ನಾನೇನು ಕೈಗೆ ಬಳೆ ತೊಟ್ಟುಕೊಂಡಿಲ್ಲ: ಯೋಗೇಶ್ವರ್ಗೆ ತಿರುಗೇಟು ಕೊಟ್ಟ ಎಚ್ಡಿಕೆ
ರಾಮನಗರ, ಡಿಸೆಂಬರ್ 13: ಕಲ್ಚರ್ ಇಲ್ಲದ ಜನರ ಬಗ್ಗೆ ನಾನೇಕೆ ಚರ್ಚೆ ಮಾಡಲಿ, ಅವರ ಬ್ಯಾಕ್ ಗ್ರೌಂಡ್ ಏನು, ಎಷ್ಟು ಜನರಿಗೆ ಟೋಪಿ ಹಾಕಿ ಬಂದಿದ್ದಾರೆ ಅನ್ನೋದು ಗೊತ್ತಿದೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಬಿಜೆಪಿ ಎಂಎಲ್ಸಿ ಸಿ.ಪಿ ಯೋಗೇಶ್ವರ್ ವಿರುದ್ಧ ಹರಿಹಾಯ್ದಿದ್ದಾರೆ.
ಚನ್ನಪಟ್ಟಣದಲ್ಲಿ ಶನಿವಾರ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ, ಬಿಜೆಪಿ ಎಂಎಲ್ಸಿ ಯೋಗೇಶ್ವರ್ ರಾಜಕೀಯಕ್ಕೆ ಬರುವ ಮುಂಚೇನೇ ಅವರ ಪರಿಚಯವಿತ್ತು. ವಿಠಲೇನಹಳ್ಳಿ ಗೋಲಿಬಾರ್ ಆದಾಗ ಇವನು ಎಲ್ಲಿದ್ದ, ಚನ್ನಪಟ್ಟಣದ ಹಳ್ಳಿಗಳ ಹೆಸರು ನಾನು ಹೇಳಬೇಕಾ? ಇದು ಅವನ ದುರಂಕಾರದ ಮಾತು ಎಂದರು.
ಕುಮಾರಸ್ವಾಮಿ ಸರಕಾರ ಪತನದ ಹಿಂದಿನ ರಹಸ್ಯ ಬಿಚ್ಚಿಟ್ಟ ಯೋಗೇಶ್ವರ್
""ಇವನೇನು ಮಹಾನ್ ನಾಯಕನಾ? ಇವನ ಕೈಯಿಂದ ಹಣ ಖರ್ಚು ಮಾಡುತ್ತಾನಾ? ಯಾರಿಗೋ ಟೋಪಿ ಹಾಕಿ ಬಂದವನು ಇವನು. ತೆಂಗಿನಕಾಯಿ ಮಾರಿ ಹಣವನ್ನು ಪ್ರಿಂಟ್ ಮಾಡಿದ್ದಾನಾ?'' ಎಂದು ಏಕವಚನದಲ್ಲೇ ಸಿ.ಪಿ ಯೋಗೇಶ್ವರ್ ಅವರಿಗೆ ತಿರುಗೇಟು ನೀಡಿದರು.
ಚನ್ನಪಟ್ಟಣ ತಾಲೂಕಿನ ಎಷ್ಟು ಜನರಿಗೆ ತೆಂಗಿನಕಾಯಿ ದುಡ್ಡು ಇನ್ನೂ ಕೊಟ್ಟಿದ್ದಾನೋ, ಇಲ್ಲವೋ ಗೊತ್ತಿಲ್ಲ. ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಸಾಧ್ಯವಿಲ್ಲ ಎಂದು ಎಚ್ಡಿಕೆ ಕಿಡಿಕಾರಿದರು.
ಸಚಿವ ರಮೇಶ್ ಜಾರಕಿಹೊಳಿ ಸಮ್ಮಿಶ್ರ ಸರ್ಕಾರ ತೆಗೆಯಲು ಕೈಹಾಕಿದ್ದು, ಯೋಗೇಶ್ವರ್ ಗೇಟ್ ಕೀಪರ್ ಕೆಲಸ ಮಾಡಿಕೊಂಡು ಇದ್ದ ಅಷ್ಟೆ. ಇವನನ್ನು ನೋಡಿ ಎಂಎಲ್ಎ ಗಳು ಬಂದಿದ್ದಾರಾ? ಎಂದು ತಿಳಿಸಿದರು.
""ನಾನು 24 ಗಂಟೆ ಹೋಟೆಲ್ ನಲ್ಲಿ ಇದ್ದೇನೆ, ನಾನು ಅರಮನೇ ಕೂಡ ನೋಡಿದ್ದೇನೆ, ರಷ್ಯಾದ ಪ್ಯಾಲೇಸ್ ನಲ್ಲೂ ಮಲಗಿದ್ದೇನೆ. ಅಧಿಕಾರ ನಡೆಸುವುದನ್ನು ಯೋಗೇಶ್ವರ್ ನಿಂದ ನಾನು ಹೇಳಿಸಿಕೊಳ್ಳಬೇಕಾ'' ಎಂದು ಹರಿಹಾಯ್ದರು.
ಚನ್ನಪಟ್ಟಣ ಕ್ಷೇತ್ರವನ್ನು ಎಂಎಲ್ಸಿ ಸಿ.ಪಿ ಯೋಗೇಶ್ವರ್ ಹೇಗೆ ಕಂಟ್ರೋಲ್ ತೆಗೆದುಕೊಳ್ಳುತ್ತಾನೆ, ನಾನು ಇಲ್ಲಿನ ಶಾಸಕ. ನಾನೇನು ಕೈಗೆ ಬಳೆ ತೊಟ್ಟುಕೊಂಡಿಲ್ಲ ಎಂದರು.
ಚನ್ನಪಟ್ಟಣದಲ್ಲಿ ಏನೇ ಕೆಲಸವಾದರೂ, ನನ್ನ ಅಡಿಯಲ್ಲಿ ನಡೆಯಬೇಕು. ಯೋಗೇಶ್ವರ್ ಯಾವ ಕ್ಷೇತ್ರದಿಂದ ಎಂಎಲ್ಸಿ ಆಗಿದ್ದಾರೆ. ಸಿನಿಮಾ ಕ್ಷೇತ್ರದಿಂದ ಎಂಎಲ್ಸಿ ಆಯ್ಕೆಯಾಗಿದ್ದು, ಸಿನಿಮಾ ರಂಗದವರ ಕಷ್ಟ ಸುಖ ನೋಡಿಕೊಳ್ಳಲಿ ಎಂದು ಸಲಹೆ ನೀಡಿದರು.