ನಾನಿದ್ದಾಗ ಸಾರಿಗೆ ಇಲಾಖೆಯಲ್ಲಿ ಹಣವಿತ್ತು, ಈಗೆಲ್ಲಿ ಹೋಯಿತು?: ಎಚ್ಡಿಕೆ
ರಾಮನಗರ, ಏಪ್ರಿಲ್ 12: "ನಾನು 2006-07ಲ್ಲಿ ಸಿಎಂ ಆಗಿದ್ದಾಗ ಸಾರಿಗೆ ಇಲಾಖೆಯಲ್ಲಿ ಹಣವನ್ನು ಡೆಪಾಸಿಟ್ ಇಟ್ಟಿದ್ದೆ. ಆದರೆ, ಈ ಸರಕಾರದಲ್ಲಿ ಹಣ ಇಲ್ಲ ಅಂದರೆ ಹೇಗೆ?'' ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ರಾಜ್ಯ ಸರಕಾರವನ್ನು ಪ್ರಶ್ನಿಸಿದರು.
ರಾಮನಗರ ಜಿಲ್ಲೆ ಬಿಡದಿಯ ಕೇತುಗಾನಹಳ್ಳಿ ತೋಟದ ಮನೆಯಲ್ಲಿ ನಗರಸಭೆ ಚುನಾವಣೆ ಸಂಬಂಧ ಅಭ್ಯರ್ಥಿಗಳ ಆಯ್ಕೆ ಸಭೆಯಲ್ಲಿ ಭಾಗವಹಿಸಿ ಸುದ್ದಿಗಾರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಸರ್ಕಾರ ಮತ ಪಡೆಯುವ ಉದ್ದೇಶದಿಂದ ಕೆಲ ಉಚಿತ ಪಾಸ್ ಯೋಜನೆಗಳನ್ನು ಜಾರಿ ಮಾಡಿ ಅದರ ಹೊರೆಯನ್ನು ಸಾರಿಗೆ ಇಲಾಖೆ ಮೇಲೆ ಹೊರಿಸಿದೆ ಎಂದು ಆರೋಪಿಸಿದರು.
ಉಚಿತ ಪಾಸ್ ಗಳನ್ನು ನೀಡಿ ಅದರ ಸುಮಾರು 400 ಕೋಟಿ ಹಣವನ್ನು ಭರಿಸದೇ ಇದ್ದರೆ ಸಾರಿಗೆ ಇಲಾಖೆಗೆ ನಷ್ಟವಾಗದೆ, ಲಾಭವಾಗುತ್ತಾ ಎಂದು ಪ್ರಶ್ನೆ ಮಾಡಿದರು. ಸರಕಾರ ತಪ್ಪಿಟ್ಟುಕೊಂಡು ಚಾಲಕರು ಹಾಗೂ ನಿರ್ವಾಹಕರ ಮೇಲೆ ದಬ್ಬಾಳಿಕೆ ಮಾಡುವುದು ಸರಿಯಲ್ಲ. ಈ ಸರ್ಕಾರದ ಯೋಗ್ಯತೆಗೆ ಸಾರಿಗೆ ಇಲಾಖೆ ನೌಕರರಿಗೆ ಸಂಬಳ ಕೊಡಲು ಸಾಧ್ಯವಾಗಿಲ್ಲ. ಈ ಸರಕಾರ ಎಲ್ಲಿ ಹಣವನ್ನು ಪೋಲು ಮಾಡುತ್ತಿದೆ ಎಂದು ರಾಜ್ಯದ ಜನತೆಗೆ ಗೊತ್ತಿಲ್ವ ಎಂದು ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.
ಕೊರೊನಾದಿಂದ ಸರ್ಕಾರ ಕಾಪಾಡಲ್ಲ, ದೇವರೇ ಕಾಪಾಡ್ಬೇಕು
ಸರ್ಕಾರ ನೈಟ್ ಕರ್ಫ್ಯೂ ಮಾಡಿದ್ದರಿಂದ ಕೊರೊನಾ ಕಡಿಮೆ ಆಗುತ್ತಾ? ರಾತ್ರಿ ವೇಳೆ ಶೇ.80ರಷ್ಟು ಜನ ಮನೆಯಲ್ಲಿ ಇರುತ್ತಾರೆ, ಇಂತಹ ಸಮಯದಲ್ಲಿ ಕರ್ಫ್ಯೂ ಮಾಡಿದರೆ ಏನು ಪ್ರಯೋಜನ. ಕೊರೊನಾ ಹೆಚ್ಚಾಗುತ್ತಿರುವ ಸಮಯದಲ್ಲಿ ನಗರಸಭೆ ಚುನಾವಣೆ ಹಾಗೂ ಉಪ ಚುನಾವಣೆ ನಡೆಸುತ್ತೀರಿ ಇದು ಎಷ್ಟು ಸರಿ ಎಂದು ಸರ್ಕಾರದ ವಿರುದ್ಧ ಮಾಜಿ ಸಿಎಂ ಹರಿಹಾಯ್ದರು.
Recommended Video
ಇಂತಹ ಸಮಯದಲ್ಲಿ ಸರಕಾರಕ್ಕೆ ಚುನಾವಣೆ ನಡೆಸುವ ಅವಶ್ಯಕತೆವಿತ್ತೇ? ಚುನಾವಣೆ ಮಾಡಿಲ್ಲ ಅಂದಿದ್ದರೆ ಪ್ರಪಂಚವೇನು ಮುಳುಗಿ ಹೋಗುತ್ತಿತ್ತಾ ಎಂದು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ರಾಜ್ಯ ಸರಕಾರದಿಂದ ಕೊರೊನಾ ತಡೆಗಟ್ಟಲು ಸಾಧ್ಯವಿಲ್ಲ, ದೇವರೇ ಕಾಪಾಡಬೇಕು ಎಂದು ಮಾಜಿ ಸಿಎಂ ಎಚ್ಡಿಕೆ ಹೇಳಿದರು.