"ರಾಜಕೀಯ ದುರುದ್ದೇಶಕ್ಕಾಗಿ ರಾಮನಗರದಲ್ಲಿ ಮದುವೆ ಮಾಡುತ್ತಿಲ್ಲ'
ರಾಮನಗರ ಜಿಲ್ಲೆಯೊಂದಿಗೆ ನನಗಿರುವ ಬಾಂಧವ್ಯಕ್ಕೆ ಕಟ್ಟುಬಿದ್ದು ನನ್ನ ಮಗನ ಮದುವೆ ಇಲ್ಲಿ ಮಾಡುತ್ತಿದ್ದೇನೆ ಹೊರತು ವೈಯುಕ್ತಿಕ ಅಥವಾ ರಾಜಕೀಯ ದುರುದ್ದೇಶದಿಂದ ಅಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ರಾಮನಗರ, ಮಾರ್ಚ್ 03: ರಾಮನಗರ ಜಿಲ್ಲೆಯೊಂದಿಗೆ ನನಗಿರುವ ಬಾಂಧವ್ಯಕ್ಕೆ ಕಟ್ಟುಬಿದ್ದು ನನ್ನ ಮಗನ ಮದುವೆ ಇಲ್ಲಿ ಮಾಡುತ್ತಿದ್ದೇನೆ ಹೊರತು ವೈಯುಕ್ತಿಕ ಅಥವಾ ರಾಜಕೀಯ ದುರುದ್ದೇಶದಿಂದ ಅಲ್ಲ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ರಾಮನಗರ ನನ್ನ ಕರ್ಮ ಭೂಮಿ, ನಾನು ಮಣ್ಣಿಗೆ ಹೋದರೂ ಇಲ್ಲಿಯೇ ಹೋಗೋದು ಎಂದರು. ನಮ್ಮಲ್ಲಿ ಯಾವುದೇ ಶುಭ ಸಮಾರಂಭ ನಡೆದರೆ ಶಾಸ್ತ್ರೋಕ್ತವಾಗಿ ನಡೆಸುವ ಪ್ರಕ್ರಿಯೆ ಮೊದಲಿನಿಂದಲೂ ದೊಡ್ಡವರು ನಡೆಸಿಕೊಂಡು ಬಂದಿದ್ದು, ಜ್ಯೋತಿಷಿಗಳ ಸಲಹೆಯಂತೆ ತಮ್ಮ ಸಮಾಧಾನಕ್ಕೆ ಸ್ಥಳ ವೀಕ್ಷಣೆಗೆ ಎಚ್.ಡಿ.ದೇವೇಗೌಡರು ಆಗಮಿಸಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದರು.
ನಗರದ ಹೊರ ವಲಯದ ಜಾನಪದ ಲೋಕದ ಬಳಿ ನಡೆಯುತ್ತಿರುವ ನಿಖಿಲ್ ಮದುವೆಯ ಸಪ್ತಪದಿ ಮಂಟಪ ಸ್ಥಳ ವೀಕ್ಷಣೆಗಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರೊಂದಿಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದರು, ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.
ತಮ್ಮ ಮೊಮ್ಮಗನ ಮದುವೆ ಬಯಲಿನಲ್ಲಿ ಎಲ್ಲೋ ಹೊಸ ಜಾಗದಲ್ಲಿ ಮಾಡ್ತಿರೋದು ಪ್ರಶಸ್ತ್ಯವೋ ಅಲ್ಲವೋ ಎನ್ನುವುದರ ಬಗ್ಗೆ ಖುದ್ದು ನೋಡಲಿಕ್ಕೆ ಅಷ್ಟೇ ದೇವೇಗೌಡರು ಬಂದಿದ್ದಾರೆ ಎಂದರು.
ಮುಂದೆ ನಿಖಿಲ್ ರಾಮನಗರದಿಂದಲೇ ಸ್ಪರ್ಧಿಸಬಹುದು: ಎಚ್ಡಿಡಿ
ನನ್ನ ಮಗನ ಮದುವೆಗೂ ರಾಜಕಾರಣಕ್ಕೂ ಸಂಬಂಧ ಇಲ್ಲಾ ರಾಜಕೀಯ ದೃಷ್ಟಿಯಿಂದ ಇಲ್ಲಿ ಮದುವೆ ಮಾಡ್ತಿಲ್ಲಾ , ನಮಗೆ ರಾಜಕೀಯ ಪುನರ್ಜನ್ಮ ನೀಡಿದ ಜನತೆಯ ಋಣ ತೀರಿಸುವ ಸಲುವಾಗಿ ಇಲ್ಲಿ ಮಾಡ್ತಿದ್ದೇವೆ ಅಷ್ಟೇ ಎಂದರು.
ಕ್ಷೇತ್ರದ ಜನತೆಗೆ ಮದುವೆಯ ಉಡುಗೊರೆ ನೀಡುತ್ತಾರೆ ಎನ್ನುವ ಸುದ್ದಿಗೆ ಪ್ರತಿಕ್ರಿಯೆ ನೀಡಿದ ಎಚ್ಡಿಕೆ, ಈ ಬಗ್ಗೆ ನಮ್ಮ ಪಕ್ಷದ ಸ್ಥಳೀಯ ಮುಖಂಡರು ಚರ್ಚೆ ಮಾಡಿ ತೀರ್ಮಾನಿಸುತ್ತಾರೆ. ಇದು ನಾನು ಮಾಡುತ್ತಿರುವ ಕಾರ್ಯಕ್ರಮ ಅಲ್ಲ, ನನ್ನ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಮಾಡುತ್ತಿರುವ ಕಾರ್ಯಕ್ರಮವಾಗಿದೆ ಎಂದು ತಿಳಿಸಿದರು.
ನಿಖಿಲ್ ಕಲ್ಯಾಣ: ಯುವರಾಜನ ರಾಜಕೀಯಕ್ಕೆ ಮತ್ತೊಂದು ಅಡಿಗಲ್ಲು
ನಾನು ನಿಖಿಲ್ ಗೆ ಮಂಡ್ಯದಲ್ಲಿ ಸ್ಪರ್ಧೆ ಮಾಡದಂತೆ ತಿಳಿಸಿದ್ದೆ ಆದರೆ ಕಾರ್ಯಕರ್ತರು ಮತ್ತು ಮುಖಂಡರ ಒತ್ತಡಕ್ಕೆ ಮಣಿದು ನಿಲ್ಲಿಸಬೇಕಾಯಿತು ಅಷ್ಟೇ ಎಂದ ಅವರು, ದೈವೇಚ್ಚೆ ಇದ್ದ ಹಾಗೆ ನಡೆಯುತ್ತೆ, ಚುನಾವಣೆಗೂ ಮದುವೆಗೂ ಸಂಬಂಧವಿಲ್ಲ ಮುಂದಿನದರ ಬಗ್ಗೆ ಈಗ ಹೇಳೋಕಾಗಲ್ಲ ಎಂದು ಭವಿಷ್ಯದಲ್ಲಿ ರಾಮನಗರಕ್ಕೆ ನಿಖಿಲ್ ಆಗಮನದ ಬಗ್ಗೆ ಜಾಣ್ಮೆ ಉತ್ತರ ನೀಡಿದರು.
ಜೆಡಿಎಸ್ ಪಕ್ಷ ಸಂಘಟನೆಗಾಗಿ ರಾಜಕೀಯ ಚಾಣಾಕ್ಷ ಪ್ರಶಾಂತ ಕಿಶೋರ್ ಜೊತೆಗೆ ಈಗಾಗಲೇ ಫೋನಿನಲ್ಲಿ ಒಂದು ಸುತ್ತಿನ ಮಾತುಕತೆ ನಡೆದಿದೆ. ಮದುವೆಯ ನಂತರ ಪೂರ್ಣ ಪ್ರಮಾಣದ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದ ಕುಮಾರಸ್ವಾಮಿ, ಮಧು ಬಂಗಾರಪ್ಪ ಅಸಮಾಧಾನಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.