ಗುಜರಾತ್, ಹಿಮಾಚಲದಲ್ಲೂ ಇವಿಎಂ ಮೋಸ ಸಾಬೀತು: ರಾ.ಲಿಂ.ರೆಡ್ಡಿ
ರಾಮನಗರ, ಡಿಸೆಂಬರ್ 19: ಇವಿಎಂ ಮತ ಯಂತ್ರದಲ್ಲಿ ಮೋಸವಿದೆ ಎಂಬುದು ಎರಡು ರಾಜ್ಯಗಳ ಚುನಾವಣೆಯಲ್ಲಿ ಸಾಬೀತಾಗಿದೆ. ಅದ್ದರಿಂದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಮತ ಯಂತ್ರದ ಬದಲಾಗಿ ಬ್ಯಾಲೆಟ್ ಪೇಪರ್ ಉಪಯೋಗಿಸಿದರೆ ಸರಿ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಅಭಿಪ್ರಾಯಪಟ್ಟರು.
ಇಲ್ಲಿನ ಮಾಗಡಿಯಲ್ಲಿ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಇಪ್ಪತ್ತು ವರ್ಷಗಳಿಂದ ಬಳಕೆಯಲ್ಲಿರುವ ಇವಿಎಂ ಮತಯಂತ್ರದ ಬಗ್ಗೆ ಯಾವುದೇ ವಿವಾದವಿರಲಿಲ್ಲ ಎಂದರು.
ಬಿಜೆಪಿ ಜಯಭೇರಿ: ಮಾಜಿ ಪ್ರಧಾನಿ ದೇವೇಗೌಡ ಪ್ರತಿಕ್ರಿಯೆ
ಅದರೆ ಇವಿಎಂ ಮತಯಂತ್ರ ಬಳಸಿದ ಉತ್ತರ ಪ್ರದೇಶದ ಲೋಕಸಭೆ ಚುನಾವಣೆಯಲ್ಲಿ ಶೇಕಡಾ ಅರವತ್ತರಷ್ಟು ಮತದಾನವಾಗಿದೆ. ಅದರೆ ಅದೇ ರಾಜ್ಯದಲ್ಲಿ ಬ್ಯಾಲೆಟ್ ಮತಪತ್ರ ಬಳಸಿದ ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಚುನಾವಣೆಗಳಲ್ಲಿ ಕೇವಲ ಶೇಕಡಾ ಮೂವತ್ತರಷ್ಟು ಮತ ಚಲಾವಣೆಯಾಗಿದೆ ಎಂದು ಹೇಳಿದರು.
ಇದು ಹೇಗೆ ಸಾದ್ಯ ಎಂದು ಪ್ರಶ್ನಿಸಿದ ಅವರು, ಮತಯಂತ್ರದ ಬದಲಾಗಿ ಬ್ಯಾಲೆಟ್ ಪೇಪರ್ ಬಳಸಿದರೆ ಒಳಿತು. ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಚುನಾವಣೆ ಫಲಿತಾಂಶದಿಂದ ನಮ್ಮ ರಾಜ್ಯದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ರಾಜ್ಯದ ಬಿಜೆಪಿ ಮುಖಂಡರು ದೆಹಲಿಯಲ್ಲಿ ಕುಳಿತು, ರಾಜ್ಯದ ರೈತರು ಮತ್ತು ಜನತೆ ಸಂಕಷ್ಟದಲ್ಲಿದ್ದಾರೆ, ಸಹಾಯ ಮಾಡಿ ಎಂದು ಕೇಂದ್ರದ ಮೇಲೆ ಒತ್ತಡ ತಂದಿದ್ದರೆ ಇಲ್ಲಿನ ಜನರಿಗೂ ಬಿಜೆಪಿ ಮೇಲೆ ಕರುಣೆ ಇರುತ್ತಿತ್ತು. ಅದರೆ ಬಿಜೆಪಿ ಈ ಹಿಂದೆ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಹಗರಣಗಳನ್ನೇ ಮಾಡಿದೆ ಎಂದು ಆರೋಪಿಸಿದರು.
ಪರೇಶ್ ಮೇಸ್ತಾ ಪ್ರಕರಣವನ್ನು ಸಿಬಿಐಗೆ ವಹಿಸಲು ನಾವು ತೀರ್ಮಾನ ಮಾಡಿದ್ದೇವೆ. ಆದರೂ ಬಿಜೆಪಿಯವರು ತಮ್ಮ ಪ್ರತಿಭಟನೆಗಳನ್ನು ಮುಂದುವರಿಸಿರುವುದು ಏಕೆ ಎಂದು ರಾಜ್ಯದ ಜನತೆಗೂ ಮತ್ತು ಮಾಧ್ಯಮದವರಿಗೂ ಗೊತ್ತಿದೆ. ಅವರ ವರ್ತನೆ ಸರಿಯೇ ಎಂದು ಪ್ರಶ್ನಿಸಿದರು.