ಮನೆಯೊಳಗೆ ಅಡಗಿ ಆತಂಕ ಮೂಡಿಸಿದ್ದ ಚಿರೆತೆ ಸೆರೆ ಹಿಡಿದ ಅರಣ್ಯ ಇಲಾಖೆ
ರಾಮನಗರ, ಅಕ್ಟೋಬರ್ 24: ಆಹಾರ ಹುಡುಕಿಕೊಂಡು ಗ್ರಾಮಕ್ಕೆ ಲಗ್ಗೆಯಿಟ್ಟ ಗ್ರಾಮದ ಮನೆಯೊಂದರಲ್ಲಿ ಅಡಗಿ ಕುಳಿತು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದ ಚಿರತೆಯನ್ನು ಸೆರೆಯಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾದ ಘಟನೆ ಜಾಲಮಂಗಲ ಗ್ರಾಮದಲ್ಲಿ ನಡೆದಿದೆ.
ತಾಲ್ಲೂಕಿನ ಜಾಲಮಂಗಲ ಗ್ರಾಮಕ್ಕೆ ತಡರಾತ್ರಿ ಆಹಾರ ಅರಸಿ ಬಂದ ಚಿರತೆ ಗ್ರಾಮದ ರೇವಣ್ಣ ಎಂಬುವರಿಗೆ ಸೇರಿದ ಮನೆಗೆ ಪ್ರವೇಶ ಮಾಡಿತ್ತು. ಮನೆ ಒಳಗೆ ಹೋದ ಚಿರತೆ ಗಮನಿಸಿದ ಮನೆಯವರು ಮನೆ ಬಾಗಿಲು ಮುಚ್ಚಿ ಚಿರತೆಯನ್ನು ಬಂಧಿಯಾಗಿಸಿದರು.
ಧಾರವಾಡ; ಬೋನಿಗೆ ಬಿತ್ತು ಆತಂಕ ಮೂಡಿಸಿದ್ದ ಚಿರತೆ
ಗ್ರಾಮದಲ್ಲಿ ರೇವಣ್ಣ ಅವರು ನೂತನವಾಗಿ ಮನೆಯನ್ನು ನಿರ್ಮಾಣ ಮಾಡುತ್ತಿದ್ದು. ಕೆಳ ಅಂತಸ್ತಿನಲ್ಲಿ ವಾಸವಾಗಿದ್ದರು ಮಹಡಿ ಮೂದಲ ಮನೆ ಶೇಕಡ 95 ರಷ್ಟು ಕೆಲಸ ಕೂಡ ಮುಗಿದಿತ್ತು. ಆದರೆ ಮನೆಯ ಬಾಗಿಲನ್ನು ರೇವಣ್ಣ ಅವರು ಹಾಕಿರಲಿಲ್ಲ ಹಾಗಾಗಿ ಚಿರತೆ ಒಳ ಹೋಗಿ ಮನೆಯೊಳಗೆ ಹೊಕ್ಕಿತ್ತು.
ಮನೆಯೊಳಗೆ ಚಿರತೆ ಹೋಗಿದ್ದನ್ನು ಗಮನಿಸಿದ ಮನೆಯವರು ಮನೆಯ ಬಾಗಿಲನ್ನು ಮುಚ್ಚಿ ಚಿರತೆ ಹೊರ ಬಾರದಂತೆ ಭದ್ರಪಡಿಸಿದ್ದಾರೆ. ನಂತರ ಪೋಲಿಸ್ ಇಲಾಖೆ ಮತ್ತು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ. ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಮನೆಯಿಂದ ಹೊರ ಬಾರದಂತೆ ಎಚ್ಚರಿಕೆ ವಹಿಸಿದರು. ಇತ್ತ ಬನ್ನೇರುಘಟ್ಟದ ಅರವಳಿಕೆ ವೈದ್ಯರಿಗೂ ವಿಷಯ ಮುಟ್ಟಿಸಿ ಅವರನ್ನು ಸ್ಥಳಕ್ಕೆ ಕರೆಸಿಕೊಂಡರು.
ಹುಬ್ಬಳ್ಳಿ; ಚಿರತೆ ಪ್ರತ್ಯಕ್ಷ, ವಾಕಿಂಗ್, ಆಫ್ಲೈನ್ ಕ್ಲಾಸ್ ರದ್ದು
ಬನ್ನೇರುಘಟ್ಟದಿಂದ ಬಂದ ಅರವಳಿಕೆ ತಜ್ಞ ಡಾ. ಉಮಾಶಂಕರ್ ಅವರು ಮನೆಯ ಕಿಟಕಿಯಿಂದ ಚಿರತೆಗೆ ಅರವಳಿಕೆ ನೀಡಿದ್ದರು. ತದನಂತರ ಅರಣ್ಯ ಇಲಾಖೆ ಸಿಬ್ಬಂದಿ ಬಲೆ ಬಳಸಿ ಚಿರತೆಯನ್ನು ಹಿಡಿದು ಬೋನಿನಲ್ಲಿ ಬಂಧಿಸಿದರು. ಇನ್ನು "ಚಿರತೆ ಆರೋಗ್ಯವಾಗಿದೆ, 5 ವರ್ಷದ ಹೆಣ್ಣು ಚಿರತೆಯಾಗಿದೆ," ಎಂದು ವೈದ್ಯಾಧಿಕಾರಿ ಡಾ. ಉಮಾಶಂಕರ್ ತಿಳಿಸಿದರು.
"ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ ಅದರಲ್ಲೂ ಚಿರತೆಗಳ ಉಪಟಳ ಜಾಸ್ತಿಯಾಗಿದೆ. ಜಾಲಮಂಗಲ ಗ್ರಾಮದಲ್ಲಿ ಈಗಾಗಲೇ ಮೂರು ಚಿರತೆಗಳನ್ನು ಸೆರೆ ಹಿಡಿಯಲಾಗಿದೆ. ಗ್ರಾಮದ ಸಮೀಪದ ಅರಣ್ಯದಲ್ಲಿ ಚಿರತೆಗಳು ಸಾಕಷ್ಟಿವೆ. ಹಾಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ಎಚ್ಚೆತ್ತುಕೊಳ್ಳಬೇಕಿದೆ," ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ರಾಜು ಆಗ್ರಹಿಸಿದರು.
ಇನ್ನು ಸೆರೆ ಹಿಡಿದ ಚಿರತೆಗೆ ಸೂಕ್ತ ಚಿಕಿತ್ಸೆ ನೀಡಿ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳ ನಿರ್ದೇಶನ ಪಡೆದು ರಾಷ್ಟ್ರೀಯ ಸಂರಕ್ಷಿತ ಅರಣ್ಯದಲ್ಲಿ ಬಿಡಲಾಗುವುದು. ಹೆಚ್ಚಿನ ಸಂಖ್ಯೆಯಲ್ಲಿ ಬೋನ್ ಅಳವಡಿಸಿ ಚಿರತೆ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು ಎಂದು ಡಿಎಫ್ಓ ದೇವಾರಾಜ್ ತಿಳಿಸಿದರು.
(ಒನ್ಇಂಡಿಯಾ ಸುದ್ದಿ)