ಪುಂಡಾನೆಗಳನ್ನು ಸೆರೆ ಹಿಡಿಯಲು ದಸರಾ ಆನೆಗಳನ್ನು ಕರೆತಂದ ಅರಣ್ಯ ಇಲಾಖೆ
ರಾಮನಗರ, ಆಗಸ್ಟ್.31: ಹಲವು ವರ್ಷಗಳಿಂದ ಆ ಗ್ರಾಮಗಳ ರೈತರು ಕಾಡಾನೆಗಳ ಹಾವಳಿಗೆ ತತ್ತರಿಸಿ ಹೋಗಿದ್ದರು. ಕಾಡಾನೆಗಳ ದಾಳಿಯಿಂದಾಗಿ ಬೆಳೆ ಕಳೆದುಕೊಂಡ ರೈತರು ಪ್ರತಿನಿತ್ಯ ಕಣ್ಣೀರಿಡುತ್ತಿದ್ದರು.ಈ ಬಗ್ಗೆ ಸಾಕಷ್ಟು ಬಾರಿ ಅರಣ್ಯ ಇಲಾಖೆಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಇದೀಗ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ ದಸರಾ ಆನೆಗಳನ್ನು ಬಳಸಿ ಪುಂಡಾನೆಗಳನ್ನು ಸೆರೆ ಹಿಡಿಯಲು ಮುಂದಾಗಿದೆ. ಚನ್ನಪಟ್ಟಣ ತಾಲೂಕಿನ ಬಿವಿ ಹಳ್ಳಿ, ಅರಳಾಳುಸಂದ್ರ, ತೆಂಗಿನಲ್ಲು, ಕಾಡನಕುಪ್ಪೆ ಸೇರಿದಂತೆ ಹತ್ತಾರು ಹಳ್ಳಿಗಳ ರೈತರ ರಾಗಿ, ಭತ್ತ, ಜೋಳ ಸೇರಿದಂತೆ ಅನೇಕ ಬೆಳೆಗಳನ್ನು ಕಾಡಾನೆಗಳ ಹಿಂಡು ಪದೆ ಪದೇ ದಾಳಿ ನಡೆಸಿ ನಾಶ ಮಾಡುತ್ತಿದ್ದವು.
ಬಂಡೀಪುರದಿಂದ ರಾಂಪುರಕ್ಕೆ ಸಾಕಾನೆಗಳನ್ನು ಕಳುಹಿಸಿದ್ಯಾಕೆ?
ಇದರಿಂದ ಪ್ರತಿನಿತ್ಯ ಹತ್ತಕ್ಕೂ ಹೆಚ್ಚು ಗ್ರಾಮಗಳ ರೈತರು ಬೆಳೆಗಳನ್ನು ಉಳಿಸಿಕೊಳ್ಳಲಾಗದೇ ಕಣ್ಣೀರಲ್ಲೇ ಕೈತೊಳೆಯುತ್ತಿದ್ದರು. ಇದೀಗ ಎಚ್ಚೆತ್ತುಕೊಂಡಿರುವ ಅರಣ್ಯ ಇಲಾಖೆ ಸಾಕನೆಗಳನ್ನು ಬಳಸಿಕೊಂಡು ಪುಂಡಾನೆಗಳ ಸೆರೆಗೆ ಮುಂದಾಗಿದೆ.
ಕಳೆದ ಮೂರು ದಿನಗಳಿಂದ ಪುಂಡಾನೆ ಸೆರೆ ಕಾರ್ಯಚರಣೆ ನಡೆಯುತ್ತಿದ್ದು, ಇಂದು ಶುಕ್ರವಾರ ಕೂಡ ಕಾರ್ಯಚರಣೆ ಮುಂದುವರೆದಿದೆ. ಪುಂಡಾನೆ ಸೆರೆಯಾಗುವವರೆಗೆ ಗ್ರಾಮಸ್ಥರು ಕಾಡಿನ ಅಂಚಿನಲ್ಲಿ ಓಡಾಟ ನಡೆಸದಂತೆ ಡಿಎಫ್ ಓ ಕ್ರಾಂತಿಕುಮಾರ್ ಜನರಲ್ಲಿ ಮನವಿ ಮಾಡಿದರು.
ಸಕ್ರೆಬೈಲಿನಿಂದ ಉತ್ತರ ಪ್ರದೇಶಕ್ಕೆ ಹೊರಟು ನಿಂತ ಆನೆಗಳು!
ಅಂದಹಾಗೆ ಪುಂಡಾನೆಗಳು ಚನ್ನಪಟ್ಟಣ ತಾಲೂಕಿನ ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟಿದ್ದು, ಅವುಗಳಲ್ಲಿ ಪ್ರಮುಖವಾಗಿ ಎರಡು ಕಾಡಾನೆಗಳನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸರ್ಕಾರದಿಂದ ಅನುಮತಿ ಪಡೆದುಕೊಂಡಿದೆ.
ಹೀಗಾಗಿ ಶುಕ್ರವಾರ ದುಬಾರೆ ಹಾಗೂ ನಾಗರಹೊಳೆ ಆನೆ ಬಿಡಾರದಿಂದ ದಸರಾ ಆನೆಗಳಾದ ಅಭಿಮನ್ಯು, ಬಲರಾಮ, ದ್ರೋಣ ಹಾಗೂ ಹರ್ಷ ಸೇರಿದಂತೆ ಐದು ಆನೆಗಳ ಮೂಲಕ ಪುಂಡಾನೆಗಳ ಸೆರೆಗೆ ಮುಂದಾಗಿದ್ದಾರೆ. ಇನ್ನು ತೆಂಗಿನಕಲ್ಲು ಅರಣ್ಯ ಪ್ರದೇಶದಲ್ಲಿ ಮೂರು ಗುಂಪಿನ ಆನೆಗಳಿದ್ದು, ಒಟ್ಟು 17 ಆನೆಗಳು ಸಂಚಾರ ಮಾಡುತ್ತಿವೆ.
ಕೊನೆಗೂ ಬಂತು ಬಂಡೀಪುರದ ಸಾಕಾನೆಗಳಿಗೆ ಆಹಾರ!
ಅರಣ್ಯ ಇಲಾಖೆ ಪುಂಡಾನೆಗೆ ಅರವಳಿಕೆ ಚುಚ್ಚುಮದ್ದು ನೀಡಿ ಆನೆಯನ್ನು ಸೆರೆ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಗುಂಪು ಗುಂಪಾಗಿರುವಂತಹ ಆನೆಗಳು ಅಧಿಕಾರಿಗಳಿಗೆ ಚಳ್ಳೆಹಣ್ಣು ತಿನಿಸಿ ಅತ್ತಿಂದಿತ್ತ ಇತ್ತಿಂದತ್ತ ಸುತ್ತಾಡುತ್ತಿವೆ.
ಇದು ಪುಂಡಾನೆಗಳ ಸೆರೆಗೆ ಮುಂದಾಗಿರುವ ಅರಣ್ಯ ಇಲಾಖೆಗೆ ಹಿನ್ನೆಡೆಯಾಗಿದ್ದು ಗುಂಪಿನಿಂದ ಪುಂಡಾನೆಗಳನ್ನು ಬೇರ್ಪಡಿಸಿ ಸೆರೆ ಹಿಡಿಯುವುದಾಗಿ ಎಸಿಎಫ್ ರಾಮಕೃಷ್ಣ ತಿಳಿಸಿದರು. ದಸರಾ ಆನೆಗಳ ಸಹಾಯದ ಮೂಲಕ ಪುಂಡಾನೆಗಳ ಸೆರೆಗೆ ಮುಂದಾದರೂ ಪ್ರಯೋಜನವಾಗಿಲ್ಲ.
ಕಾರ್ಯಚರಣೆಯಲ್ಲಿ ನಿರತವಾಗಿರುವ ಐದು ಆನೆಗಳನ್ನು ದಸರಾಗೆ ಕಳುಹಿಸಿಕೊಡಬೇಕಿದ್ದು, ಆದಷ್ಟು ಶೀಘ್ರವಾಗಿ ಕಾರ್ಯಾಚರಣೆ ನಡೆಸಿ ಪುಂಡಾನೆಗಳನ್ನು ಸೆರೆ ಹಿಡಿಯಬೇಕಾದ ಒತ್ತಡ ಅರಣ್ಯ ಇಲಾಖೆ ಅಧಿಕಾರಿಗಳ ಮೇಲಿದೆ.