ಇ.ಡಿ ತನಿಖೆ ಬೇಡ ಎನ್ನುವುದು ಕಾಂಗ್ರೆಸ್ ನಾಯಕರ ಗೂಂಡಾಗಿರಿ: ಈಶ್ವರಪ್ಪ
ರಾಮನಗರ, ಜೂನ್ 17: ''ಯಾವುದೇ ವ್ಯಕ್ತಿಯ ವಿರುದ್ದ ಎಫ್.ಐ.ಆರ್ ದಾಖಲಾದ ಮೇಲೆ ತನಿಖೆ ಮಾಡಬೇಡಿ ಎಂದು ಒತ್ತಡ ಹೇರುವುದು ಕೂಡ ಗೂಂಡಾಗಿರಿ'' ಎಂದು ಮಾಜಿ ಸಚಿವ ಈಶ್ವರಪ್ಪ ಕಾಂಗ್ರೆಸ್ ಹೋರಾಟದ ವಿರುದ್ಧ ಕಿಡಿಕಾರಿದ್ದಾರೆ.
ಜಿಲ್ಲೆಯ ಮಾಗಡಿ ತಾಲ್ಲೂಕಿನ ಸಾವನದುರ್ಗದ ಲಕ್ಷ್ಮೀನರಸಿಂಹ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಮಾಜಿ ಸಚಿವ ಈಶ್ವರಪ್ಪ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ರಾಹುಲ್ ಗಾಂಧಿ ವಿರುದ್ಧದ ಇಡಿ ತನಿಖೆಯನ್ನು ಖಂಡಿಸಿ ಕಾಂಗ್ರೆಸ್ ನಡೆಸುತ್ತಿರುವ ಹೋರಾಟವನ್ನು ಗೂಂಡಾಗಿರಿಗೆ ಹೋಲಿಸಿದರು.
National Herald Case: ಇವರೇ ನೋಡಿ ರಾಹುಲ್ ಗಾಂಧಿ ವಿಚಾರಣೆ ನಡೆಸಿದ 'ಇಡಿ' ಕಿಲಾಡಿ!
" ನ್ಯಾಷನಲ್ ಹೆರಾಲ್ಡ್ ಹಗರಣದಲ್ಲಿ ಸುಮಾರು 2 ಸಾವಿರ ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ. ಅದನ್ನು ತನಿಖೆ ಮಾಡಬೇಡಿ ಎಂದು ಪ್ರತಿಭಟನೆಯ ಮೂಲಕ ಒತ್ತಡ ಹೇರಲು ಹೊರಟಿರುವ ಕಾಂಗ್ರೆಸ್ ಹೋರಾಟ ಸಂವಿಧಾನಕ್ಕೆ ಮಾಡುತ್ತಿರುವ ದೊಡ್ಡ ಅಪಚಾರ. ಆರೋಪದ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಅದನ್ನು ತನಿಖೆ ಮಾಡುತ್ತಾರೆ. ಅವರು ತನಿಖೆಯನ್ನು ಸಮರ್ಥವಾಗಿ ಎದುರಿಸಿ, ತಾವು ತಪ್ಪಿತಸ್ಥರಲ್ಲ ಎಂದು ಸಾಬೀತುಪಡಿಸಿಕೊಂಡರೆ ಸಂತೋಷ. ಅದನ್ನು ಬಿಟ್ಟು ನಮ್ಮನ್ನ ಕರೆಯಬೇಡಿ, ತನಿಖೆ ಮಾಡಬೇಡಿ ಅನ್ನುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಿಯಿಲ್ಲ" ಎಂದು ಸಚಿವ ಈಶ್ವರಪ್ಪ ತಿಳಿಸಿದರು.
''ಇಡಿ ವಿಚಾರಣೆ ಮುಗಿಸಿ ರಾಹುಲ್ ಗಾಂಧಿ ಹೊರಬಂದು ನೀಡಿದ ಹೇಳಿಕೆ ನಿಜಕ್ಕೂ ಅಚ್ಚರಿಯನ್ನುಂಟುಮಾಡಿದೆ. ಹೆರಾಲ್ಡ್ ಹಗರಣದಲ್ಲಿ ಹಿರಿಯ ಕಾಂಗ್ರೆಸ್ ನಾಯಕ ದಿವಂಗತ ಮೋತಿಲಾಲ್ ವೋರಾ ಪಾತ್ರ ಇದೆ ಎಂದು ಹೇಳಿದ್ದಾರೆ. ಆದರೆ ವೋರಾರ ಮಗ ಈ ಹಗರಣದಲ್ಲಿ ನಮ್ಮ ತಂದೆಯವರ ಪಾತ್ರವಿಲ್ಲ, ನಮ್ಮ ತಂದೆ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ'' ಎಂದು ಸ್ಪಷ್ಟಪಡಿಸಿದ್ದಾರೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು.
ನ್ಯಾಯಾಲಯದ ಆದೇಶದ ಮೇಲೆ ಇಡಿ ತನಿಖೆ
ನ್ಯಾಯಾಲಯದ ಆದೇಶದ ಮೇಲೆ ಇಡಿ ರಾಹುಲ್ ಗಾಂಧಿ ಅವರಿಗೆ ನೋಟಿಸ್ ನೀಡಿರುವುದನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ಕಾರಣ ಎಂಬಂತೆ ಕಾಂಗ್ರೆಸ್ ದೇಶದೆಲ್ಲೆಡೆ ಬಿಂಬಿಸುತ್ತಿರುವುದು ಖಂಡನೀಯ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆರ್.ವಿ.ಸಿ.ಎಸ್ ಕಲ್ಯಾಣ ಮಂಟಪದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತಾಡಿ, "ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಮತ್ತು ರಾಹುಲ್ ವಿಚಾರಣೆಗೆ ಇಡಿ ನೋಟೀಸ್ ನೀಡಿ ವಿಚಾರಣೆಗೆ ಕರೆದಿದ್ದಾರೆ. ಆದರೆ ಕಾಂಗ್ರೆಸ್ ಮುಖಂಡರು ಇಡಿ ವಿಚಾರಣೆಗೆ ಸಹಕರಿಸುವ ಬದಲು ಗೂಂಡಾ ವರ್ತನೆಯಂತೆ ನಡೆದುಕೊಳ್ಳುವ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ" ಎಂದು ಆರೋಪಿಸಿದರು.
ನೆಹರೂ-ಗಾಂಧಿ ವಂಶಸ್ಥರ ಭವಿಷ್ಯ ಮುಗಿಸಲು ಬಿಜೆಪಿ ಯತ್ನ: ಶಿವಸೇನೆ
ನ್ಯಾಷನಲ್ ಹೆರಾಲ್ಡ್ ಸಂಸ್ಥೆಯಲ್ಲಿ ಹಣದ ಅಕ್ರಮ ವರ್ಗಾವಣೆ ನಡೆದಿದೆ ಎಂದು ಸುಬ್ರಮಣ್ಯಸ್ವಾಮಿ ನೀಡಿದ ಖಾಸಗಿ ದೂರಿನ ಮೇರೆಗೆ ಇಡಿ ತನಿಖೆ ನಡೆಸುತ್ತಿದೆ. ಅಲ್ಲದೇ ನ್ಯಾಯಾಲಯ ಕೂಡ ಹೆರಾಲ್ಡ್ ಹಗರಣದ ತನಿಖೆಗೆ ತಡೆ ನೀಡಲು ಸಾಧ್ಯವಿಲ್ಲ, ತನಿಖೆ ಎದುರಿಸಿ ಎಂದು ಸ್ಪಷ್ಟವಾಗಿ ತಿಳಿಸಿದೆ. ಹಾಗಾಗಿ ನ್ಯಾಯಾಲಯದ ನಿರ್ದೇಶನ ಮೇರೆಗೆ ಇಡಿ ತನಿಖೆ ಮುಂದುವರೆಸಿದೆ ಅಷ್ಟೇ ಎಂದರು.