಕೇವಲ ಹತ್ತು ದಿನದಲ್ಲೇ ಸುಂದರವಾದ ಮನೆ ಕಟ್ಟಿಸಿ ಅದರಲ್ಲೇ ಸ್ನೇಹಿತನ ಪುಣ್ಯ ತಿಥಿ ಮಾಡುವ ಮೂಲಕ ಸ್ನೇಹಕ್ಕೆ ಸಾವಿಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.
Recommended Video
ತಾಲ್ಲೂಕಿನ ಸಿಂಗರಾಜಿಪುರದ ಯುವಕರು ತಮ್ಮ ಗೆಳೆಯ ಶ್ರೀನಿವಾಸ್ ನ ಅಕಾಲಿಕ ಮರಣದಿಂದ ಅನಾಥವಾಗಿದ್ದ ಆತನ ತಂದೆ ತಾಯಿಗೆ ಅಸರೆಯಾಗಿ ದಾನಿಗಳ ಸಹಾಯ ಪಡೆದು ಹತ್ತೇ ದಿನದಲ್ಲಿ ಮನೆ ನಿರ್ಮಿಸಿ ಕ್ಷೇತ್ರದ ಶಾಸಕರು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಂದ ಉದ್ಘಾಟನೆ ನೆರವೇರಿಸಿದರು.
ಹೃದಯಾಘಾತದಿಂದ ಮರಣ ಹೊಂದಿದ ಮಗ
ಗ್ರಾಮದ ವೃದ್ಧ ದಂಪತಿಗಳಾದ ಸಣ್ಣಮ್ಮ ಮತ್ತು ಲಂಕಣ್ಣ ದಂಪತಿಗೆ ಆಸರೆಯಾಗಿದ್ದ ಒಬ್ಬನೇ ಮಗ ಶ್ರೀನಿವಾಸ್ (30) ಮೇ.21 ರಂದು ಹೃದಯಾಘಾತದಿಂದ ಅಕಾಲಿಕ ಮರಣಹೊಂದಿದ್ದರು. ವಾಸಿಸಲು ಸ್ವಂತ ಸೂರಿಲ್ಲದ ಶ್ರೀನಿವಾಸ್ ಕುಟುಂಬ ಬೇರೆಯವರ ಗುಡಿಸಲಿನಲ್ಲಿ ವಾಸಿಸುತ್ತಿತ್ತು. ಈ ನಡುವೆ ಮನೆಗೆ ಆಧಾರವಾಗಿದ್ದ ಮಗನನ್ನು ಕಳೆದುಕೊಂಡು ಕುಟುಂಬ ಕಂಗಾಲಾಯಿತು.
ಉಡುಪಿ ಯುವಕನ ಸಾವಿಗೆ ರಾಜಕೀಯದ ಬಣ್ಣ; ಸ್ಥಳೀಯ ಬಿಜೆಪಿ ಯುವಕರ ಕೈವಾಡ?
ಗೆಳೆಯನ ನೆನಪಿಗೆ ಮನೆ ಕಟ್ಟಿದ ಸ್ನೇಹಿತರು
ಇದೀಗ ಆ ಸ್ನೇಹಿತನ ಕುಟುಂಬಕ್ಕೆ ಆಸರೆಯಾಗಿ ಆತನ ಸ್ನೇಹಿತರು ನಿಂತರು. ಗ್ರಾಮದ ಈ ಯುವಕರು ತಮ್ಮ ಗೆಳೆಯನ ತಂದೆ ತಾಯಿಗೆ ಮನೆಯನ್ನು ಕಟ್ಟಿಸಿಕೊಟ್ಟಿದ್ದಾರೆ. ವ್ಯವಸಾಯ ಮಾಡಲು ಭೂಮಿ ಇಲ್ಲದೆ, ವಾಸಿಸಲು ಸ್ವಂತ ಮನೆ ಇಲ್ಲದೆ ಬೇರೆಯವರ ಗುಡಿಸಲಿನಲ್ಲಿ ಜೀವನ ಸಾಗಿಸುತ್ತಿದ್ದ ಕುಟುಂಬಕ್ಕೆ ಶ್ರೀನಿವಾಸ್ ಒಬ್ಬನೇ ಆಧಾರವಾಗಿದ್ದ. ಆತನೇ ದುಡಿದು ಕುಟುಂಬವನ್ನು ಸಲಹುತ್ತಿದ್ದ. ಇದ್ದ ಸ್ವಲ್ಪ ಜಾಗದಲ್ಲೇ ಸ್ವಂತ ಮನೆ ಕಟ್ಟುವ ಕನಸು ಕಂಡಿದ್ದ. ಅದಕ್ಕಾಗಿ ಅಡಿಪಾಯವನ್ನೂ ಹಾಕಿದ್ದ. ಅದರೆ ವಿಧಿಯಾಟದ ಮುಂದೆ ಸೋತು ಬಾಳ ಪಯಣ ಮುಗಿಸಿದ್ದ.
ಮಾಜಿ ಸಿಎಂ ಕುಮಾರಸ್ವಾಮಿ ಅವರಿಂದ ಉದ್ಘಾಟನೆ
ಶ್ರೀನಿವಾಸ್ ಕನಸು ನನಸು ಮಾಡುವ ಪಣ ತೊಟ್ಟ ಆತನ ಸ್ನೇಹಿತರು ದಾನಿಗಳ ನೆರವು ಪಡೆದು ತಮ್ಮ ಹಣವನ್ನೂ ಹಾಕಿ ಜೊತೆಗೆ ಶ್ರಮದಾನದಿಂದ ಮನೆ ಕಟ್ಟಿಸಿದ್ದಾರೆ. ಮೃತನ ಕುಟುಂಬಕ್ಕೆ 50 ಸಾವಿರ ನೆರವು ನೀಡಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರಿಂದ ಮನೆ ಉದ್ಘಾಟನೆ ಮಾಡಿಸಿ ಸ್ನೇಹ ಅಮರ ಎಂದಿದ್ದಾರೆ.
ಇತರರಿಗೂ ಮಾದರಿಯಾದ ಕಾರ್ಯ
ಶ್ರೀನಿವಾಸ್ ಗೆಳೆಯರಾದ ಸುನೀಲ್ ಹಾಗೂ ಸಂಗಡಿಗರ ಕಾರ್ಯಕ್ಕೆ ಕುಮಾರಸ್ವಾಮಿ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಶ್ರೀನಿವಾಸನ ತಂದೆ ತಾಯಿಯ ಜೀವನಾಧಾರಕ್ಕೆ ಹಸು ಕೊಡಿಸುವ ಭರವಸೆ ನೀಡಿದ್ದಾರೆ. ಕಷ್ಟಕ್ಕೆ ಬಂಧುಗಳೇ ಆಗದ ಈ ಕಾಲದಲ್ಲಿ ಸ್ನೇಹಕ್ಕಾಗಿ, ವೃದ್ಧ ದಂಪತಿ ಕೊನೆಗಾಲದಲ್ಲಿ ನೆಮ್ಮದಿಯಾಗಿ ಜೀವನ ಸಾಗಿಸಲು ಸೂರು ಕಟ್ಟಿಸಿಕೊಟ್ಟಿರುವ ಗ್ರಾಮದ ಯುವಕರ ಕಾಳಜಿ ಇತರರಿಗೆ ಮಾದರಿಯಾಗಿದೆ.