ನಿಂಗೇಗೌಡನದೊಡ್ಡಿ ಗ್ರಾಮದಲ್ಲಿ ಕೊನೆಗೂ ಬೋನಿಗೆ ಬಿತ್ತು ಚಿರತೆ
ರಾಮನಗರ, ಜುಲೈ.23: ಗ್ರಾಮಗಳಿಗೆ ನುಗ್ಗಿ ಕುರಿ, ಕೋಳಿಗಳನ್ನು ತಿಂದು ಉಪಟಳ ನೀಡುತ್ತಿದ್ದ ಚಿರತೆಯನ್ನು ಬೋನಿಗೆ ಕೆಡುವಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ನಿಂಗೇಗೌಡನದೊಡ್ಡಿ ಗ್ರಾಮದಲ್ಲಿ ಕಳೆದ ಐದಾರು ತಿಂಗಳಿನಿಂದ ಗ್ರಾಮಸ್ಥರಿಗೆ ತಲೆನೋವಾಗಿದ್ದ ಐದು ವರ್ಷದ ಗಂಡು ಚಿರತೆ ಕಳೆದ ರಾತ್ರಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದಿದೆ. ಸುಮಾರು ದಿನಗಳಿಂದ ಗ್ರಾಮಕ್ಕೆ ನುಗ್ಗಿ ಕುರಿ-ಮೇಕೆಗಳನ್ನು ಚಿರತೆ ಸಾಯಿಸುತ್ತಿತ್ತು.
ಸತ್ಯಮಂಗಲ ಅರಣ್ಯದ ರಸ್ತೆಯಲ್ಲಿ ಚಿರತೆಗಳ ಚಿನ್ನಾಟ!
ಇದರಿಂದ ಬೇಸತ್ತ ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದರು. ಗ್ರಾಮಸ್ಥರ ದೂರಿನ ಹಿನ್ನಲೆಯಲ್ಲಿ ಸುಮಾರು ಮೂರು ದಿನಗಳ ಹಿಂದೆ ಗ್ರಾಮದ ಹೊರವಲಯದಲ್ಲಿ ಬೋನು ಇಟ್ಟಿದ್ದರು.
ಕೊನೆಗೆ ಜಾನುವಾರುಗಳ ಮೇಲೆ ದಾಳಿಮಾಡಿ ಜನರಿಗೆ ತೊಂದರೆ ನೀಡುತಿದ್ದ ಚಿರತೆ ಬೋನಿಗೆ ಬಿದ್ದಿದೆ. ಸುದ್ದಿ ತಿಳಿಯುತ್ತಿದ್ದಂತೆ ಚಿರತೆ ನೋಡಲು ಜನರು ಮುಗಿಬಿದ್ದದ್ದು, ಚಿರತೆಯ ಆರೋಗ್ಯ ತಪಾಸಣೆ ನಡೆಸಿ, ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಪಡೆದು ಸುರಕ್ಷಿತವಾಗಿ ಕಾಡಿಗೆ ಬಿಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ತಿಂಗಳು ಉಪದ್ರ ನೀಡುತ್ತ ಅರಣ್ಯಾಧಿಕಾರಿಗಳಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದ ಚಿರತೆ ಸೆರೆಯಾಗಿತ್ತು. ಹೊಸದುರ್ಗ ಪಟ್ಟಣದಲ್ಲಿ ಚಿರತೆ ಓರ್ವ ಮಹಿಳೆ ಮೇಲೆ ದಾಳಿ ನಡೆಸಿ ಪರಾರಿಯಾಗಿತ್ತು. ಕೂಡಲೇ ಅರಣ್ಯಾಧಿಕಾರಿಗಳು ಚಿರತೆಯನ್ನು ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಿದ್ದರು.
ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿಗೆ ಬಿದ್ದ ಚಿರತೆಯನ್ನು ನೋಡಲು ಗ್ರಾಮಸ್ಥರು ಕಿಕ್ಕಿರಿದು ಸೇರಿದ್ದರು.