ಹುಡುಗಾಟದ ನೈಟ್ ಕರ್ಫ್ಯೂ: ಮಾಜಿ ಸಿಎಂ ಎಚ್ಡಿಕೆ ಖಂಡನೆ
ರಾಮನಗರ, ಡಿಸೆಂಬರ್ 24: ಯಾವುದೇ ಚರ್ಚೆ ಮಾಡದೆ ಸರ್ಕಾರ ಏಕಾಏಕಿ ನೈಟ್ ಕರ್ಫ್ಯೂ ಜಾರಿಮಾಡಿದ್ದು, ನೈಟ್ ಕರ್ಫ್ಯೂ ಹುಡುಗಾಟದ ನಿರ್ಧಾರ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಖಂಡಿಸಿದರು.
ಬಿಡದಿಯಲ್ಲಿರುವ ತಮ್ಮ ತೋಟದ ಮನೆಯಲ್ಲಿ ಇಂದು ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಸರ್ಕಾರದ ನಡೆಯನ್ನು ಖಂಡಿಸಿದರು. ಏಕಾಏಕಿ ನಿರ್ಧಾರದಿಂದ ಜನರಿಂದ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತವೆ ಹಾಗೆ ಮಾಧ್ಯಮಗಳೂ ನೈಟ್ ಕರ್ಫ್ಯೂ ಕೆಟ್ಟ ನಿರ್ಧಾರ ಎಂದಿವೆ. ಈ ರೀತಿ ನಿರ್ಧಾರಗಳಿಂದ ಸರ್ಕಾರದ ವರ್ಚಸ್ಸು ಕಡಿಮೆಯಾಗುತ್ತದೆ ಎಂದು ಎಚ್ಚರಿಸಿದರು.
ನೈಟ್ ಕರ್ಫ್ಯೂ ಯಡವಟ್ಟು: ಗೊಂದಲಮಯ ಸರ್ಕಾರದ ಆದೇಶ!
ಎಲ್ಲಾ ರಂಗದ ಪರಿಣರೊಂದಿಗೆ ಚರ್ಚೆ ಮಾಡದೆ ಒಬ್ಬರ ಬಲವಂತಕ್ಕೆ ನೈಟ್ ಕರ್ಫ್ಯೂ ನಿರ್ಧಾರ ಸರಿಯಿಲ್ಲ. ಇಂತಹ ಸರಕಾರದ ನಡುವಳಿಕೆಯಿಂದ ಜನಸಾಮಾನ್ಯರ ಮುಂದೆ ಅಪಹಾಸ್ಯಕ್ಕೆ ಗುರಿಯಾಗಬೇಕಾಗುತ್ತದೆ ಎಂದರು.
ಇದೇ ಡಿ.25 ರಂದು ಕ್ರೈಸ್ತ ಸಮುದಾಯ ಕ್ರಿಸ್ಮಸ್ ಆಚರಣೆ ಮಾಡುತ್ತಿದ್ದಾರೆ. ಡಿ.31 ಮತ್ತು ಜ.1 ರಂದು ಯುವ ಸಮೂಹ ಹೊಸ ವರ್ಷಾಚಣೆ ಮಾಡುತ್ತಿದೆ. ಇದನ್ನೆಲ್ಲ ಗಮನದಲ್ಲಿಟ್ಟುಕೊಂಡು ನೈಟ್ ಕರ್ಫ್ಯೂ ನಿರ್ಧಾರವನ್ನು ಮರು ಪರಿಶೀಲನೆ ಮಾಡಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪರನ್ನು ಮಾಜಿ ಸಿಎಂ ಎಚ್ಡಿಕೆ ಒತ್ತಾಯಿಸಿದರು.
ಕಳೆದ ಮಾರ್ಚ್ ನಲ್ಲಿ ಲಾಕ್ ಡೌನ್ ಮಾಡುವ ಮೊದಲು, ವಿದೇಶಿದಿಂದ ಬಂದವರನ್ನು ಕೊರೊನಾ ತಪಾಸಣೆಗೆ ಒಳಪಡಿಸದೆ ಸ್ವೇಚ್ಛಾಚಾರವಾಗಿ ತಿರುಗಾಡಲು ಬಿಟ್ಟು, ಆದ ಅನಾಹುತ ನಮ್ಮ ಮುಂದಿದೆ. ಈಗಲೂ ಸಹ ಕಳೆದ 15 ದಿನಗಳ ಹಿಂದೆಯೇ ಬ್ರಿಟನ್, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಹೊಸ ವೈರಸ್ ಪತ್ತೆಯಾದಾಗ ಅವರು ತೆಗೆದುಕೊಂಡ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಲ್ಲಿ ಸರ್ಕಾರ ಎಡವಿದ್ದಾರೆ ಎಂದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ವಿದೇಶದ ವಿಮಾನ ನಿಲ್ದಾಣಗಳಲ್ಲಿ ಬೇರೆ ದೇಶದಿಂದ ಬಂದವರನ್ನು ತೀವ್ರ ತಪಾಸಣೆ ಮಾಡುತ್ತಾರೆ. ಅಲ್ಲದೇ ಅದರ ವರದಿ ಬರುವವರೆಗೆ ಅವರು ರೂಂ ಬಿಟ್ಟು ಕದಲುವ ಹಾಗಿಲ್ಲ. ಅದರೆ ನಮ್ಮ ರಾಜ್ಯದಲ್ಲಿ ವಿದೇಶದಿಂದ ಬಂದವರನ್ನು ಯಾವುದೇ ಸಿದ್ಧತೆಯಿಲ್ಲದೆ ಕಾಟಾಚಾರಕ್ಕೆ ತಪಾಸಣೆ ಮಾಡುತ್ತಾರೆ ಎಂದು ಲೇವಡಿ ಮಾಡಿದರು.
ಮನೆಮನೆ ಮಾತಾದ ಗೋಲ್ಡ್ ವಿನ್ನರ್ನಿಂದ ಎಲ್ಡಿಯಾ ಶುದ್ಧ ಕೊಬ್ಬರಿ ಎಣ್ಣೆ
ತಪಾಸಣೆಗೆ ಒಳಗಾದವರು ಚಿಕ್ಕಮಗಳೂರು, ಮೈಸೂರು, ದಾವಣಗೆರೆ, ಹುಬ್ಬಳ್ಳಿ ಎಲ್ಲಿ ಬೇಕೋ ಅಲ್ಲಿಗೆ ಹೋಗಿದ್ದಾರೆ. ಈಗ ಅವರನ್ನು ಹುಡುಕುವ ಪರಿಸ್ಥಿತಿ ಬಂದಿದೆ. ಸರ್ಕಾರ ನಿಮ್ಮ ತಪ್ಪುಗಳನ್ನು ಸರಿಯಾಗಿ ತಿದ್ದಿಕೊಂಡು ಸರಿಪಡಿಸಿಕೊಳ್ಳಿ ಎಂದು ಸರ್ಕಾರಕ್ಕೆ ಮಾಜಿ ಸಿಎಂ ಎಚ್ಡಿಕೆ ಸಲಹೆ ನೀಡಿದರು.
Recommended Video