ಭೂ ಸುಧಾರಣಾ ಕಾಯ್ದೆ ವಿರೋಧಕ್ಕೆ ಎಚ್ ಡಿಕೆ ಬೆಂಬಲ ಕೋರಿ ರೈತ ಸಂಘದ ಆಗ್ರಹ
ರಾಮನಗರ, ಜೂನ್ 23: ಕೇಂದ್ರ ಮತ್ತು ರಾಜ್ಯ ಸರ್ಕಾರ ಜಾರಿ ಮಾಡಲು ಹೊರಟಿರುವ ಭೂ ಸುಧಾರಣ ಕಾಯ್ದೆ ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾದ್ಯಂತ ಹೋರಾಟವನ್ನು ತೀವ್ರಗೊಳಿಸಿದ್ದು, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ರೈತ ಪರ ಹೋರಾಟಕ್ಕೆ ಇಳಿಯುವಂತೆ ಆಗ್ರಹಿಸಿದೆ.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಇಂದು ಚನ್ನಪಟ್ಟಣ ಪಟ್ಟಣದ ಶಾಸಕರ ಕಚೇರಿಯಲ್ಲಿ ಮನವಿ ಸಲ್ಲಿಸುವ ಮೂಲಕ ಎಚ್ಡಿಕೆಯವರನ್ನು ರೈತ ಪರವಾಗಿ ಭೂ ಸುಧಾರಣ ಕಾಯ್ದೆಯ ವಿರುದ್ಧ ಸದನ ಮತ್ತು ಸದನದ ಹೊರಗೆ ಧ್ವನಿ ಎತ್ತಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಸರ್ಕಾರದಿಂದ ದೇಶ ದ್ರೋಹದ ಕೆಲಸ: ರೈತ ಸಂಘ
ಭೂ ಸುಧಾರಣಾ ಕಾಯ್ದೆ ಅನ್ನದಾತನ ಮರಣ ಶಾಸನವಾಗಿದೆ. ಶ್ರೀಮಂತ, ಬಂಡವಾಳಶಾಹಿಗಳ ಒತ್ತಡಕ್ಕೆ ಮಣಿದು ರೈತನ ಹಿತಾಸಕ್ತಿಗಳನ್ನು ಬಲಿ ಕೊಡಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಮುಂದಾಗಿವೆ. ಕರ್ನಾಟಕ ಸರ್ಕಾರ ಭೂ-ಸುಧಾರಣಾ ಕಾಯ್ದೆ 1961ಕ್ಕೆ ತಿದ್ದುಪಡಿ ತಂದು ಕಾಯ್ದೆ ಕಲಂ 79 ಎ.ಬಿ.ಸಿ ಮತ್ತು 64 ಹಾಗೂ 80 ಅನ್ನು ತೆಗೆದು ಹಾಕಲು ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದಕೊಂಡಿದೆ.
ನೀರಾ ಚಳವಳಿಯಲ್ಲಿ ನೇತೃತ್ವ ವಹಿಸಿಕೊಂಡು ರೈತ ಪರ ಹೋರಾಟ ಮಾಡಿದ ಎಚ್.ಡಿ.ಕುಮಾರಸ್ವಾಮಿ ಅವರು ಈ ರೈತ ವಿರೋಧಿ ಕಾಯ್ದೆಯ ವಿರುದ್ಧ ಸದನದ ಒಳಗೆ ಹಾಗೂ ಹೊರಗೆ ಪ್ರತಿಭಟಿಸುವ ಮೂಲಕ ಕಾಯ್ದೆಯನ್ನು ಸರ್ಕಾರ ಹಿಂಪಡೆಯುವಂತೆ ಮಾಡಬೇಕು ಎಂದು ರಾಜ್ಯ ರೈತ ಸಂಘದ ಸಂಚಾಲಕ ಎಂ.ರಾಮು ಆಗ್ರಹಿಸಿದರು.