ಚಿರತೆ ದಾಳಿಗೆ ಬಲಿಯಾದ ವೃದ್ಧೆ ಮನೆಗೆ ಅರಣ್ಯ ಸಚಿವರ ಭೇಟಿ
ರಾಮನಗರ, ಮೇ 17: ಮಾಗಡಿ ತಾಲ್ಲೂಕಿನ ಸೋಲೂರು ಹೋಬಳಿಯ ಕೊಟ್ಟಗಾಣಹಳ್ಳಿಯ 62 ವರ್ಷದ ಗಂಗಮ್ಮ ಎಂಬ ಮಹಿಳೆ ಚಿರತೆ ದಾಳಿಗೆ ಮೃತಪಟ್ಟ ಹಿನ್ನೆಲೆಯಲ್ಲಿ ಇಂದು ಅರಣ್ಯ ಸಚಿವರಾದ ಆನಂದ್ ಸಿಂಗ್ ಅವರು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಸಚಿವರಿಗೆ ಶಾಸಕ ಎ.ಮಂಜುನಾಥ್ ಸಾಥ್ ನೀಡಿದರು.
ಚಿರತೆ ದಾಳಿ ನಡೆಸಿದ ಸ್ಥಳ ಪರಿಶೀಲನೆ ನಡೆಸಿದ ಸಚಿವರು, ಗ್ರಾಮಸ್ಥರಲ್ಲಿ ಧೈರ್ಯ ತುಂಬಿ ಚಿರತೆ ಸೆರೆ ಹಿಡಿಯಲು ಸಾರ್ವಜನಿಕರು ಸಹ ಸಹಕರಿಸಬೇಕು. ಸಂಜೆಯಾದ ನಂತರ ಒಬ್ಬೊಬರೆ ಓಡಾಡಬೇಡಿ. ರಾತ್ರಿ ವೇಳೆ ಪಡಸಾಲೆಗಳಲ್ಲಿ ಹಾಗೂ ಮನೆಯಿಂದ ಹೊರಗೆ ನಿದ್ರೆ ಮಾಡಬೇಡಿ. ಸಂಜೆ ವೇಳೆ ಪಟಾಕಿ ಸಿಡಿಸಿ ಎಂದು ಸಲಹೆ ನೀಡಿದರು.
ಮಾಗಡಿಯಲ್ಲಿ ವೃದ್ಧೆ ಮೇಲೆ ಚಿರತೆ ದಾಳಿ; ವಾರದಲ್ಲಿ ಇದು ಎರಡನೇ ಬಲಿ
ಮೃತರ ಕುಟುಂಬಕ್ಕೆ 10 ಲಕ್ಷ ರುಪಾಯಿ ಪರಿಹಾರ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಲಾಕಡೌನ್ ನಿಂದಾಗಿ ಆರ್ಥಿಕ ಸಂಕಷ್ಟದಿಂದಾಗಿ 7.5 ಲಕ್ಷ ರೂ. ಪರಿಹಾರ ಮಂಜೂರು ಮಾಡಲಾಗಿದೆ. ಇಂದು ಅಧಿಕಾರಿಗಳೊಂದಿಗೆ ಭೇಟಿ ನೀಡಿದ್ದು, ಗ್ರಾಮದ ಜನರು, ಜನಪ್ರತಿನಿಧಿಗಳಿಂದ ಸಲಹೆಗಳನ್ನು ಸ್ವೀಕರಿಸಿ ಚರ್ಚಿಸಿ ಉತ್ತಮ ಸಲಹೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದರು.
ಈ ಭಾಗದಲ್ಲಿ ಹೆಚ್ಚಿನ ಅರಣ್ಯ ಇಲಾಖೆ ಸಿಬ್ಬಂದಿಗಳನ್ನು ನಿಯೋಜಿಸುವಂತ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಬೋನುಗಳನ್ನು ಇಡುವಂತೆ, ಸೆರೆ ಹಿಡಿಯುವ ಚಿರತೆಗಳಿಗೆ ಮೈಕ್ರೋ ಚಿಪ್ ಅಳವಡಿಸಿ, ಚಿರತೆ ಸೆರೆ ಹಿಡಿದ ಸ್ಥಳದ ವಿವರವನ್ನು ನಮೂದಿಸುವಂತೆ ಅರಣ್ಯ ಸಚಿವ ಆನಂದ್ ಸಿಂಗ್ ಅವರನ್ನು ಗ್ರಾಮಸ್ಥರು ಒತ್ತಾಯಿಸಿದರು.
ಚಿರತೆಯನ್ನು ಸೆರೆಹಿಡಿಯಲು ಅರಣ್ಯ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಈಗಾಗಲೇ ಘಟನೆ ನಡೆದ ಸ್ಥಳದ ಸುತ್ತಮುತ್ತ ಕ್ಯಾಮೆರಾ ಟ್ರ್ಯಾಪ್ ಗಳನ್ನು ಹಾಗೂ ಬೋನುಗಳನ್ನು ಅಳವಡಿಸಲಾಗಿದೆ. ಸಾರ್ವಜನಿಕರು ಸಹ ಚಿರತೆ ಕಂಡ ಕೂಡಲೇ ಅರಣ್ಯ ಇಲಾಖೆಗೆ ಕರೆ ಮಾಡಿ ಮಾಹಿತಿ ನೀಡುವಂತೆ ಗ್ರಾಮಸ್ಥರಲ್ಲಿ ಅರಣ್ಯ ಸಚಿವ ಆನಂದ್ ಸಿಂಗ್ ಮನವಿ ಮಾಡಿದರು.