"2004ರಲ್ಲಿ ದೇವಸ್ಥಾನದ ಮುಂಭಾಗದಲ್ಲಿ ಆಡಿದ ಮಾತಿಗೆ ಕ್ಷಮೆ ಕೇಳಲು ಬಂದಿದ್ದೇನೆ''
ರಾಮನಗರ, ಜನವರಿ 15: ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು ಶುಕ್ರವಾರ ರಾಮನಗರದ ನಗರ ದೇವತೆ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಸಂಕ್ರಾಂತಿ ಹಬ್ಬದ ಪ್ರಯುಕ್ತವಾಗಿ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.
ಎಚ್.ಡಿ ಕುಮಾರಸ್ವಾಮಿ ಅವರು ಕುಟುಂಬ ಸಮೇತರಾಗಿ ಬಂದು ಚಾಮುಂಡೇಶ್ವರಿ ದೇವಿಯ ಆಶೀರ್ವಾದ ಪಡೆದರು. ವಿಶೇಷ ಪೂಜೆ ನೆರವೇರಿಸಿದ ನಂತರ ಮಾಧ್ಯಮಗಳೊಂದಿಗೆ ಮಾಜಿ ಸಿಎಂ ಮಾತನಾಡಿದರು.
ನನ್ನ ಮುಂದಿನ ರಾಜಕೀಯ ಹೋರಾಟಕ್ಕಾಗಿ ಹಾಗೂ ನನ್ನ ಪಂಚರತ್ನ ಯೋಜನೆ ಎಂಬ ಗುರಿಯೊಂದಿಗೆ ಸಂಕಲ್ಪ ಮಾಡಿದ್ದೇನೆ. ಅದರ ಹಿನ್ನಲೆಯಲ್ಲಿ ಈ ತಾಯಿಗೆ ಸೇವೆ ಸಲ್ಲಿಸಲು ಬಂದಿದ್ದೇನೆ ಎಂದು ಹೇಳಿದರು.
ಕುಮಾರಸ್ವಾಮಿ V/S ಯೋಗೇಶ್ವರ ಮಾತಿನ ಮಲ್ಲಯುದ್ಧ!
""ಅದರ ಜೊತೆಗೆ 2004ರ ಚುನಾವಣೆ ಸಂದರ್ಭದಲ್ಲಿ ನಾನು ರಾಮನಗರ ಕ್ಷೇತ್ರದ ಅಭ್ಯರ್ಥಿಯಾಗಿ ಪ್ರವಾಸ ಮಾಡಬೇಕಾದರೆ ಪ್ರತಿ ಹಳ್ಳಿಯಲ್ಲಿ ಜನರು ಹಾಗೂ ಯುವಕರ ಭಾವನೆಯಲ್ಲಿ ನಾನೇ ಮುಂದಿನ ಮುಖ್ಯಮಂತ್ರಿ ಎಂಬ ಭಾವನೆ ಇತ್ತು.''
ನಾನೇ ಮುಖ್ಯಮಂತ್ರಿಯಾಗುವ ಪರಿಸ್ಥಿತಿ ಬಂತು
ನಾನು ಅಂದು ಜಾಲಮಂಗಲದ ಲಕ್ಷ್ಮಿ ನಾರಾಯಣಸ್ವಾಮಿ ದೇವಸ್ಥಾನದಲ್ಲಿ ಪೂಜೆ ಮಾಡಿದ ನಂತರ ದೇವಸ್ಥಾನ ಮುಂಭಾಗದಲ್ಲಿ ಒಂದು ಮಾತು ಹೇಳಿದ್ದೆ. ನಾನು ಯಾವುದೇ ಅಧಿಕಾರದ ಅಪೇಕ್ಷೆ ಪಡುವವನಲ್ಲ. ನನಗೆ ಬೇಕಾಗಿರುವುದು ಈ ಕ್ಷೇತ್ರದ ಪ್ರತಿ ಜನರು ನಗುಮುಖದಿಂದ ಇರಬೇಕು ಎಂಬುದು ಎಂದು ಹೇಳಿದ್ದೆ.
ರಾಮನಗರ ಕ್ಷೇತ್ರದ ಜನರ ನಗುಮುಖ ಕಾಣುವವರೆಗೂ ಯಾವುದೇ ಮಂತ್ರಿ, ಮುಖ್ಯಮಂತ್ರಿ ಆಸೆ ಇಲ್ಲ ಎಂದು ಹೇಳಿದ್ದೆ. ಆದರೆ ಈ ಮಣ್ಣಿನ ಶಕ್ತಿಯೋ, ಅಥವಾ ಪೂರ್ವಜರ ಪುಣ್ಯವೋ ನಾನೇ ಮುಖ್ಯಮಂತ್ರಿಯಾಗುವ ಪರಿಸ್ಥಿತಿ ಬಂತು. ಆದರೆ ಅವತ್ತು ಸಂಪೂರ್ಣವಾಗಿ ಅಧಿಕಾರ ನಡೆಸಲು ಆಗಲಿಲ್ಲ. 12 ವರ್ಷಗಳ ನಂತರ ಮುಖ್ಯಮಂತ್ರಿ ಆದಮೇಲೂ ಸಂಪೂರ್ಣ ಆಡಳಿತ ನಡೆಸಲಿಲ್ಲ.
ಏನಾದರೂ ಅಪಚಾರವಾಗಿದ್ದರೆ ಕ್ಷಮೆ ಕೇಳದ್ದೇನೆ
ನಾಡಿನ ಜನರ ಸಮಸ್ಯೆಗಳನ್ನು ಬಗೆಹರಿಸುವ ನನ್ನ ಕಲ್ಪನೆಗಳಿಗೆ ಸಂಪೂರ್ಣ ಯಶಸ್ಸು ದೊರಕಿಲ್ಲ. ದೇವಸ್ಥಾನದ ಮುಂಭಾಗ ಹೇಳಿದ ಮಾತು ಎಲ್ಲೋ ಒಂದು ಕಡೆ ತಪ್ಪಾಗಿ ಮಾತನಾಡಿದ್ದೇನೆ ಎಂಬ ಕೊರಗಿತ್ತು. ಅದಕ್ಕಾಗಿ ಸಂಕ್ರಾಂತಿಯಂದು ದೇವಸ್ಥಾನಕ್ಕೆ ಬಂದಿದ್ದೇನೆ. ನನ್ನಿಂದ ಏನಾದರೂ ಅಪಚಾರವಾಗಿದ್ದರೆ ಕ್ಷಮೆ ಕೇಳಬೇಕೆಂದು ಲಕ್ಷ್ಮಿ ನಾರಾಯಣಸ್ವಾಮಿ ದೇವಸ್ಥಾನ ಬಂದು ಸೇವೆ ಸಲ್ಲಿಸಿದ್ದೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.
ನನ್ನ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ
ನಾನು ಅಧಿಕಾರದಲ್ಲಿ ಇದ್ದ ವೇಳೆ ಸಾಕಷ್ಟು ಜನಪರ ಕಾರ್ಯಕ್ಕೆ ಚಾಲನೆ ನೀಡಿದ್ದೇನೆ, ನಾನು ಅಧಿಕಾರದಲ್ಲಿದ್ದಾಗ ಕೆಲವು ಯೋಜನೆಗಳು ಕಾರ್ಯಗತವಾಗಿಲ್ಲ ಹಾಗಾಗಿ ನನಗೆ ತೃಪ್ತಿ ಇಲ್ಲ. ನನ್ನ ಪಕ್ಷ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಬೇಕಿದೆ, ಇದಕ್ಕೆ ದೇವರ ಹಾಗೂ ಗುರು ಹಿರಿಯರ ಆಶೀರ್ವಾದ ಬೇಕಿದೆ. ಕೆಲವರು ರಾಜ್ಯದಲ್ಲಿ ಜೆಡಿಎಸ್ ಪಕ್ಷ ಮುಗಿದೇ ಹೋಯಿತು ಅಂತಾ ಮಾತನಾಡುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಸ್ವತಂತ್ರವಾಗಿ ಜೆಡಿಎಸ್ ಸರಕಾರ ತರಬೇಕಾಗಿದೆ. ನಾನು ಪಂಚರತ್ನ ಯೋಜನೆ ಎಂಬ ಸಂಕಲ್ಪ ಇಟ್ಟುಕೊಂಡಿದ್ದೇನೆ. 5 ವರ್ಷದಲ್ಲಿ ಪ್ರತಿ ವರ್ಷ ಒಂದೊಂದು ಯೋಜನೆಯನ್ನು ಜಾರಿಗೆ ತರುತ್ತೇನೆ ಎಂದು ತಿಳಿಸಿದರು.
ನಮ್ಮ ಪಕ್ಷಕ್ಕೂ ಅವಕಾಶ ಕೊಡಿ
ಮುಂದಿನ ದಿನಗಳಲ್ಲಿ ಈ ಯೋಜನೆ ಬಗ್ಗೆ ರಾಜ್ಯದ ಜನತೆಗೆ ತಿಳಿಸುತ್ತೇನೆ, ನಾನು ಈ ಹಿಂದೆ ಸಾಲದ ಬಗ್ಗೆ ಮಾತನಾಡಿದಾಗ ಕೆಲವರು ಲಘುವಾಗಿ ಮಾತನಾಡಿದರು. ನಾನು ರಾಜ್ಯದ ರೈತರ ಸಾಲ ಮನ್ನಾ ಮಾಡಿ ತೋರಿಸಿಲ್ವಾ? ಎಂದು ಪ್ರಶ್ನಿಸಿದರು.
ಎಲ್ಲಾ ಪಕ್ಷಗಳಿಗೂ ರಾಜ್ಯದ ಜನತೆ ಅಧಿಕಾರ ನೀಡಿದ್ದೀರಿ, ನಮ್ಮ ಪಕ್ಷಕ್ಕೂ ಅವಕಾಶ ಕೊಡಿ. ಮುಂದಿನ ದಿನಗಳಲ್ಲಿ ಯಾವುದೇ ರಾಜಕೀಯ ಪಕ್ಷಗಳ ಜತೆಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ವಿರುದ್ಧ ನನ್ನ ಹೋರಾಟ ಮುಂದುವರೆಯುತ್ತದೆ. ಬೇರೆ ಪಕ್ಷಗಳಿಗೆ ನಮ್ಮ ಪಕ್ಷದ ಅವಶ್ಯಕತೆ ಇರಬಹುದು, ಆದರೆ ನಮ್ಮ ಪಕ್ಷಕ್ಕಿಲ್ಲ ಎಂದು ರಾಮನಗರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.