ಏಕಕಾಲಕ್ಕೆ ನಾಲ್ಕು ಸ್ಫೋಟಕ ಸುದ್ದಿ ತೂರಿ ಬಿಟ್ಟ ಮಾಜಿ ಸಿಎಂ ಕುಮಾರಸ್ವಾಮಿ
ರಾಮನಗರ, ಸೆಪ್ಟೆಂಬರ್ 20: ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಶುಕ್ರವಾರ ರಾಮನಗರದಲ್ಲಿ ನಾಲ್ಕು ಸ್ಫೋಟಕ ವಿಚಾರಗಳನ್ನು ಏಕ ಕಾಲಕ್ಕೆ ತೂರಿ ಬಿಟ್ಟಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು, ಈ ಹಿಂದೆ ಬಿಜೆಪಿ ಸರಕಾರದಲ್ಲಿ ಇಂಧನ ಸಚಿವರಾಗಿದ್ದವರು ಹಗರಣ ನಡೆಸಿದ್ದರು. ಅದರ ವಿಚಾರಣೆ ನಡೆಸಿದ್ದರೆ ಡಿ.ಕೆ. ಶಿವಕುಮಾರ್ ಅವರಿಗೆ ಇಂಥ ಸ್ಥಿತಿ ಬರುತ್ತಿರಲಿಲ್ಲ ಎಂದಿದ್ದಾರೆ.
ಇನ್ನು ರಾಮನಗರದ ರಘುಮೂರ್ತಿ ಎಂಬುವವರ ವರ್ಗಾವಣೆಗಾಗಿ ಒಂದು ಕೋಟಿ ರುಪಾಯಿ ಲಂಚ ನೀಡುವುದಾಗಿ ನಾನು ಮುಖ್ಯಮಂತ್ರಿ ಆಗಿದ್ದಾಗ ಹುಡುಕಿಕೊಂಡು ಬಂದಿದ್ದರು. ದಯವಿಟ್ಟು ನೀವು ಹೊರಗೆ ಹೋಗಿ ಎಂದು ವಾಪಸ್ ಕಳುಹಿಸಿದ್ದೆ. ಈಗ ಅದೇ ರಘುಮೂರ್ತಿ ಒಂದೂ ಮುಕ್ಕಾಲು ಕೋಟಿ ರುಪಾಯಿ ಲಂಚವನ್ನು ಕೊಟ್ಟು ಯಲಹಂಕಕ್ಕೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಯಡಿಯೂರಪ್ಪ ಪತ್ನಿ ಅನುಮಾನಾಸ್ಪದ ಸಾವಿನ ಬಗ್ಗೆ ಎಚ್ ಡಿಕೆ ಪ್ರಸ್ತಾಪ
ಯಡಿಯೂರಪ್ಪ ಅವರ ಪತ್ನಿ ಮೈತ್ರಾದೇವಿಯವರು ಒಂದು ಅಡಿ ಅಗಲ ಹಾಗೂ ಒಂದು ಅಡಿ ಉದ್ದ ಮಾತ್ರ ತೆರೆದುಕೊಂಡಿರುವ ಸಂಪ್ ನ ಒಳಗೆ ಕಾಲು ಜಾರಿ ಬಿದ್ದು, ಮೃತಪಟ್ಟರು ಎಂದು ಸುದ್ದಿಯಾಗಿತ್ತು. ಇದು ಸಾಧ್ಯವಾ? ಈ ಬಗ್ಗೆ ಅನುಮಾನ ಬರುವುದಿಲ್ಲವಾ? ಎಂದಿದ್ದಾರೆ.
ಮಾತು ಮುಂದುವರಿಸಿ, ಐಎಂಎ ಹಗರಣದಲ್ಲಿ ಜಮೀರ್ ಅಹ್ಮದ್ ಖಾನ್ ನ ವಿಚಾರಣೆ ಮಾಡಿದಂತೆ ಕುಮಾರಸ್ವಾಮಿಯನ್ನೂ ವಿಚಾರಣೆ ಮಾಡಬಹುದು ಎನ್ನುತ್ತಾರೆ ಪಬ್ಲಿಕ್ ಟಿ. ವಿ. ಯ ರಂಗನಾಥ್. ಬಿಜೆಪಿಯ ಅಮಿತ್ ಶಾ ಮುಂದೆ ಹಣಕ್ಕಾಗಿ ನಿಲ್ಲುವ ಇವರು ನನ್ನ ಬಗ್ಗೆ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಈ ಎಲ್ಲ ಆರೋಪವನ್ನು ವೇದಿಕೆ ಮೇಲೆ ಮಾಡಿದ್ದು, ವಿಡಿಯೋದಲ್ಲಿ ದಾಖಲಾಗಿದೆ. ಕುಮಾರಸ್ವಾಮಿ ವೇದಿಕೆ ಮೇಲೆ ಏನಂದರು ಎಂಬ ಯಥಾವತ್ ಮಾತು ಮುಂದಿನ ಸ್ಲೈಡ್ ಗಳಲ್ಲಿ ಇವೆ.
ಅಂಥವರು ಇವತ್ತು ಈ ದೇಶ ಕಾಯೋರು...
"ಎಂಥೆಂಥ ಕಥೆಗಳು ನಡೆದುಹೋದ್ವು ರೀ ಈ ದೇಶದೊಳಗೆ! ಮಾಧ್ಯಮ ಮಿತ್ರರಿಗೆ ಹೇಳ್ತೀನಿ, ಒಂದಡಿ ಒಂದಡಿ ನೀರಿನ ಟ್ಯಾಂಕ್ ನಲ್ಲಿ ಕಾಲು ಜಾರಿ ಬಿದ್ದು ಸಾಯೋದು ಎಲ್ಲಾದ್ರೂ ಉಂಟೇನ್ರೀ? ಅಂಥದ್ದನ್ನೇ ಈ ಜನ ಮೆಚ್ಚಿಕೊಂಡಿದ್ದಾರೆ ಈ ರಾಜ್ಯದಲ್ಲಿ. ಅಂಥದ್ದನ್ನೇ ಮೆಚ್ಚಿದ್ದಾರೆ. ಒಂದಡಿ ಒಂದಡಿ ಜಾಗದಲ್ಲಿ, ಸಣ್ಣ ಜಾಗದಲ್ಲಿ... ಅಂಥವರು ಇವತ್ತು ಈ ದೇಶ ಕಾಯೋರು, ರಾಜ್ಯ ಕಾಯೋರು..."
ಒಂದೂ ಮುಕ್ಕಾಲು ಕೋಟಿ ಕೊಟ್ಟು ಪೋಸ್ಟಿಂಗ್
ನಮ್ಮವರೇ ಬರ್ತಾರೆ ರಾಮನಗರದಲ್ಲಿ ಕೆಲವರು, ಅಣ್ಣ ಇವನ್ನ ಯಲಹಂಕಗೆ ಹಾಕ್ಬಿಟ್ರೆ ಒಂದು ಕೋಟಿ ಇವನ ಕೈಲಿ ಕೊಡಿಸ್ತೀವಿ ಅಂತಾರೆ. ನಮಸ್ಕಾರ ಕಣ್ರಪ್ಪ ಅಂತ ಹೇಳಿ ಕಳಿಸ್ದೆ. ಅವನು ಒಂದು ಕೋಟಿ ನಂಗೆ ಕೊಟ್ಟು, ಆ ಒಂದು ಕೋಟಿ ಸಂಪಾದನೆ ಯಾರತ್ರ ಮಾಡ್ತಾನೆ ಅಂದೆ. ಸಂಪಾದನೆ ಮಾಡೋದು ಈ ಬಡವರ ಹತ್ರನೇ, ಮತ್ತೆ ಜೇಬಿಗೆ ಕೈ ಹಾಕ್ಬೇಕಲ್ವೆ ಅವ್ನು? ನಾನು ಉಗಿದು ಆಚೆಗಟ್ಟಿದಂಥವ್ನನ್ನ ಅಲ್ಲಿ ತೆಗೆದುಕೊಂಡು ಹೋಗಿ ಯಲಹಂಕದಲ್ಲೀಗ ತಹಶೀಲ್ದಾರ್... ಒಂದೂಮುಕ್ಕಾಲು ಕೋಟಿ ಕೊಡ್ತಾರೆ ಯಾರೀ ಕೇಳೋರು ಈ ದೇಶದೊಳಗೆ? ಒಂದೂಮುಕ್ಕಾಲು ಕೋಟಿ ಕೊಟ್ಟು ಈಗ ಅಲ್ಲಿ ಪೋಸ್ಟಿಂಗ್.
ಡಿಕೆಶಿ ಅಂದು ತನಿಖೆ ನಡೆಸಿದ್ದರೆ ಇಂದು ಹೀಗಾಗುತ್ತಿರಲಿಲ್ಲ; ಎಚ್ ಡಿಕೆ
ಬಿಜೆಪಿಯವರನ್ನ ಕಾಪಾಡಿದ್ದಕ್ಕೆ ಶಿವಕುಮಾರ್ ಗೆ ಕೊಟ್ಟ ಬಳುವಳಿ ಇದು
ಇವತ್ತು ಶಿವಕುಮಾರ್ ಅವರಿಗೆ ಕಳೆದ ಇಪ್ಪತ್ತೈದು ವರ್ಷಗಳಿಂದ ರಾಜಕೀಯದಲ್ಲೇನಿದ್ದಾರೆ. ಇವತ್ತು ಯಾವ ಇಡಿ, ನಮ್ಮ ಮಾಧ್ಯಮದ ಮಿತ್ರರಿಗೆ ಹೇಳ್ತಿದೀನಿ, ಶಾಲಾ ಮಕ್ಕಳಿದ್ದರು, ಕಾಲೇಜಿನ ವಿದ್ಯಾರ್ಥಿಗಳಿದ್ದರು... ಇವತ್ತು ಯಾವ ಈಗಿನ ಮುಖ್ಯಮಂತ್ರಿಗಳು ಜನವರಿ ಒಂದನೇ ತಾರೀಕು ಪತ್ರ ಬರೀತಾರೆ, ಇನ್ ಕಂ ಟ್ಯಾಕ್ಸ್ ಅಧಿಕಾರಿ, ಡೈರೆಕ್ಟರ್ ಗೆ. ಶಿವಕುಮಾರ್ ಅವರ ಮೇಲೆ ತನಿಖೆ ಮಾಡಬೇಕು ಅಂತ ಹೇಳಿ. ಯಾವ್ಯಾವ ರೀತಿ ರಾಜಕಾರಣ ನಡೆಯುತ್ತೆ ಅನ್ನೋದಕ್ಕೆ, ಮಾಧ್ಯಮದ ಸ್ನೇಹಿತರು ಬರೆದುಕೊಳ್ಳೀ ಇವತ್ತು ಹೇಳ್ತೀನಿ... ವಿದ್ಯುತ್ ಚ್ಛಕ್ತಿ ಖರೀದಿ ಮಾಡಿದ್ರಲ್ಲ ಯಡಿಯೂರಪ್ಪನವರು ಮುಖ್ಯಮಂತ್ರಿಗಳಿದ್ದಾಗ, ಶಿವಕುಮಾರ್ ಗೆ ಗಿಳಿಗೆ ಹೇಳ್ದಂಗೆ ಹೇಳ್ದೆ, ಲೂಟಿ ಹೊಡೆದಿದ್ದಾರೆ ವಿದ್ಯುತ್ ಚ್ಛಕ್ತಿ ಖರೀದಿಯಲ್ಲಿ, ನೀವು ವಿದ್ಯುತ್ ಚ್ಛಕ್ತಿ ಸಚಿವರಿದ್ದೀರಿ, ಈ ರಾಜ್ಯದ ಜನತೆಯ ದುಡ್ಡನ್ನ ಲೂಟಿ ಹೊಡೆದಿರುತಕ್ಕಂಥ ಪ್ರಕರಣದ ಸತ್ಯಾಂಶ ಹೊರಗಿಡಿ ಅಂತ ಹೇಳಿದೆ. ಅವರು ಅವರನ್ನ ಕಾಪಾಡಿದ್ದಕ್ಕೆ ಪಾಪ ಡಿಕೆ ಶಿವಕುಮಾರ್ ಗೆ ಕೊಟ್ಟ ಬಳುವಳಿ ಇವರು ಈಗ ಬಿಜೆಪಿಯವರು. ಯಾತಕ್ಕೆ ನಾನು ಈ ಮಾತು ಹೇಳ್ತೀನಿ ಅಂದ್ರೆ, ಒಬ್ಬ ವಿಠ್ಠಲ್ ಎನ್ನುವವರು ಬರೀತಾರೆ, ಅವರೊಬ್ಬ ಸೀನಿಯರ್ ಐಎಸ್ ಅಧಿಕಾರಿ, ಸೆಂಟ್ರಲ್ ವಿಜಿಲೆನ್ಸ್ ಕಮಿಷನ್ ಚೇರ್ಮೆನ್, ಅವರು ಆ ಬುಕ್ ನಲ್ಲಿ ಹೇಳ್ತಾರೆ ಅವರು, ಈ ಸಿಬಿಐ ಅನ್ನುವ ಕಚೇರಿ ಏನಿದೆ, ಅಲ್ಲಿರುವವರೆಲ್ಲ ನಮ್ಮ ಸೆಂಟ್ರಲ್ ಗವರ್ನಮೆಂಟ್ ಪೊಲೀಸ್ ಅಧಿಕಾರಿಗಳೇ.ಸೆಂಟ್ರಲ್ ಗವರ್ನಮೆಂಟ್ ಯಾವ ಸರ್ಕಾರಗಳು ಇರ್ತದೆ, ಆ ಸರ್ಕಾರದ ಪರ ಮಾತಾಡುವವರಿಗೆ ಅವರಿಗೆ ರಕ್ಷಣೆ ದೊರಕುತ್ತೆ, ಯಾರು ವಿರೋಧವಾಗಿ ಮಾತಾಡ್ತಾರೆ ಅಂಥ ಇಲಾಖೆಗಳಿಂದ ತೊಂದರೆ ಕೊಡ್ಕಿಕ್ಕೆ ನೋಡ್ತಾರೆ ಎಂದು ಅವರ ಪುಸ್ತಕದಲ್ಲಿ ಹೇಳ್ತಾರೆ ನಾನ್ ಹೇಳೋದ್ ಅಲ್ಲ, ಈಗ ನಡೀತಿರತಕ್ಕಂಥದ್ದು ಯಾವ ರೀತಿ ಎಂದು...
ಅಮಿತ್ ಶಾ ಕೊಡೋ ಎಂಜಿಲು ದುಡ್ಡಿಗೆ ನಿಂತಿರೋರ್ಯಾರು?
ನಿನ್ನೆ ಅವನ್ಯಾರೋ ಪಬ್ಲಿಕ್ ಟಿ.ವಿ.ರಂಗನಾಥ್, ಜಮೀರ್ ಅಹ್ಮದ್ ಖಾನ್ ನ ಯಾರೋ ಕರೆದರಂತೆ ನಿನ್ನೆ. ಇವರನ್ನೇ ಯಾಕೆ ಕರೆದ್ರು? ಕುಮಾರಸ್ವಾಮಿನ ಮೊದ್ಲು ಕರೆದ್ರೆ ಅವರನ್ಯಾಕೆ ಕರೆದ್ರು ಅನ್ನೋದು, ಈ ರಂಗನಾಥ್ ಕುಮಾರಸ್ವಾಮಿಯವರನ್ನ ಕರೀತಾರೆ ಅಂತ ಇವನಿಗೆಂಗೆ ಕನಸು ಬಿದ್ದಿದೆ ಹಾಗಿದ್ರೆ? ಇವನಿಗ್ಯಾರು ಹೇಳಿದವರು, ನನ್ನ ಹೆಸರನ್ನ್ಯಾಕೆ ತಂದ ಅಲ್ಲಿ? ಇದಕ್ಕೆ ಹೆದರಿಕೊಂಡು ಕೂತ್ಕೊತಿವಾ? ರಂಗನಾಥ್ ಥರ ನಾನು ಜೀವನ ಮಾಡಬೇಕಿಲ್ಲ? ನಂಗೂ ಸ್ವಾಭಿಮಾನ ಇದೆ. ಸುಳ್ಳು ಹೇಳಿಕೊಂಡು ಎಷ್ಟು ದಿವಸ ಮಾಡ್ತೀರಿ ಇದೆಲ್ಲ? ಅಲ್ಲಿ ಹೋಗಿ ಅಮಿತ್ ಶಾ ಮುಂದೆ ಕೈ ಕಟ್ಟಿಕೊಂಡು ನಿಂತ್ಕೊಂಡು ಅವರು ಕೊಡೊ ಎಂಜಲು ದುಡ್ಡಿಗೆ ನಿಂತಿದ್ದಾನಲ್ಲ ಅವನು... ನನ್ನ ಹೆಸರನ್ನು ಹಾಳು ಮಾಡ್ಬೇಡಿ.