ಬಿಜೆಪಿ ಹೈಕಮಾಂಡ್ಗೆ ಚೆಂದದ ಕಿವಿಮಾತು ಹೇಳಿದ ಮಾಜಿ ಸಿಎಂ ಎಚ್ಡಿಕೆ
ರಾಮನಗರ, ಜೂನ್ 21: "ಕೊರೊನಾ ವೈರಸ್ ಸಂದರ್ಭದಲ್ಲಿ ಬಿಜೆಪಿ ಅಧಿಕಾರಕ್ಕಾಗಿ ಕಿತ್ತಾಟ ಮಾಡುವುದು ಸರಿಯಲ್ಲ, ಈ ಸಂದರ್ಭದಲ್ಲಿ ಯಾರೂ ಸಹ ರಾಜಕೀಯ ಮಾಡಬಾರದು,'' ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸಲಹೆ ನೀಡಿದರು.
ಸೋಮವಾರ ರಾಮನಗರ ಜಿಲ್ಲೆ ಚನ್ನಪಟ್ಟಣದ ಅಂಬೇಡ್ಕರ್ ಭವನದಲ್ಲಿ ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಕೊರೊನಾ ಲಸಿಕೆ ಶಿಬಿರಕ್ಕೆ ಚಾಲನೆ ನೀಡಿ, ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, "ಬಿಜೆಪಿ ವರಿಷ್ಠರು ಮುಖ್ಯಮಂತ್ರಿಯನ್ನು ಬದಲಾವಣೆ ಮಾಡುವುದಾದರೆ ಮಾಡಿ, ಇಲ್ಲಾಂದ್ರೆ ಮುಂದುವರೆಸುವುದಾದರೆ ಮುಂದುವರೆಸಿ, ಈ ವಿಚಾರವಾಗಿ ನಾನು ಆ ಪಕ್ಷದ ಹೈಕಮಾಂಡ್ಗೆ ಹೇಳುತ್ತೇನೆ. ಸಿಎಂ ಬದಲಾವಣೆ ಬಗ್ಗೆ ಒಂದು ಸ್ಪಷ್ಟನೆ ನೀಡಿ,'' ಎಂದು ಸಲಹೆ ನೀಡಿದರು.
ತಾತನಾಗುತ್ತಿರುವ ಖುಷಿಯಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ
"ಇನ್ನೆರಡು ವರ್ಷದಲ್ಲಿ ಚುನಾವಣೆ ಬರಲಿದೆ, ಹಾಗಾಗಿ ಈ ಸಂದರ್ಭದಲ್ಲಿ ರಾಜಕೀಯ ಬಿಟ್ಟು ಜನರ ಸೇವೆ ಮಾಡೋಣವೆಂದು ಹೇಳಿದ್ದರು. ರಾಜ್ಯದ ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಪಕ್ಷಗಳು ರಾಜಕಾರಣ ಮಾಡಬಾರದು, ಒಂದು ವೇಳೆ ರಾಜಕಾರಣ ಮಾಡಿದರೆ ರಾಜ್ಯದ ಜನರ ಜತೆಗೆ ಚೆಲ್ಲಾಟ ಆಡಿದಂತಾಗುತ್ತದೆ,'' ಎಂದು ಎರಡು ಪಕ್ಷಗಳ ವಿರುದ್ಧ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.
Recommended Video
"ನಾನು ಕಾಂಗ್ರೆಸ್- ಬಿಜೆಪಿಯವರಿಂದ ಏನೂ ಕಲಿಯಬೇಕಿಲ್ಲ, ಇಡೀ ರಾಜ್ಯಕ್ಕೆ ಚನ್ನಪಟ್ಟಣದ ಕೋವಿಡ್ ಕೇರ್ ಸೆಂಟರ್ಗಳು ಮಾದರಿ. ಪೌಷ್ಟಿಕಾಹಾರ ನೀಡಿರುವ ಕೋವಿಡ್ ಕೇರ್ ಸೆಂಟರ್ಗಳು ನಮ್ಮ ಚನ್ನಪಟ್ಟಣದ್ದು. ನಾನು 3 ಹೊತ್ತು ಊಟದ ವ್ಯವಸ್ಥೆ ಮಾಡಿಸುತ್ತೇನೆಂದು ಅಧಿಕಾರಿಗಳಿಗೆ ಹೇಳಿದ್ದೆ. ಆದರೆ ಅಧಿಕಾರಿಗಳು ಹಣದ ವ್ಯವಸ್ಥೆ ಇದೆ ಎಂದಿದ್ದರು.''
"ಇನ್ನು ಕೆಲವರು ಗ್ರಾಮಗಳ ಅಭಿವೃದ್ಧಿ ಮೀಸಲಿಟ್ಟ ಸರ್ಕಾರದ ಹಣ ಬಳಸಿಕೊಂಡು ಜನರಿಗೆ ಫುಡ್ ಕಿಟ್ ಕೊಟ್ಟಿದ್ದಾರೆ. ಸರ್ಕಾರದ ಹಣಕ್ಕೆ ಇವರ ಫೋಟೋ ಹಾಕಿಕೊಂಡಿದ್ದಾರೆ. ನಿಮ್ಮ ಸಂಸದರಿಗೆ ಏನ್ ಕಡಿಮೆಯಾಗಿದೆ, ಸ್ವಂತ ಹಣದಿಂದ ಕೊಡಲು ಆಗುವುದಿಲ್ಲವೇ,'' ಎಂದು ಸಂಸದ ಡಿ.ಕೆ. ಸುರೇಶ್ಗೆ ಟಾಂಗ್ ನೀಡಿದರು.
"ನಾನು ಪ್ರತಿದಿನವೂ ಅಧಿಕಾರಿಗಳ ಜೊತೆಗೆ ಸಂಪರ್ಕದಲ್ಲಿದ್ದೇನೆ. ಚನ್ನಪಟ್ಟಣ ಕ್ಷೇತ್ರದ ಪ್ರತಿಯೊಂದು ವಿಚಾರವನ್ನು ತಿಳಿದುಕೊಳ್ತಿದ್ದೇನೆ. ಅಧಿಕಾರಿಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಾಗಾಗಿ ನನ್ನ ಇರುವಿಕೆ ಇಲ್ಲಿಗೆ ಕಡಿಮೆಯಾಗಿದೆ,'' ಎಂದು ಇದೇ ವೇಳೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.