ಮನೆಗೆ ನುಗ್ಗಿ ಮಗು ಕೊಂದ ಚಿರತೆ; ಅರಣ್ಯ ಸಚಿವ ಆನಂದ್ ಸಿಂಗ್ ಭೇಟಿ
ಮಾಗಡಿ, ಮೇ 09: ಚಿರತೆಯೊಂದು ತಡರಾತ್ರಿ ಮನೆಗೆ ನುಗ್ಗಿ, ಮಲಗಿದ್ದ ಮಗುವನ್ನು ಹೊತ್ತೊಯ್ದು ಕೊಂದಿರುವ ಘಟನೆ ಮಾಗಡಿ ತಾಲೂಕಿನ ಕದಿರಯ್ಯನಪಾಳ್ಯದಲ್ಲಿ ನಿನ್ನೆ ರಾತ್ರಿ ನಡೆದಿದ್ದು, ಘಟನಾ ಸ್ಥಳಕ್ಕೆ ಅರಣ್ಯ ಸಚಿವ ಆನಂದ್ ಸಿಂಗ್ ಭೇಟಿ ನೀಡಿದರು. ಮೃತ ಮಗುವಿನ ಕುಟುಂಬಕ್ಕೆ ಸಾಂತ್ವನ ಹೇಳಿದರು.
ತಾಲೂಕಿನ ಕದರಯ್ಯನಪಾಳ್ಯ ಗ್ರಾಮದಲ್ಲಿ ಚಂದ್ರಪ್ಪ ಮಂಗಳಗೌರಮ್ಮ ದಂಪತಿಯ ಪುತ್ರ ಮೂರು ವರ್ಷದ ಮಗು ಹೇಮಂತ್ ಚಿರತೆ ದಾಳಿಗೆ ಬಲಿಯಾಗಿದ್ದಾನೆ. ಮಂಗಳ ಗೌರಿ ಅವರ ತಾಯಿ ಮನೆ ಕದರಯನಪಾಳ್ಯ ಗ್ರಾಮಕ್ಕೆ ವಾರದ ಹಿಂದೆಯಷ್ಟೇ ರಜೆ ಕಳೆಯಲು ಬಂದಿದ್ದರು. ಘಟನೆಯಿಂದ ಸಿಟ್ಟಿಗೆದ್ದ ಗ್ರಾಮಸ್ಥರ ಒತ್ತಾಯದ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಸ್ಥಳಕ್ಕೆ ಭೇಟಿ ನೀಡಿದರು.
ಮನೆಯಲ್ಲಿ ಮಲಗಿದ್ದ ಮಗುವನ್ನು ಎಳೆದೊಯ್ದು ಕೊಂದು ತಿಂದ ಚಿರತೆ
ಮೃತ ಮಗುವಿನ ಕುಟುಂಬದವರು ಹಾಗೂ ಗ್ರಾಮಸ್ಥರೊಂದಿಗೆ ಸಚಿವ ಆನಂದ್ ಸಿಂಗ್ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತಾಕೀತು ಮಾಡಿದರು ಹಾಗೂ ಮಗುವಿನ ಕುಟುಂಬಕ್ಕೆ 7,50,000 ರೂಪಾಯಿ ಪರಿಹಾರ ಘೋಷಣೆ ಮಾಡಿದರು.
ಆನಂದ್ ಸಿಂಗ್ ಅವರೊಂದಿಗೆ ಸಂಸದ ಡಿ.ಕೆ.ಸುರೇಶ್, ಮಾಗಡಿ ಶಾಸಕ ಎ.ಮಂಜುನಾಥ ,ಅರಣ್ಯ ಇಲಾಖೆ ಸಿಬ್ಬಂದಿ, ಆರಕ್ಷಕ ಸಿಬ್ಬಂದಿ ಹಾಜರಿದ್ದರು.