ಪರಿಹಾರ ಕೊಡದೇ ರಾಮನಗರದಲ್ಲಿ ಬೈಪಾಸ್ ಕಾಮಗಾರಿ ಆರಂಭ; ರೈತರಿಂದ ತಡೆ
ರಾಮನಗರ, ಜನವರಿ 20: ಪರಿಹಾರ ಹಣ ಬಿಡುಗಡೆ ಮಾಡದೇ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಕಾಮಗಾರಿ ಕೈಗೊಂಡಿದ್ದನ್ನು ವಿರೋಧಿಸಿ ರೈತರು ಕಾಮಗಾರಿಗೆ ತಡೆ ಒಡ್ಡಿದ್ದು, ಈ ಸಂದರ್ಭ ರೈತರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 275ರ ಬೈಪಾಸ್ ರಸ್ತೆ ತಾಲ್ಲೂಕಿನ ಜಯಪುರ ಮತ್ತು ದೊಡ್ಡಮಣ್ಣುಗುಡ್ಡೆ ಭಾಗದಲ್ಲಿ ಹಾದು ಹೋಗಿದೆ. ಇದಕ್ಕಾಗಿ ರೈತರ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳಲಾಗಿತ್ತು. ವಶಪಡಿಸಿಕೊಂಡಿರುವ ಕೃಷಿ ಜಮೀನಿಗೆ ಪರಿಹಾರ ಹಣ ಬಿಡುಗಡೆ ಮಾಡದೇ ಕಾಮಗಾರಿ ಪ್ರಾರಂಭಿಸಿದ್ದರಿಂದ ಸಿಟ್ಟಿಗೆದ್ದ ರೈತರು ಕಳೆದ ಎರಡು ದಿನಗಳಿಂದ ಹೆದ್ದಾರಿ ಕಾಮಗಾರಿಗೆ ತಡೆಯೊಡ್ಡಿದ್ದಾರೆ.
ಭತ್ತ ಬೆಳೆಗಾರರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್
ರೈತರ ವಿರೋಧದ ನಡುವೆಯೂ ಇಂದು ಪೊಲೀಸ್ ರಕ್ಷಣೆಯೊಂದಿಗೆ ಹೆದ್ದಾರಿ ಕಾಮಗಾರಿ ನಡೆಸಲು ಬಂದ ಇಟಾಚಿ, ಜೆಸಿಬಿ ಯಂತ್ರಗಳನ್ನು ಕೆಲಸ ಮಾಡದಂತೆ ತಡೆದು ರೈತರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ರೈತರ ನಡುವ ಕೆಲ ಕಾಲ ವಾಗ್ವಾದ ನಡೆಯಿತು.
ಪ್ರತಿಭಟನೆ ನಿರತರ ಮನವೊಲಿಸಲು ಮುಂದಾದ ಪೊಲೀಸರು ಮತ್ತು ಅಧಿಕಾರಿಗಳ ಮಾತಿಗೆ ಸೊಪ್ಪು ಹಾಕದ ರೈತರು ಮೊದಲು ನಮ್ಮ ಜಮೀನಿಗೆ ಪರಿಹಾರ ನೀಡಿ ನಂತರ ಕಾಮಗಾರಿ ನಡೆಸಿ ಎಂದು ಪಟ್ಟು ಹಿಡಿದು ಪ್ರತಿಭಟನೆ ಮುಂದುವರಿಸಿದ್ದಾರೆ.