ರೈತರ ಸಾಲ ಮನ್ನಾ ಮಾಡಿದ್ರೂ ಜನ ಕೈ ಹಿಡಿಲಿಲ್ಲ: ಎಚ್ಡಿಕೆ ಬೇಸರ
ರಾಮನಗರ, ಮೇ 19: ನಾನು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಲ್ಲಿ ರೈತರ ಸಾಲಮನ್ನಾ ಮಾಡಿ ರೈತರ ಬೆನ್ನಿಗೆ ನಿಂತ ನಮ್ಮನ್ನು ರಾಜ್ಯದ ಜನತೆ ಕೈ ಹಿಡಿಯಲಿಲ್ಲ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
ಚನ್ನಪಟ್ಟಣ ತಾಲ್ಲೂಕಿನ ಗೋವಿಂದಳ್ಳಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಮಳೆ ಹಾನಿಗೆ ತುತ್ತಾಗಿ ನೂರಾ ಐವತ್ತು ಎಕರೆ ಬಾಳೆ ಜೊತೆಗೆ ತೆಂಗು ನಾಶವಾಗಿರುವ ಸ್ಥಳ ಪರಿಶೀಲನೆ ನಡೆಸಿದ ಮಾಜಿ ಸಿಎಂ ಕುಮಾರಸ್ವಾಮಿ, ಸ್ಥಳದಲ್ಲೇ ರೈತರಿಗೆ ಪ್ರತಿ ಎಕರೆಗೆ ಹತ್ತುಸಾವಿರ ರುಪಾಯಿ ವೈಯಕ್ತಿಕ ಪರಿಹಾರ ನೀಡಿದರು.
ಭಾರೀ ಮಳೆಗೆ ಬಾಳೆ ನಷ್ಟ: ಆತ್ಮಹತ್ಯೆಯ ಎಚ್ಚರಿಕೆ ನೀಡಿದ ರೈತ
ಅಲ್ಲದೇ ಕೆಲವು ರೈತರ ಮನೆಗಳು ಜಖಂ ಗೊಂಡಿದ್ದು, ಪ್ರಕೃತಿ ವಿಕೋಪ ಅನಾಹುತದಲ್ಲಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಅವರೆಲ್ಲರಿಗೂ ನಾನು ವೈಯಕ್ತಿಕವಾಗಿ ಸಹಾಯ ಮಾಡುವುದಾಗಿ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಘೋಷಿಸಿದರು.
ರೈತರಿಗೆ ಪ್ರೋತ್ಸಾಹ ಧನ ನೀಡಿ
ಬೆಳೆ ಹಾನಿಗೊಂಡ ರೈತರಿಗೆ ವೈಯಕ್ತಿಕ ಪರಿಹಾರ ನೀಡಿದ ನಂತರ ಮಾತನಾಡಿದ ಮಾಜಿ ಸಿಎಂ, ಈಗಿರುವ ಸರ್ಕಾರ ಕೇವಲ ಭರವಸೆ ನೀಡುವುದಷ್ಟೇ, ಒಬ್ಬರಿಗೆ ಒಂದು ಪೈಸೆ ಸಿಗೋದಿಲ್ಲ. ಕಷ್ಟಪಟ್ಟು ಸರ್ಕಾರ ರಚನೆ ಮಾಡಿದ್ದಾರೆ ನೋಡೋಣ ಎಷ್ಟು ಕೊಡ್ತಾರೆ ಅಂತಾ, ಆದರೆ ನಾನು ಪ್ರಕೃತಿ ವಿಕೋಪಕ್ಕೆ ಒಳಗಾದ ರೈತರಿಗೆ ಹೆಚ್ಚು ಪ್ರೋತ್ಸಾಹ ಧನ ನೀಡುವಂತೆ ಒತ್ತಾಯಿಸುತ್ತೇನೆ ಎಂದರು.
ಪ್ರಕೃತಿ ವಿಕೋಪಕ್ಕೆ ಬೆಳೆ ನಾಶ
ದೇಶದ ರೈತರು ಸಂಕಷ್ಟದಲ್ಲೂ ಬೇಸಾಯ ಮಾಡುತ್ತಿದ್ದಾರೆ. ವಿಶೇಷವಾಗಿ ಕಿಡ್ನಿ ವೈಫಲ್ಯಕ್ಕೆ ತುತ್ತಾಗಿದ್ದ ಕುಮಾರ್ ಎಂಬಾತ, ಡ್ರೈವರ್ ವೃತ್ತಿ ಸಾಧ್ಯವಾಗದ ಹಿನ್ನೆಲೆ ಲೀಸ್ ಗೆ ಭೂಮಿ ಪಡೆದು ಬಾಳೆ ಬೆಳೆಗೆ ಮುಂದಾಗಿದ್ದರು, ಈಗ ಅದೆಲ್ಲವೂ ನಾಶವಾಗಿದೆ.
ಒಂದು ಎಕರೆ ಬಾಳೆ ಬೆಳೆಯಲು 80 ಸಾವಿರದಿಂದ ಲಕ್ಷ ರೂ. ಖರ್ಚಾಗುತ್ತದೆ. ಪ್ರಕೃತಿ ವಿಕೋಪಕ್ಕೆ ಸರ್ಕಾರ ನೀಡುವ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ಹಾಗಾಗಿ ಸರ್ಕಾರ ಹೆಚ್ಚು ಪರಿಹಾರ ನೀಡುವಂತೆ ಒತ್ತಾಯಿಸಿದ್ದೇನೆ ಎಂದು ಹೇಳಿದರು.
ಯಾವುದೇ ಆಟೋ ಡ್ರೈವರ್ ಗಳಿಗೆ ಹಣ ಸಿಗಲ್ಲ
ನೀವೇ ನೋಡಿ ಆಟೋ ಡ್ರೈವರ್ ಗಳಿಗೆ ತಲಾ ಐದು ಸಾವಿರ ರುಪಾಯಿ ಪರಿಹಾರ ಅಂತಾ ಘೋಷಣೆ ಮಾಡಿದ್ದರು. ಆದರೆ ಇಲಾಖೆಗೆ 20 ಕೋಟಿ ಹಣ ಮಂಜೂರು ಮಾಡಿ ವಿತರಿಸುವಂತೆ ಸೂಚಿಸಿದ್ದಾರೆ. ಅವರು ನೀಡಿರುವ ನಿಯಮಗಳು ಯಾವುದೇ ಆಟೋ ಡ್ರೈವರ್ ಗಳಿಗೆ ಹಣ ಸಿಗುವಂತಿಲ್ಲ, ಆದರೆ ಸ್ಥಿತಿವಂತರನ್ನು ಗುರುತಿಸಿ ಕೊಡದಂತೆ ಹೇಳಿದ್ದಾರೆ. ಆಟೋ ಡ್ರೈವರ್ ಗಳಲ್ಲಿ ಸ್ಥಿತಿವಂತರನ್ನು ಗುರುತಿಸುವುದು ಹೇಗೆ ಎಂದು ವ್ಯಂಗ್ಯವಾಡಿದರು.
ನಾನು ಸಿಎಂ ಆಗಿದ್ದಾಗ ಸಾಲ ಮನ್ನಾ ಮಾಡಿದ್ದೇನೆ
ಇದೇ ವೇಳೆ, ರೈತರಿಗೆ ತಲಾ ಐದು ಸಾವಿರ ಕೊಟ್ಟಿದ್ದರೆ ಸಾಕಾಗ್ತಿತ್ತು, ಅಂತಹ ಪ್ರಯತ್ನ ನಡೆಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾನು ಸಿಎಂ ಆಗಿದ್ದಾಗ ರೈತರ ಸಾಲಮನ್ನಾ ಮಾಡಿದ್ದೇನೆ. ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಹೆಚ್ಚಿನ ಪರಿಹಾರ ನೀಡಲು ಪ್ರಯತ್ನಿಸಿದ್ದೇನೆ. ಆದರೆ ಇದು ಕೇವಲ ಘೋಷಣೆಯ ಸರ್ಕಾರ ಅಷ್ಟೇ ಎಂದು ಟೀಕಿಸಿದರು.