ರಾತ್ರಿ ಹೊತ್ತು ಅಪಘಾತ ತಪ್ಪಿಸಲು ಕನ್ನಡಕ ಆವಿಷ್ಕರಿಸಿದ ರಾಮನಗರದ ತುಷಾರ್
ಕನಕಪುರ, ಜುಲೈ 31: ವಾಹನ ಚಲಾಯಿಸುವಾಗ ಸ್ವಲ್ಪ ಯಾಮಾರಿದರೂ ಪ್ರಾಣಕ್ಕೆ ಕುತ್ತು. ರಾತ್ರಿ ವೇಳೆಯಂತೂ ಮೈಯೆಲ್ಲಾ ಕಣ್ಣಾಗಿದ್ದರೂ ಸಾಲದು. ನಿದ್ದೆ ಮಂಪರಿನಲ್ಲಿ ಕಣ್ಣೆವೆ ಒಂದಿಷ್ಟು ಮುಚ್ಚಿದರೂ ಮುಗಿಯಿತು. ರಾತ್ರಿ ವೇಳೆ ನಿದ್ದೆ ಮಂಪರಿನಲ್ಲಿ ಅಪಘಾತವಾಗಿ ಎಷ್ಟೋ ಜನ ಸಾವಿಗೀಡಾಗಿರುವ ಉದಾಹರಣೆಗಳು ದೊರೆಯುತ್ತವೆ.
ಹೀಗೆ ತೂಕಡಿಸಿ ಪ್ರಾಣ ಕಳೆದುಕೊಳ್ಳುವುದರ ಬದಲು ಈ ಕನ್ನಡಕ ಹಾಕಿಕೊಂಡರೆ ಇದು ನಿಮ್ಮ ಪ್ರಾಣವನ್ನು ಉಳಿಸಬಹುದು. ನಿದ್ದೆಗೆ ಜಾರುತ್ತಿದ್ದಂತೆ ನಿಮ್ಮನ್ನ ಎಚ್ಚರಿಸುವ ಕೆಲಸವನ್ನು ಈ ಕನ್ನಡಕ ಮಾಡುತ್ತದೆ ಎನ್ನುತ್ತಿದ್ದಾರೆ ರಾಮನಗರದ ತುಷಾರ್.
ಕರ್ನಾಟಕದಲ್ಲಿ JSW ಪೇಂಟ್ಸ್ ನಿಂದ "ಯಾವುದೇ ಬಣ್ಣಕ್ಕೆ ಒಂದೇ ಬೆಲೆ" ಯೋಜನೆ
ನಿದ್ದೆ ಮಂಪರಿನಲ್ಲಿ ಸಂಭವಿಸುವ ಅನಾಹುತಗಳನ್ನು ತಪ್ಪಿಸುವ ಉದ್ದೇಶದಿಂದ ಕನ್ನಡಕವನ್ನು ಆವಿಷ್ಕರಿಸಿರುವುದು ಧರ್ಮಸ್ಥಳದ ಎಸ್ಡಿಎಂ ಪಾಲಿಟೆಕ್ನಿಕ್ ಕಾಲೇಜಿನ ಎಲೆಕ್ಟ್ರಿಕಲ್ ಕಮ್ಯೂನಿಕೇಷನ್ ವಿದ್ಯಾರ್ಥಿ ತುಷಾರ್. ರಾಮನಗರ ಜಿಲ್ಲೆಯ ಕನಕಪುರದ ರೈಸ್ಮಿಲ್ ನಿವಾಸಿ ಶ್ರೀನಿವಾಸ್ ಹಾಗೂ ರೂಪಾ ದಂಪತಿ ಮಗನಾಗಿರುವ ತುಷಾರ್, ನಿದ್ದೆ ಮಂಪರಿನಿಂದ ಕಣ್ಣು ಮುಚ್ಚಿದ ತಕ್ಷಣ ಅಲಾರಂ ಶಬ್ದ ಮಾಡುವಂಥ ಕನ್ನಡಕವನ್ನು ಕಂಡುಹಿಡಿದಿದ್ದಾರೆ.
ಈ ಕನ್ನಡಕಕ್ಕೆ ಆರ್ಡಿನೋ ನ್ಯಾನೋ, ಐಆರ್ ಸೆನ್ಸರ್, ಆರ್ಡಿನೋ ಬಜರ್, ಗಾಗಲ್, 9 ವೋಲ್ಟ್ ಸಾಮರ್ಥ್ಯದ 3000 ಎಂಎಚ್ ಬ್ಯಾಟರಿಯನ್ನು ಬಳಸಲಾಗಿದೆ. ಸುಮಾರು 1500 ರೂಪಾಯಿ ಖರ್ಚಿನಲ್ಲೇ ಕನ್ನಡಕ ತಯಾರಾಗಿದೆ.
ಕನ್ನಡಕದ ಗಾಜಿನಲ್ಲಿ ಅಳವಡಿಸಿರುವ ಐಆರ್ ಸೆನ್ಸರ್ ಎಲೇಕ್ಟ್ರೊ ಮ್ಯಾಗ್ನೆಟಿಕ್ ಸಿಗ್ನಲ್ ಗಳನ್ನು ಕಣ್ಣಿಗೆ ಬಿಡುತ್ತದೆ. ಆ ಸಮಯದಲ್ಲಿ ಕಣ್ಣಿನ ರೆಪ್ಪೆ ಮುಚ್ಚಿದಾಗ ಸೆನ್ಸರ್ ಆರ್ಡಿನೋ ಯುನೋ ಮಾಹಿತಿ ರವಾನಿಸಿ ಯುನೋ ಬಜರ್ ಚಾಲು ಮಾಡುತ್ತದೆ. ಅಲಾರಂ ಶಬ್ದರಿಂದ ಚಾಲಕ ನಿದ್ದೆ ಮಂಪರಿನಿಂದ ಎಚ್ಚರವಾಗುತ್ತಾನೆ.
ಗ್ರೀನ್ ಟೀಯಾಯ್ತು, ಇನ್ಮುಂದೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಗ್ರೀನ್ ಕಾಫಿ
ಈ ಕನ್ನಡಕ ಆರಂಭಿಕ ಹಂತದಲ್ಲಿದ್ದು, ಸುಧಾರಿಸಿ ಹೊರತಂದರೆ ಎಷ್ಟೋ ಮಂದಿಯ ಜೀವಹಾನಿ ತಪ್ಪುತ್ತದೆ ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಾರೆ ತುಷಾರ್.
ತುಷಾರ್, ಕನಕಪುರದಿಂದ ಉಜಿರೆಯ ಕಾಲೇಜಿಗೆ ಹೋಗಲು ಬಸ್ ನಲ್ಲಿ ರಾತ್ರಿ ಪ್ರಯಾಣ ಮಾಡುವ ಸಮಯ, ಚಾಲಕರು ಮಂಪರಿನಲ್ಲಿದ್ದುದನ್ನು ಗಮನಿಸಿದ್ದಾರೆ. ಹೀಗಾಗಿಯೇ ಇಂಥ ಕನ್ನಡಕ ಆವಿಷ್ಕರಿಸುವ ಆಲೋಚನೆ ಹೊಳೆದಿದೆ ಎನ್ನುತ್ತಾರೆ.