ತೆಂಗಿನಕಲ್ಲು, ಕಬ್ಬಾಳು ಆರಣ್ಯದಲ್ಲಿನ ಪುಂಡಾನೆಗಳ ಸೆರೆ ಕಾರ್ಯಾಚರಣೆ ಪ್ರಾರಂಭ
ರಾಮನಗರ, ಆಗಸ್ಟ್, 13: ಹಲವು ಅಡೆ ತಡೆಗಳ ನಂತರ ಇಂದಿನಿಂದ ಸಾಕಾನೆ ಬಳಸಿ ತೆಂಗಿನಕಲ್ಲು ಅರಣ್ಯ ಪ್ರದೇಶ ಹಾಗೂ ಕಬ್ಬಾಳು ಅರಣ್ಯ ಪ್ರದೇಶದಲ್ಲಿ ಪುಂಡಾನೆಗಳ ಸೆರೆಗೆ ಕಾರ್ಯಾಚರಣೆ ನಡೆಸಲಾಯಿತು. ಉಪಟಳ ನೀಡುತ್ತಿರುವ ಎರಡು ಪುಂಡಾನೆಗಳ ಸೆರೆಗೆ ಅರಣ್ಯ ಇಲಾಖೆ ಐದು ಸಾಕಾನೆಗಳೊಂದಿಗೆ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದೆ. ಸುಮಾರು ಐವತ್ತಕ್ಕೂ ಹೆಚ್ಚಿನ ಸಿಬ್ಬಂದಿಗಳೊಂದಿಗೆ ಬಿ.ವಿ.ಹಳ್ಳಿ ಅರಣ್ಯ ವಲಯದಲ್ಲಿ ಬೆಳಗ್ಗೆಯಿಂದಲೇ ಕಾರ್ಯಚರಣೆ ಪ್ರಾರಂಭಿಸಿದ್ದಾರೆ.
ಕಳೆದ ಹದಿನಾಲ್ಕು ವರ್ಷಗಳಿಂದ ತೆಂಗಿನಕಲ್ಲು ಅರಣ್ಯ ಪ್ರದೇಶ ಹಾಗೂ ಕಬ್ಬಾಳು ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಸುಮಾರು 25 ಕ್ಕೂ ಹೆಚ್ಚು ಆನೆಗಳು ನೆಲೆಯೂರಿವೆ. ನಿರಂತರವಾಗಿ ರೈತರ ಜಮೀನುಗಳ ಮೇಲೆ ದಾಳಿ ಮಾಡುತ್ತಿವೆ. ಅದರೆ ಸರ್ಕಾರ ಕೇವಲ ಎರಡು ಪುಂಡಾನೆಗಳನ್ನು ಮಾತ್ರ ಸೆರೆಯಿಡಿಯಲು ಅರಣ್ಯ ಇಲಾಖೆಗೆ ಅನುಮತಿ ನೀಡಿದೆ. ಅರಣ್ಯ ಇಲಾಖೆಯವರು ಸಾಕನೆ ಬಳಸಿ ಎರಡು ಪುಂಡಾನೆಗಳನ್ನು ಮಾತ್ರ ಸೆರೆ ಹಿಡಿದರೆ ಕಾಡಾನೆ ದಾಳಿ ಕಡಿಮೆ ಆಗುವುದಿಲ್ಲ.
ಉಳಿದ ಆನೆಗಳು ನಿರಂತರವಾಗಿ ರೈತ ಜಮೀನುಗಳ ಮೇಲೆ ದಾಳಿ ಮಾಡುತ್ತವೆ. ಹಾಗಾಗಿ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ಒಂದೇ ಬಾರಿ ಈ ಭಾಗದಲ್ಲಿ ನೆಲಸಿರುವ 25ಕ್ಕೂ ಹೆಚ್ಚು ಆನೆಗಳ ಹಿಂಡನ್ನು ಸೆರೆಯಿಡಿಯಬೇಕು. ಇಲ್ಲವೇ ಜಾವೇರಿ ವನ್ಯ ಜೀವಿ ತಾಣಕ್ಕೆ ಓಡಿಸಬೇಕು ಎಂದು ಅಲ್ಲಿನ ಸ್ಥಳೀಯರು ಆಗ್ರಹಿಸಿದರು.
ಅಧಿಕಾರಿಗಳ ವಿರುದ್ಧ ಜನರ ಆರೋಪ
ಕಳೆದ ಮಂಗಳವಾರ ಚನ್ನಪಟ್ಟಣ ತಾಲ್ಲೂಕಿನ ಚನ್ನಿಗನಹೊಸಹಳ್ಳಿ ಗ್ರಾಮದಲ್ಲಿ 55 ವರ್ಷದ ಚನ್ನಮ್ಮ ಎಂಬ ವೃದ್ದಯ ಮೇಲೆ ಕಾಡಾನೆಗಳು ದಾಳಿ ಮಾಡಿ ಸಾಯಿಸಿದ್ದವು. ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಮಹಿಳೆಯ ಸಾವಿಗೆ ಕಾರಣ ಎಂದು ಗ್ರಾಮಸ್ಥರ ಆರೋಪಿಸಿದ್ದರು. ಪುಂಡಾನೆ ಸೆರೆಗೆ ಸರ್ಕಾರ ಕಳೆದ ತಿಂಗಳು ಜೂನ್ 22ರಂದೇ ಅನುಮತಿ ನೀಡಿತ್ತು. ನಿರಂತರವಾಗಿ ರೈತರಿಗೆ ಉಪಟಳ ನೀಡುತ್ತಿರುವ ಎರಡು ಕಾಡಾನೆಗಳನ್ನು ಸಾಕನೆ ಬಳಸಿ ಸೆರೆಯಿಡಿಯಲು ಮುಂದಾಗಿದ್ದಾರೆ. ಸೆರೆ ಹೀಡಿದ ಆನೆಗಳನ್ನು ಮಲೆಮಹದೇಶ್ವರ ಬೆಟ್ಟದ ಸುರಕ್ಷಿತ ಅರಣ್ಯಕ್ಕೆ ಬಿಡುವಂತೆ ಆದೇಶ ಮಾಡಿದ್ದರು. ಅದರೆ ಅಧಿಕಾರಿಗಳು ಪುಂಡಾನೆ ಸೆರೆಗೆ ಕ್ರಮ ಕೈಗೊಳ್ಳುವಲ್ಲಿ ವಿಳಂಬ ಮಾಡಿದ ಕಾರಣ ಮಹಿಳೆ ಬಲಿಯಾಗಿದ್ದಾಳೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಪುಂಡಾನೆ ಸೆರೆ ಕಾರ್ಯಾಚರಣೆಗೆ ನಿರಂತರ ಒತ್ತಡ
ಈ ವ್ಯಾಪ್ತಿಯಲ್ಲಿ 20 ರಿಂದ 25 ಕಾಡಾನೆಗಳ ಹಾವಳಿ ತಡೆಗೆ ಸರ್ಕಾರದ ಮೇಲೆ ನಿರಂತರ ಒತ್ತಡ ಹಾಕಿದ್ದೆವು. ಈ ಹಿನ್ನೆಲೆ ಕಳೆದ ತಿಂಗಳು ಪುಂಡಾನೆಗಳ ಸೆರೆಗೆ ಅನುಮತಿ ನೀಡಿದ್ದರು. ಮಾವುತರ ಪ್ರತಿಭಟನೆ ಹಿನ್ನೆಲೆಯಲ್ಲಿ ಕಾಡಾನೆಗಳನ್ನು ಓಡಿಸುವ ಕಾರ್ಯಾಚರಣೆಗೆ ತಡವಾಗಿದೆ. ದಸರಾಕ್ಕೆ ಗಜಪಡೆ ಆಗಮಿಸುವ ನಿಟ್ಟಿನಲ್ಲಿ ಮಾವುತರ, ಸರ್ಕಾರದ ನಡುವಿನ ಮನಸ್ತಾಪಕ್ಕೆ ತೆರೆ ಬಿದ್ದಿದೆ. ಬಂಡೀಪುರದಿಂದ ಸಾಕನೆಗಳನ್ನು ತಂದು ಪುಂಡಾನೆ ಸೆರೆ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. ಈ ನಿಟ್ಟಿನಲ್ಲಿ ನಾನು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ತಕರಾರು ಸರಿಪಡಿಸುವ ಭರವಸೆ
ಅಲ್ಲದೇ ಕಾವೇರಿ ವನ್ಯಜೀವಿ ವಲಯದಲ್ಲಿ ಕೈಗೊಂಡಿರು ರೈಲ್ ಕಂಬಿ ಬ್ಯಾರಿಕೇಡ್ ಕಾಮಾಗಾರಿಯನ್ನು ನಾನೇ ಖುದ್ದು ತೆರಳಿ ಪರಿಶೀಲನೆ ನಡೆಸಿದ್ದೇನೆ. ಈಗಾಗಲೇ ಶೇಕಡ 90ರಷ್ಟು ತಡೆಗೋಡೆ ನಿರ್ಮಾಣವಾಗಿದೆ. 300 ರಿಂದ 400 ಮೀಟರ್ ಪ್ರದೇಶದಲ್ಲಿ ತಕರಾರು ಇದೆ. ಆನೆಗಳನ್ನು ಎಷ್ಟೇ ಓಡಿಸಿದರೂ ಮತ್ತೆ ದಾಂಗುಡಿ ಇಡುತ್ತಿದೆ. ತಡೆಗೋಡೆ ಸಂಪೂರ್ಣವಾದರೆ ಆನೆ ಹಾವಳಿಗೆ ಶಾಶ್ವತ ಪರಿಹಾರ ಸಿಗಲಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಸಾಕಾನೆಗಳನ್ನು ಕರೆತಂದ ಸ್ಥಳಗಳು
ತೆಂಗಿನಕಲ್ಲು ಅರಣ್ಯ ಪ್ರದೇಶ ಹಾಗೂ ಕಬ್ಬಳು ಅರಣ್ಯ ಪ್ರದೇಶದಲ್ಲಿ ಹೆಚ್ಚು ದಾಂಧಲೆ ಮಾಡುತ್ತಿರುವ ಎರಡು ಆನೆಗಳನ್ನು ಗುರುತಿಸಿದ್ದೇವೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಪುಂಡಾನೆಗಳ ಚಲನವನಗಳ ಮೇಲೆ ಕಣ್ಣಿಟ್ಟಿದ್ದಾರೆ. ಇಂದಿನಿಂದ ಬಿ.ವಿ.ಹಳ್ಳಿ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ಪ್ರಾರಂಬಿಸಿದ್ದೇವೆ.
ಕಾಡಾನೆ ಸೆರೆ ಕಾರ್ಯಾಚರಣೆಗೆ ದುಬಾರೆ ಆನೆ ಶಿಬಿರದಿಂದ ಪ್ರಶಾಂತ್, ಹರ್ಷ, ಲಕ್ಷ್ಮಣ ಹಾಗೂ ಮತ್ತಿಗೋಡು ಆನೆ ಶಿಬಿರದಿಂದ ಮಹಾರಾಷ್ಟ್ರ ಭೀಮ, ಗಣೇಶ ಆನೆಗಳನ್ನು ಕರೆತರಲಾಗಿದೆ. ಕಾರ್ಯಾಚರಣೆಯ ನೇತೃತ್ವವನ್ನು ಹರ್ಷ ವಹಿಸಲಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು , ಸಿಬ್ಬಂದಿಗಳು ಹಾಗೂ ಮಾವುತರು ಸೇರಿದಂತೆ ಐವತ್ತಕ್ಕೂ ಹೆಚ್ಚು ಮಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ ಎಂದು ಅರಣ್ಯಾಧಿಕಾರಿಗಳಾದ ಸಯ್ಯದ್ ನುಜಮುದ್ದೀನ್ ಹಾಗೂ ದಿನೇಶ್ ಮಾಹಿತಿ ನೀಡಿದರು.