ಏರು ಧ್ವನಿಯಲ್ಲಿ ಕೆಮ್ಮಿಕೊಂಡು ಭಾಷಣ ಮಾಡಿದ್ನಲ್ಲಾ, ಅವನ ಯೋಗ್ಯತೆ ನನಗೆ ಗೊತ್ತಿಲ್ಲವೇ: ಎಚ್ಡಿಕೆ ವಾಕ್ ಪ್ರಹಾರ
ರಾಮನಗರ, ಫೆ 26: ಪ್ರವಾಸೋದ್ಯಮ ಇಲಾಖೆಯ ಸಚಿವ ಸಿ.ಪಿ.ಯೋಗೇಶ್ವರ್ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಡುವಿನ ವಾಕ್ ಸಮರ ಮುಂದುವರಿದಿದೆ. ಒಂದು ದಿನದ ಹಿಂದೆ ತನ್ನನ್ನು ಟೀಕಿಸಿದ್ದಕ್ಕೆ ಇಂದು ಕುಮಾರಸ್ವಾಮಿ ಏಕವಚನದಲ್ಲಿ ಅವರಿಗೆ ತಿರುಗೇಟು ನೀಡಿದ್ದಾರೆ.
ಚನ್ನಪಟ್ಟಣದಲ್ಲಿ ಮಾತನಾಡುತ್ತಿದ್ದ ಕುಮಾರಸ್ವಾಮಿ, "ಅದೇನೋ ಪ್ರಾಧಿಕಾರ ರಚನೆ ಮಾಡಿದ್ದಾರಂತೆ. ಅಲ್ಲಿ ಕಾಫಿ,ಟೀ ಕೇಳೋಕೂ ಯಾರೂ ಗತಿಯಿಲ್ಲ. ಅವರೇ ದುಡ್ಡು ಕೊಟ್ಟು ಕಾಫಿ ತೆಗೆದುಕೊಳ್ಳಬೇಕು. ನ್ಯಾಯಯುತವಾದ ಕೆಲಸಕ್ಕೆ ಯಾರನ್ನೂ ಆತ ಇಟ್ಟುಕೊಂಡಿಲ್ಲ"ಎಂದು ಯೋಗೇಶ್ವರ್ ವಿರುದ್ದ ಕುಮಾರಸ್ವಾಮಿ ಕಿಡಿಕಾರಿದರು.
"ಎಚ್ಡಿಕೆ ಅಧಿಕಾರವಧಿಯಲ್ಲಿ ತಮ್ಮ ಕಾರ್ಯಕರ್ತರಿಗೆ ಯಾವುದೇ ಅಧಿಕಾರ ನೀಡಿಲ್ಲ''
"ಅದೇನೋ ಪ್ರವಾಸೋದ್ಯಮ ಇಲಾಖೆಯಂತೆ, ನಿನ್ನೆ ಏರುಧ್ವನಿಯಲ್ಲಿ ಕೆಮ್ಮಿಕೊಂಡು ಕೆಮ್ಮಿಕೊಂಡು ಮಾತನಾಡಿದ್ದಾನೆ. ರಾಮನಗರ, ಚನ್ನಪಟ್ಟಣ, ಮಾಗಡಿ ಬಿಟ್ಟರೆ ಬೇರೆ ಎಲ್ಲೂ ಹೋಗಲ್ಲ. ಪ್ರವಾಸೋದ್ಯಮದ ಬಗ್ಗೆ ನನಗೆ ಪಾಠ ಮಾಡುತ್ತಾನೆ"ಎಂದು ಕುಮಾರಸ್ವಾಮಿ ಏಕವಚನದಲ್ಲಿ ಹರಿಹಾಯ್ದಿದರು.
"ನಾನು ಸಿಎಂ ಆಗಿದ್ದಾಗ ಈ ಭಾಗಕ್ಕೆ ಬರಲಾಗಲಿಲ್ಲ, ಇಡೀ ರಾಜ್ಯದ ಜವಾಬ್ದಾರಿ ಇರುವುದಿಲ್ಲವೇ. ಯಡಿಯೂರಪ್ಪನವರು ಏನು ಶಿಕಾರಿಪುರದಲ್ಲೇ ಠಿಕಾಣಿ ಹೂಡಿದ್ದಾರಾ"ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ಐಎಂಎ ಹಗರಣ; ಎಚ್. ಡಿ. ಕುಮಾರಸ್ವಾಮಿ ಸ್ಪಷ್ಟನೆ
ಮೆಗಾಸಿಟಿಯಲ್ಲಿ ಸೈಟ್ ಕೊಡಿಸುತ್ತೇನೆ ಎಂದು ಮುಂಡಾಯಿಸಿದ
"ಮೆಗಾಸಿಟಿಯಲ್ಲಿ ಸೈಟ್ ಕೊಡಿಸುತ್ತೇನೆ ಎಂದು ಹೇಳಿ ಎಲ್ಲರಿಗೂ ಮುಂಡಾಯಿಸಿದ, ಕಂಡವರ ದುಡ್ಡು ಲೂಟಿ ಹೊಡೆದ. ನಾನು ಕಾಣದೇ ಇರುವಾ ಮಂತ್ರಿನಾ, ಎಷ್ಟು ಜನರನ್ನು ನಾನು ಮಂತ್ರಿ ಮಾಡಿಲ್ಲ. ಯಾವರೀತಿ ನೀನು ಮಂತ್ರಿಯಾಗಿದ್ದೆಯಾ ಎನ್ನುವುದು ಜನರಿಗೆ ಗೊತ್ತಿದೆ" ಎಂದು ಕುಮಾರಸ್ವಾಮಿ ವಾಕ್ ಪ್ರಹಾರ ನಡೆಸಿದರು.
ಕಾರ್ಯಕರ್ತರು ನನ್ನ ಬಳಿ ಬರುವುದು ನನ್ನ ಮೇಲಿನ ಪ್ರೀತಿಯಿಂದ
"ಕಾರ್ಯಕರ್ತರು ನನ್ನ ಬಳಿ ಬರುವುದು ನನ್ನ ಮೇಲಿನ ಪ್ರೀತಿಯಿಂದ, ಅವನ ಬಳಿಗೆ ಯಾಕೆ ಯಾರೂ ಹೋಗುವುದಿಲ್ಲ. ಚನ್ನಪಟ್ಟಣದಲ್ಲಿ ಯಾರಾದರೂ ಬದುಕುವುದನ್ನು ಕಂಡರೆ, ಅವನ ಬದುಕನ್ನು ಹೇಗೆ ಸರ್ವನಾಶ ಮಾಡಬೇಕು, ಅವನ ಆಸ್ತಿಯನ್ನು ಹೇಗೆ ಲಪಾಟಯಿಸಿಕೊಳ್ಳುವುದು ಇದಷ್ಟೇ ಅವನಿಗೆ ಗೊತ್ತಿರುವುದು"ಎಂದು ಕುಮಾರಸ್ವಾಮಿ ಕಿಡಿಕಾರಿದರು.
ಚನ್ನಪಟ್ಟಣದಲ್ಲಿ ನನ್ನ ವಿರುದ್ದ ಫೈಟ್ ಮಾಡಲು ಅವನಿಗೆ ಸಾಧ್ಯನಾ
"ಚನ್ನಪಟ್ಟಣದಲ್ಲಿ ನನ್ನ ವಿರುದ್ದ ಫೈಟ್ ಮಾಡಲು ಅವನಿಗೆ ಸಾಧ್ಯನಾ. ಮಂಗಳೂರಿನಲ್ಲಿ ಹೋಗಿ ಚನ್ನಪಟ್ಟಣದ ವಿಚಾರ ಮಾತನಾಡುತ್ತಾನೆ, ಅವನಿಗೆ ಬುದ್ದಿ ಬೇಡ್ವಾ. ಈ ಕ್ಷೇತ್ರದ ಬಗ್ಗೆ ಲಘುವಾಗಿ ಮಾತನಾಡಿದ್ದಾನೆ"ಎಂದು ಕುಮಾರಸ್ವಾಮಿ ಹೇಳಿದರು.
ಸಿ.ಪಿ.ಯೋಗೇಶ್ವರ್ ನೇರವಾಗಿ ಎಚ್ಡಿಕೆಗೆ ಟಾಂಗ್
"ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ನಡೆಸಿದ ಕುಮಾರಸ್ವಾಮಿ ಚನ್ನಪಟ್ಟಣ ತಾಲ್ಲೂಕಿನ ಯಾವೊಬ್ಬ ಮುಖಂಡರನ್ನು ಚನ್ನಪಟ್ಟಣ ಪ್ರಾಧಿಕಾರ ಅಧ್ಯಕ್ಷರನ್ನಾಗಿ ಮಾಡಿರಲಿಲ್ಲ. ನಾವು ಇದೀಗ ಅಧ್ಯಕ್ಷರನ್ನು ಮಾಡಿದ್ದೇವೆ" ಎಂದು ಸಿ.ಪಿ.ಯೋಗೇಶ್ವರ್ ನೇರವಾಗಿ ಎಚ್ಡಿಕೆಗೆ ಟಾಂಗ್ ನೀಡಿದ್ದರು.