ಕನಕಪುರ ಪುಂಡಾನೆ ಕಾರ್ಯಾಚರಣೆ: ರೈತರಿಗೆ ಕಾಟ ಕೊಡುತ್ತಿದ್ದ ಆನೆ ಸೆರೆಹಿಡಿದ ಅರಣ್ಯ ಇಲಾಖೆ
ಚನ್ನಪಟ್ಟಣ, ಆಗಸ್ಟ್ 14: ತೆಂಗಿನಕಲ್ಲು ಅರಣ್ಯ ಪ್ರದೇಶ ಹಾಗೂ ಕಬ್ಬಾಳು ಅರಣ್ಯ ಪ್ರದೇಶದಲ್ಲಿ ರೈತರಿಗೆ ಉಪಟಳ ನೀಡುತ್ತಿರುವ ಎರಡು ಆನೆಗಳನ್ನು ಸೆರೆಯಿಡಿಯಲು ಅರಣ್ಯ ಇಲಾಖೆ ಕೈಗೊಂಡಿರುವ ಆಪರೇಷನ್ ಪುಂಡಾನೆ ಸೆರೆ ಕಾರ್ಯಚರಣೆಗೆ ಆರಂಭಿಕ ಯಶಸ್ಸು ಲಬಿಸಿದೆ.
ತೆಂಗಿನಕಲ್ಲು ಅರಣ್ಯ ವ್ಯಾಪ್ತಿಯ ಕಾಡಂಚಿನ ಗ್ರಾಮಗಳ ಜಮೀನುಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿರುವ ಸುಮಾರು 25 ಆನೆಗಳ ಪೈಕಿ ಅತಿ ಹೆಚ್ಚು ಉಪಟಳ ಹಾಗೂ ರೈತರ ಮೇಲೆ ದಾಳಿ ಮಾಡಿರುವ ಎರಡು ಆನೆಗಳನ್ನು ಅರಣ್ಯ ಇಲಾಖೆ ಗುರುತಿಸಿತ್ತು. ಭಾನುವಾರ ಕಾರ್ಯಾಚಾರಣೆ ಮಾಡಿ ಎರಡು ಪುಂಡಾನೆಗಳಲ್ಲಿ ಒಂದನ್ನು ಸೆರೆಯಿಡಿಯುವಲ್ಲಿ ಯಶಸ್ವಿಯಾಗಿದೆ.
ತೆಂಗಿನಕಲ್ಲು, ಕಬ್ಬಾಳು ಆರಣ್ಯದಲ್ಲಿನ ಪುಂಡಾನೆಗಳ ಸೆರೆ ಕಾರ್ಯಾಚರಣೆ ಪ್ರಾರಂಭ
ಅರಣ್ಯ ಇಲಾಖೆ ಗುರುತಿಸಿರುವ ಎರಡು ಆನೆಗಳ ಪೈಕಿ ಕಾರ್ಯಚರಣೆಯ 2ನೇ ದಿನವಾದ ಭಾನುವಾರ ತೆಂಗಿನಕಲ್ಲು ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಬಿ.ವಿ.ಹಳ್ಳಿ ಅರಣ್ಯದಲ್ಲಿ ಕಾರ್ಯಚರಣೆ ನಡೆಸಿ ಕೆಂಪಿಕಟ್ಟೆ ಪ್ರದೇಶದಲ್ಲಿ ಒಂದು ಪುಂಡಾನೆಯನ್ನು ಸಾಕಾನೆಗಳ ಸಹಾಯದಿಂದ ಅರಣ್ಯ ಇಲಾಖೆ ಸಿಬ್ಬಂದಿಗಳು ಸೆರೆ ಹಿಡಿದಿದ್ದಾರೆ.
ಅರವಳಿಕೆ ಇಂಜೆಕ್ಷನ್ ನೀಡಿ ಆನೆ ಸೆರೆ
ಕಾಡಾನೆಗಳ ಗುಂಪಿನಲ್ಲಿ ಹೆಚ್ಚು ದಾಂದಲೆ ಮಾಡುತ್ತಿದ್ದ ಪುಂಡಾನೆಯನ್ನ ಗುರುತಿಸಿದ್ದ ಅಧಿಕಾರಿಗಳು ಶನಿವಾರದಿಂದಲೇ ಅದರ ಚಲನವಲನದ ಮೇಲೆ ನಿಗಾ ಇರಿಸಿದ್ದರು. ಭಾನುವಾರ ಬೆಳಿಗ್ಗೆಯಿಂದ ಕಾರ್ಯಾಚರಣೆ ನಡೆಸಿದ ಅರಣ್ಯ ಸಿಬ್ಬಂದಿ ಹಾಗೂ ನುರಿತ ವೈದ್ಯರು ತಂಡ ಮಧ್ಯಾಹ್ನದ ವೇಳೆಗೆ ಅರವಳಿಕೆ ಇಂಜೆಕ್ಷನ್ ನೀಡಿ ಆನೆ ಸೆರೆ ಹಿಡಿದಿದ್ದಾರೆ.
ಚನ್ನಪಟ್ಟಣ; ಕಾಡಾನೆ ದಾಳಿಗೆ ಮಹಿಳೆ ಬಲಿ, ಪರಿಹಾರಕ್ಕೆ ಜನರ ಪಟ್ಟು
ಮತ್ತೊಂದು ಆನೆಗಾಗಿ ಕಾರ್ಯಾಚರಣೆ
ಅರವಳಿಕೆ ಇಂಜೆಕ್ಷನ್ ಪ್ರಭಾವದಿಂದ ಎರಡು ಕಿಲೋ ಮೀಟರ್ ಸಾಗಿದ ಪುಂಡಾನೆ ನಂತರ ಪ್ರಜ್ಞೆ ತಪ್ಪಿದೆ. ಬಳಿಕ ಸಾಕಾನೆಗಳ ಸಹಾಯದಿಂದ ಎಳೆತಂದು ಕ್ರೈನ್ ಮೂಲಕ ಲಾರಿ ಹತ್ತಿಸಿದ್ದಾರೆ. ಹಿರಿಯ ಅರಣ್ಯಾಧಿಕಾರಿಗಳು ಹಾಗೂ ಸರಕಾರದ ಸಲಹೆ ಮೇರೆಗೆ ಕಾಡಿಗೆ ಬಿಡಲಾಗುವುದು ಹಾಗೂ ಸೋಮವಾರ ಸಾಕಾನೆಗಳಿಗೆ ಬಿಡುವು ಕೊಟ್ಟು ಮತ್ತೆ ಮಂಗಳವಾರದಿಂದ ಮತ್ತೊಂದು ಪುಂಡಾನೆ ಸೆರೆ ಕಾರ್ಯಾಚರಣೆ ಆರಂಭಿಸಲಾಗುವುದು ತಿಳಿಸಿದ್ದಾರೆ.
ಸಾಕಾನೆ ಬಳಸಿ ಪುಂಡಾನೆ ಸೆರೆ
ಕಾರ್ಯಾಚರಣೆಯ ನೇತೃತ್ವವಹಿಸಿದ್ದ ಡಿ.ಎಪ್.ಓ ದೇವರಾಜ್ ಮಾತನಾಡಿ, ತೆಂಗಿನಕಲ್ಲು ಅರಣ್ಯದ ಕೆಂಪಿಕಟ್ಟೆ ಪ್ರದೇಶದಲ್ಲಿ ಸುಮಾರು 35 ವರ್ಷದ ಒಂಟಿ ಸಲಗ ಎಂದೇ ಖ್ಯಾತಿ ಪಡೆದಿರುವ ಮಕನ ( ಗಂಡು ಅಥಾವಾ ಹೆಣ್ಣು ಅಲ್ಲದ ) ಪುಂಡಾನೆ ಸೆರೆ ಹಿಡಿದ್ದಿದ್ದೇವೆ. ಪುಂಡಾನೆ ಸೆರೆ ಕಾರ್ಯಚರಣೆಯಲ್ಲಿ ದುಬಾರೆ ಆನೆ ಶಿಬಿರದ ಹರ್ಷ, ಪ್ರಶಾಂತ್, ಲಕ್ಷ್ಮಣ, ಹಾಗೂ ಮತ್ತಿಗೋಡು ಆನೆ ಕ್ಯಾಂಪ್ನ ಮಹಾರಾಷ್ಟ್ರ ಭೀಮ, ಗಣೇಶ ಆನೆಗಳ ಬಳಸಿ ಸುಮಾರು ಅರಣ್ಯ ಅಧಿಕಾರಿಗಳು,ಅರಣ್ಯ ಇಲಾಖೆಯ ಸಿಬ್ಬಂದಿ ಹಾಗೂ ಮಾವುತರು ಸೇರಿದಂತೆ ಐವತ್ತಕ್ಕೂ ಹೆಚ್ಚು ಮಂದಿ ಕಾರ್ಯಚರಣೆಯಲ್ಲಿ ಬಾಗಿಯಾಗಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.
ಎಲ್ಲಾ ಆನೆಗಳ ಸ್ಥಳಾಂತರಕ್ಕೆ ಒತ್ತಾಯ
ಇನ್ನೂ ಒಂಟಿ ಸಲಗ ಪುಂಡಾನೆಯನ್ನು ಸೆರೆ ಹಿಡಿದಿರುವ ವಿಚಾರ ತಿಳಿಯುತ್ತಿದ್ದಂತೆ ಆನೆ ವೀಕ್ಷಿಸಿಲು ನೂರಾರು ಜನ ನೆರೆದಿದ್ದರು, ಅಲ್ಲದೇ ಅರಣ್ಯ ಇಲಾಖೆ ಒಂದು ಆನೆಯನ್ನ ಹಿಡಿದಿದೆ. ಬಿ.ವಿ.ಹಳ್ಳಿ ವ್ಯಾಪ್ತಿಯಲ್ಲಿ ಮತ್ತಷ್ಟು ಆನೆಗಳಿವೆ. ಹಾಗಾಗಿ ಎಲ್ಲಾ ಆನೆಗಳನ್ನು ಸೆರೆಹಿಡಿದು ಸ್ಥಳಾಂತರ ಮಾಡುವಂತೆ ರೈತರು ಒತ್ತಾಯಿಸಿದ್ದಾರೆ.
ವಾರದ ಹಿಂದೆ ಚನ್ನಪಟ್ಟಣ ತಾಲೂಕಿನ ಚೆನ್ನಿಗನಹೊಸಹಳ್ಳಿ ಗ್ರಾಮದಲ್ಲಿ ಬೆಳಗಿನ ಜಾವ ಆನೆಗಳು ದಾಳಿ ಮಾಡಿ 55 ವರ್ಷದ ಚನ್ನಮ್ಮ ಎಂಬ ವೃದ್ಧೆಯನ್ನು ಸಾಯಿಸಿದ್ದವು. ಕಾಡನೆ ದಾಳಿಗೆ ಹೆದರಿ ಅಲ್ಲಿನ ಬಹುತೇಕ ರೈತರು ವ್ಯವಸಾಯ ಮಾಡುವುದನ್ನೇ ಬಿಟ್ಟಿದ್ದರು. ಅದರೂ ಕಾಡನೆಗಳು ಗ್ರಾಮದ ಸಮೀಪವೇ ಬಂದು ಜನ, ಜಾನುವಾರುಗಳ ಮೇಲೆ ದಾಳಿ ಮಾಡುತ್ತಿವೆ. ಹಾಗಾಗಿ ಆನೆ ಉಪಟಳಕ್ಕೆ ಶಾಶ್ವತ ಪರಿಹಾರ ನೀಡಬೇಕು ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಆಗ್ರಹಿಸಿದ ಗ್ರಾಮಸ್ಥರು ಆಗ್ರಹಿಸಿ ಪ್ರತಿಭಟನೆಯನ್ನೂ ಮಾಡಿದ್ದರು.