ಜಮೀನಿಗೆ ಹೋದವ ಮರಳಿ ಬರಲೇ ಇಲ್ಲ; ಕಾಡು ಪ್ರಾಣಿಗೆ ಆಹಾರವಾದ ರೈತ
ಮಾಗಡಿ, ನವೆಂಬರ್ 6: ವ್ಯಕ್ತಿಯೊಬ್ಬರು ಕಾಡು ಪ್ರಾಣಿಯ ದಾಳಿಗೆ ತುತ್ತಾಗಿ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ಕುದೂರು ಹೋಬಳಿಯ ಬೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕೆಂಚಣ್ಣ (57) ಕಾಡು ಪ್ರಾಣಿಗೆ ಬಲಿಯಾದ ರೈತ. ಮೂರು ದಿನಗಳ ಹಿಂದೆ ಜಮೀನಿಗೆ ತೆರಳಿದ್ದ ರೈತ ಕೆಂಚಣ್ಣ ನಾಪತ್ತೆಯಾಗಿದ್ದರು. ಕುಟುಂಬದವರು ಕೆಂಚಣ್ಣ ಸಂಬಂಧಿಕರ ಮನೆಗೆ ಹೋಗಿರಬಹುದು ಎಂದುಕೊಂಡಿದ್ದರು. ಆದರೆ ನಿನ್ನೆ ಸಂಜೆ ವೇಳೆಗೆ ಜಮೀನಿನ ಸಮೀಪದ ಕಾಡು ಪ್ರದೇಶದಲ್ಲಿ ಕಾಲನ್ನು ಬಿಟ್ಟು ದೇಹದ ಅಂಗಾಂಗಳನ್ನು ತಿಂದಿರುವ ಸ್ಥಿತಿಯಲ್ಲಿ ಕೆಂಚಣ್ಣನ ದೇಹ ಸಿಕ್ಕಿದೆ. ಅಲ್ಲಿಂದ ಸ್ವಲ್ಪ ದೂರದಲ್ಲಿ ತಲೆ ಕೂಡ ಪತ್ತೆಯಾಗಿದೆ.
ಕಾಡುಪ್ರಾಣಿ ದಾಳಿ: ಪರಿಹಾರ ಧನ ಹೆಚ್ಚಿಸಿದ ಸರಕಾರ
ಮೃತ ಕೆಂಚಣ್ಣನ ಮೇಲೆ ಚಿರತೆ ದಾಳಿ ಮಾಡಿ ಕೊಂದು ದೇಹವನ್ನು ತಿಂದಿದೆ ಎಂದು ಆರೋಪಿಸಿ ಬೆಟ್ಟಹಳ್ಳಿ ಕಾಲೋನಿ ಮತ್ತು ರಾಮನಹಳ್ಳಿ ಕಾಲೋನಿಯ ಜನರು ಬೆಟ್ಟಹಳ್ಳಿ ಶಿವಗಂಗೆ ರಸ್ತೆಯನ್ನು ತಡೆದು ರಸ್ತೆಯ ಮೇಲೆ ಮೃತನ ಅಂಗಾಂಗ ಇಟ್ಟು ಪ್ರತಿಭಟನೆ ನಡೆಸಿದರು.
ಇತ್ತೀಚಿನ ದಿನಗಳಲ್ಲಿ ಗ್ರಾಮದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಹಲವಾರು ಜಾನುವಾರುಗಳು ಬಲಿಯಾಗಿವೆ. ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕೆಂಚಣ್ಣನ ಸಾವಿಗೆ ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು. ಕೆಂಚಣ್ಣನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು, ಚಿರತೆ ಸೆರೆಗೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಈ ಸಂಬಂಧ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು : ಚಿರತೆ ಭೀತಿಯಲ್ಲೇ ಗ್ರಾಮಸ್ಥರ ಬದುಕು
ಬೆಟ್ಟಹಳ್ಳಿ ಗ್ರಾಮದ ಸನಿಹದಲ್ಲೇ ವೀರಾಸಾಗರ ಅರಣ್ಯ ಪ್ರದೇಶವಿದ್ದು, ಕೆಲ ದಿನಗಳ ಹಿಂದೆ ಆನೆ ತುಳಿದು ರೈತರೊಬ್ಬರು ಮೃತಪಟ್ಟಿದ್ದರು. ಘಟನೆ ಮಾಸುವ ಮುನ್ನವೇ ಚಿರತೆ ದಾಳಿಗೆ ಕೆಂಚಣ್ಣ ಬಲಿಯಾಗಿದ್ದು ಜನರಲ್ಲಿ ಆತಂಕ ಹೆಚ್ಚಿಸಿದೆ.