ಬೆಳ್ಳಂಬೆಳಿಗ್ಗೆ ಸಾಸಲಪುರ ಗ್ರಾಮಕ್ಕೆ ನುಗ್ಗಿ ದಾಂಧಲೆ ನಡೆಸಿದ ಒಂಟಿಸಲಗ
ರಾಮನಗರ, ಮಾರ್ಚ್ 06: ಬೆಳ್ಳಂಬೆಳಿಗ್ಗೆ ಒಂಟಿ ಸಲಗ ಗ್ರಾಮಕ್ಕೆ ನುಗ್ಗಿ ಆನೆ, ಹಸು, ಎಮ್ಮೆ, ಬೈಕ್ ಮೇಲೆ ದಾಳಿ ಮಾಡಿ ದಾಂಧಲೆ ನಡೆಸಿರುವ ಘಟನೆ ತಾಲೂಕಿನ ಸಾತನೂರು ಸಮೀಪದ ಸಾಸಲಪುರ ಮತ್ತು ಹಲಸಿನಮರದದೊಡ್ಡಿ ಗ್ರಾಮಗಳಲ್ಲಿ ನಡೆದಿದೆ.
ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಒಂಟಿ ಸಲಗವೊಂದು ಬೆಳಿಗ್ಗೆ 8 ಗಂಟೆಗೆ ಮೊದಲು ಸಾಸಲಪುರ ಗ್ರಾಮಕ್ಕೆ ನುಗ್ಗಿ ಮರೀಗೌಡ ಎಂಬುವರಿಗೆ ಸೇರಿದ ಎರಡು ಸೀಮೆ ಹಸುಗಳ ಮೇಲೆ ದಾಳಿಮಾಡಿ ಕಾಲಿನಿಂದ ತುಳಿದು ಎರಡು ಹಸುಗಳನ್ನು ಕೊಂದಿದೆ.
ನಂತರ ಪಕ್ಕದ ಗ್ರಾಮ ಹಲಸಿನಮರದೊಡ್ಡಿ ಗ್ರಾಮಕ್ಕೆ ನುಗ್ಗಿದ ಕಾಡಾನೆ ಕೆಂಪೇಗೌಡ ಎಂಬುವವರಿಗೆ ಸೇರಿದ ಎಮ್ಮೆಯನ್ನು ತಿವಿದು ಕೊಂದಿದೆ, ಜೊತೆಗೆ ಗ್ರಾಮದ ಇತರೆ ನಾಟಿ ಹಸುಗಳ ಮೇಲೆಯು ಹಲ್ಲೆ ನಡೆಸಿ ಗಾಯಗೊಳಿಸಿದೆ. ಅಲ್ಲದೇ ಮಲ್ಲೇಗೌಡನ ದೊಡ್ಡಿಯಲ್ಲಿ ಬೈಕ್ ಯೊಂದನ್ನು ತುಳಿದು ಧ್ವಂಸಗೊಳಿಸಿದೆ.
ಕಾಡಾನೆಯ ದಾಳಿಯಿಂದ ಜನರಲ್ಲಿ ಕೆಲಕಾಲ ಆತಂಕ ಮನೆಮಾಡಿತ್ತು, ನಂತರ ಗ್ರಾಮಸ್ಥರು ಪಟಾಕಿ ಸಿಡಿಸಿ ಗಂಟೆಗೂ ಹೆಚ್ಚು ಕಾಲ ಹರಸಾಹಸ ಪಟ್ಟು ಕಾಡಿಗೆ ಆನೆಯನ್ನು ಓಡಿಸಿದ್ದಾರೆ. ಪಟಾಕಿ ಶಬ್ಧ ಹಾಗೂ ಜನರ ಕಿರುಚಾಟಕ್ಕೆ ಬೆದರಿದ ಒಂಟಿ ಸಲಗ ಕಬ್ಬಾಳು ಅರಣ್ಯ ವಲಯದ ಹಲಸಿನಮರದೊಡ್ಡಿ ಅರಣ್ಯದೊಳಗೆ ತೆರಳಿದೆ.
ಕಾಡಾನೆ ದಾಳಿಗೆ ತುತ್ತಾದ ಗ್ರಾಮಗಳಿಗೆ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ. ಒಂಟಿ ಸಲಗದ ದಾಳಿಯಿಂದ ಎರಡು ಹಸು, ಒಂದು ಎಮ್ಮೆ ಬಲಿಯಾದ ಸ್ಥಳ ಪರಿಶೀಲನೆ ನಡೆಸಿದ್ದು, ಹಸು ಕಳೆದುಕೊಂಡವರಿಗೆ ಹಾಗೂ ಆಸ್ತಿ ನಷ್ಟಗೊಂಡವರಿಗೆ ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ.