ಚನ್ನಪಟ್ಟಣದಲ್ಲಿ ಆತಂಕ ಮೂಡಿಸಿದ್ದ ರಕ್ತ ಹುಣಸೆ; ರಹಸ್ಯ ಬಿಚ್ಚಿಟ್ಟ ತಜ್ಞರು
ಚನ್ನಪಟ್ಟಣ, ಅಕ್ಟೋಬರ್ 23: ಚನ್ನಪಟ್ಟಣ ತಾಲ್ಲೂಕಿನ ಎನ್.ಆರ್.ಕಾಲೋನಿ ಗ್ರಾಮ ಈಚೆಗೆ ಸುದ್ದಿಯಾಗಿದ್ದು ವಿಚಿತ್ರವಾದ ಹುಣಸೆ ಮರವೊಂದರಿಂದ. ಇಲ್ಲಿನ ಹುಣಸೆ ಮರವೊಂದರಲ್ಲಿ ಬಿಡುತ್ತಿದ್ದ ರಕ್ತದ ಬಣ್ಣದ ಹುಣಸೆ ಹಣ್ಣು ಅಚ್ಚರಿಗೆ ಕಾರಣವಾಗಿತ್ತು.
ಚನ್ನಪಟ್ಟಣದಲ್ಲಿ ರಕ್ತದ ಬಣ್ಣದ ಹುಣಸೆ; ಏನಿದರ ಹಿಂದಿನ ಕಥೆ?
ನೋಡಲು ಮಾಮೂಲಿ ಹುಣಸೆ ಹಣ್ಣಿನಂತೆ ಕಂಡರೂ ಒಳಗೆ ಕಡುಗೆಂಪು ಬಣ್ಣದ ತಿರುಳು ಕಾಣಿಸಿಕೊಂಡಿದ್ದು ಆಶ್ಚರ್ಯದೊಂದಿಗೆ ಕುತೂಹಲಕ್ಕೂ ಎಡೆಮಾಡಿಕೊಟ್ಟಿತ್ತು. ಗ್ರಾಮದ ಕೆಲವರು ಇದಕ್ಕೆ ಧಾರ್ಮಿಕ ಕಾರಣವನ್ನೂ ನೀಡಿದ್ದರು. ಇಲ್ಲಿನ ಮಹಿಳೆಯರು ಇದರಲ್ಲಿ ಅಡುಗೆಯನ್ನೂ ಮಾಡಿ ಪ್ರಯೋಗಿಸಿದ್ದರು. ಇದೀಗ ಈ ಹುಣಸೆ ಹಣ್ಣಿನ ಹಿಂದಿನ ಅಸಲಿತನವನ್ನು ತಜ್ಞರು ಬಿಡಿಸಿದ್ದಾರೆ. ಹುಣಸೆ ಕುರಿತ ತಜ್ಞರ ವಿಶ್ಲೇಷಣೆ ಇಲ್ಲಿದೆ...
ಹುಣಸೆ ಹಣ್ಣು ಕೆಂಪಾಗಿದ್ದೇಕೆ?
ಚನ್ನಪಟ್ಟಣ ಮತ್ತು ರಾಮನಗರದ ಗಡಿ ಸಮೀಪದ ಜಮೀನಿನಲ್ಲಿ ಈ ವಿಚಿತ್ರ ಹುಣಸೆ ಮರವಿದೆ. ಸುಮಾರು 25 ವರ್ಷದ ಈ ಮರ ಕಳೆದ 8 ವರ್ಷಗಳಿಂದ ಫಸಲು ನೀಡುತ್ತಿದೆ. ನೋಡಲು ಹುಣಸೆ ಕಾಯಿಯಂತೆ ಕಂಡರೂ ಇದನ್ನು ಮುರಿದರೆ ಒಳಗೆಲ್ಲ ಕೆಂಪು ಬಣ್ಣ ತುಂಬಿಕೊಂಡಿದೆ. ಹೀಗಾಗೇ ಇದಕ್ಕೆ ರಕ್ತ ಹುಣಸೆ ಎಂದು ಕರೆಯುತ್ತಾರೆ.
ರಕ್ತ ಹುಣಸೆ ಕೆಂಪು ತಿರುಳನ್ನು ಹೊಂದಿದ್ದು, ಅದು ಅಪರೂಪದ ತಳಿ. ಈ ಹುಣಿಸೆ ಹಣ್ಣಿನ ಬಲಿಯದ ಬೀಜಕೋಶಗಳ ಕೆಂಪು ಬಣ್ಣವು ನಿರ್ವಾತಗಳಲ್ಲಿ "ಆಂಥೋಸಯಾನಿನ್" ಇರುವುದರಿಂದ ಉಂಟಾಗುತ್ತದೆ. ಆಂಥೋಸಯಾನಿನ್ ಒಂದು ವರ್ಣದ್ರವ್ಯವಾಗಿದ್ದು ಅದು ನೈಸರ್ಗಿಕವಾಗಿ ನೀರಿನಲ್ಲಿ ಕರಗಬಲ್ಲದು.
ಆಯುರ್ವೇದದಲ್ಲಿ ಈ ಹುಣಸೆಯದ್ದು ಬಹುಬಳಕೆ
ರಕ್ತ ಹುಣಸೆ ಹಣ್ಣು ಆಯುರ್ವೇದದಲ್ಲಿ ಅನೇಕ ವಿಧದಲ್ಲಿ ಉಪಯೋಗಕ್ಕೆ ಬರುತ್ತದೆ. ರಾಜ್ಯದಲ್ಲಿ ಹುಣಸೆಯಲ್ಲಿ ಹುಣಸೆ, ಮಲೆನಾಡ ಹುಣಸೆ, ಕೆಂಪು ಹುಣಸೆಗಳೆಂದು ಬೇರೆಬೇರೆ ತಳಿಗಳ ಪ್ರಬೇಧಗಳಿದ್ದು, ಎಲ್ಲವೂ ಉಪಯುಕ್ತವಾಗಿವೆ. ನಿತ್ಯೋಪಯೋಗಿ ಹುಣಸೆ ಹಣ್ಣಿನ ಮರಗಳು ಅಲ್ಲಲ್ಲಿ ಕಂಡು ಬರುತ್ತಿದ್ದರೂ ಬಹುಪಯೋಗಿ ಕೆಂಪು ಹುಣಸೆ ಮರಗಳು ತೀರಾ ವಿರಳ. ಶಿರಸಿ, ಸಿದ್ದಾಪುರ ಅರಣ್ಯ ಪ್ರದೇಶದಲ್ಲಿ ಇದು ಹೆಚ್ಚಾಗಿ ಕಂಡುಬರುತ್ತವೆ.
ಕರಾವಳಿಯಲ್ಲೂ ಖರ್ಜೂರ ಬೆಳೆದ ಸಾದಿಕ್
ಆಂಧ್ರ ಪ್ರದೇಶದಲ್ಲಿ ನೈಸರ್ಗಿಕ ಬಣ್ಣ ತಯಾರಿಕೆಗೆ ಬಳಕೆ
ಜೈವಿಕ ಬಣ್ಣ ತಯಾರಿಕೆಗೆ ಈ ಹುಣಸೆ ಹೇಳಿಮಾಡಿಸಿದ್ದು. ಆದರೆ ಈ ಬಗ್ಗೆ ರೈತರಲ್ಲಿ ತಿಳವಳಿಕೆ ಇಲ್ಲದಿರುವುದರಿಂದ ಕೆಂಪು ಹುಣಸೆ ಹಣ್ಣಿನ ಮರಗಳನ್ನು ರೈತರು ವಾಣಿಜ್ಯ ದೃಷ್ಟಿಯಿಂದ ಬೆಳೆಯುತ್ತಿಲ್ಲ ಎನ್ನುತ್ತಾರೆ ತಜ್ಞರು. "ಆಂಧ್ರದಲ್ಲಿ ಈ ಹುಣಸೆಯನ್ನು ನೈಸರ್ಗಿಕ ಬಣ್ಣ ತಯಾರಿಕೆಗೆ ಹೆಚ್ಚಾಗಿ ಬಳಸುತ್ತಿದ್ದಾರೆ. ವಾಣಿಜ್ಯಿಕವಾಗಿ ಹೆಚ್ಚಿನ ಇಳುವರಿ ನೀಡುತ್ತದೆ ಮತ್ತು ಸಂಪೂರ್ಣವಾಗಿ ವಿಷಕಾರಿಯಲ್ಲದ ಕೆಂಪು ಬಣ್ಣವು ಅದರ ದೊಡ್ಡ ವಾಣಿಜ್ಯ ಪ್ರಯೋಜನವಾಗಿದೆ. ಈ ಹಿಂದೆ ಬೀಜಗಳಿಂದ ತೆಗೆದ ಪಿಷ್ಟ ಮತ್ತು ಎಣ್ಣೆಯನ್ನು ಜವಳಿ ಮತ್ತು ಬಣ್ಣದ ಉದ್ಯಮದಲ್ಲಿ ವ್ಯಾಪಕವಾಗಿ ಬಳಸಲಾಗುತ್ತಿತ್ತು" ಎಂದು ತೋಟಗಾರಿಕೆ ಹಿರಿಯ ವಿಜ್ಞಾನಿ ಡಾ.ಬಿ. ಶ್ರೀನಿವಾಸುಲು ವಿವರಿಸುತ್ತಾರೆ.
ಯಾವ ಯಾವ ಸಮಸ್ಯೆಗೆ ಕೆಂಪು ಹುಣಸೆ ಉಪಯೋಗಕಾರಿ
ಈ ಕೆಂಪು ಹುಣಸೆಯಲ್ಲಿ ಆರೋಗ್ಯಕ್ಕೆ ಅವಶ್ಯವಿರುವ ಹಲವು ಅಂಶಗಳಿವೆ. ಕರುಳಿಗೆ ಸಂಬಂಧಿಸಿದ ರೋಗಗಳು, ಕಾಮಾಲೆ, ಅತಿಸಾರ, ಪಿತ್ತ ವಿಕಾರ, ಕಾಡಿಗೆಮ್ಮು ಮುಂತಾದ ರೋಗಗಳನ್ನು ಗುಣಪಡಿಸಲು ಕೆಂಪು ಹುಣಸೆ ಹಣ್ಣನ್ನು ಔಷಧಿಯಾಗಿ ಬಳಸಲಾಗುತ್ತಿದೆ. ಕೆಂಪು ಹುಣಸೆ ಹಣ್ಣಿನಲ್ಲಿ ಟರ್ಟಾರಿಕ್ ಆಸಿಡ್ ಇರುವುದರಿಂದ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಆಹಾರ ಹೆಚ್ಚು ರುಚಿಸುವಂತೆ ಮಾಡುವುದು ಇದರ ಮುಖ್ಯ ಗುಣ. ಇನ್ನೂ ಅನೇಕ ರೀತಿಯಲ್ಲಿ ಆಯುರ್ವೇದ ವೈದ್ಯ ಪದ್ಧತಿಯಲ್ಲಿ ಕೆಂಪು ಹುಣಸೆ ಹಣ್ಣು ಬಳಸಲಾಗುತ್ತದೆ ಎಂದು ಗದಗದ ಆಯುರ್ವೇದ ಮಹಾ ವಿದ್ಯಾಲಯ ಆಸ್ಪತ್ರೆಯ ಡಾ.ಎಸ್.ಬಿ.ನಿಡಗುಂದಿ ವಿವರಿಸಿದ್ದಾರೆ.