ಚನ್ನಪಟ್ಟಣದಲ್ಲಿ ಕಾಡಾನೆ ಸಾವು; ಓರ್ವ ರೈತನ ಬಂಧನ
ರಾಮನಗರ, ಸೆಪ್ಟೆಂಬರ್ 12; ಆಹಾರ ಅರಸಿ ನಾಡಿಬಂದ ಆನೆ ವಿದ್ಯುತ್ ತಂತಿ ಸ್ಪರ್ಶಿಸಿ ಪ್ರಾಣ ಬಿಟ್ಟಿತ್ತು. ಬೆಳೆ ರಕ್ಷಣೆಗೆ ಅಕ್ರಮವಾಗಿ ಜಮೀನಲ್ಲಿ ಅಳವಡಿಸಿದ್ದ ವಿದ್ಯುತ್ ತಂತಿ ಸ್ಪರ್ಶದಿಂದ ಆನೆ ಮೃತಪಟ್ಟಿದೆ ಎಂದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದ್ದು ಈ ಸಂಬಂಧ ಓರ್ವ ರೈತನ್ನು ಪೋಲಿಸರು ಬಂಧಿಸಿದ್ದಾರೆ.
ಜಮೀನಲ್ಲಿ ಅಕ್ರಮವಾಗಿ ವಿದ್ಯುತ್ ತಂತಿ ಅಳವಡಿಸಿ ಆನೆ ಸಾವಿಗೆ ಕಾರಣನಾದ ರೈತ ಗುರುಶಾಂತಯ್ಯ (42) ವಿರುದ್ಧ ಉಪಅರಣ್ಯಾಧಿಕಾರಿ ಶಿವಶಂಕರ್ ನೀಡಿದ ದೂರಿನ ಮೇರಿಗೆ ಪ್ರಕರಣ ದಾಖಲಿಸಿಕೊಂಡ ಚನ್ನಪಟ್ಟಣ ಗ್ರಾಮಾಂತರ ಪೋಲಿಸರು ಆರೋಪಿಯನ್ನು ಬಂಧಿಸಿದರು.
ವಿದ್ಯುತ್ ತಗುಲಿ ಆನೆ ಸಾವು, ಕರ್ನಾಟಕದಲ್ಲಿ ಆನೆ ಸಾವಿನ ಅಂಕಿ-ಅಂಶಗಳು
ಉಪ ಅರಣ್ಯಾಧಿಕಾರಿ ಶಿವಶಂಕರ್ ನೀಡಿದ ದೂರಿನ ಮೇರೆಗೆ ವನ್ಯಜೀವಿ ಸಂರಕ್ಷಣೆ ಕಾಯ್ದೆ ಅನ್ವಯ ಪ್ರಕರಣ ದಾಖಲು ಮಾಡಿ ಅರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ಗುರುಶಾಂತಯ್ಯ ತಾನು ಅಕ್ರಮವಾಗಿ ವಿದ್ಯುತ್ ಸಂಪರ್ಕ ನೀಡಿರುವುದಾಗಿ ತಪ್ಪೊಪ್ಪಿಕೊಂಡಿದ್ದು ಬಂಧಿಸಿ ಕೋರ್ಟ್ಗೆ ಹಾಜರುಪಡಿಸಿ ನಂತರ ರಾಮನಗರ ಜಿಲ್ಲಾ ಕಾರಗೃಹಕ್ಕೆ ಕಳಿಸಿದ್ದಾರೆ.
ಚನ್ನಪಟ್ಟಣ; ಮಾನವ, ಪ್ರಾಣಿ ಸಂಘರ್ಷಕ್ಕೆ ಕಾಡಾನೆ ಬಲಿ
ಘಟನೆ ವಿವರ; ಚನ್ನಪಟ್ಟಣ ತಾಲ್ಲೂಕಿನ ಚಿಕ್ಕ ವಿಠಲೇನ ಹಳ್ಳಿ ಗ್ರಾಮದ ರೈತ ಗುರುಶಾಂತಯ್ಯ ಶಿವರಾಜ್ ಎಂಬುವರಿದ ಸ. ನಂ. 229/1 ಒಂದು ಎಕರೆ ಜಮೀನಿನನ್ನು ಗುತ್ತಿಗೆಗೆ ಪಡೆದುಕೊಂಡು ಟೊಮೆಟೋ ಬೆಳೆ ಬೆಳೆದಿದ್ದರು. ಕಳೆದ ಶುಕ್ರವಾರ ಬೆಳಗಿನ ಜಾವ ಟೊಮೆಟೋ ಬೆಳೆಯನ್ನು ತಿನ್ನಲು ಬಂದ ಆನೆಯು ವಿದ್ಯುತ್ ತಂತಿ ಸ್ಪರ್ಶಿಸಿ ಮೃತಪಟ್ಟಿತ್ತು.
ದುಬಾರೆಯ 'ಕುಶ' ಬಂಧ ಮುಕ್ತ; ಮತ್ತೆ ಕಾಡಿಗೆ ಹೋದ ಆನೆ!
ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿ ಮರಣೋತ್ತರ ಪರೀಕ್ಷೆ ನಡೆಸಿ ಸ್ಥಳದಲ್ಲಿಯೇ ಅಂತ್ಯಸಂಸ್ಕಾರ ಮಾಡಿದ್ದರು. ಆನೆ ಮರಣೋತ್ತರ ಪರಿಕ್ಷೆಯಲ್ಲಿ ಆನೆ ಸಾವಿಗೆ ವಿದ್ಯುತ್ ಸ್ಪರ್ಶ ಎಂಬುದು ಖಚಿತಪಟ್ಟ ಹಿನ್ನಲೆಯಲ್ಲಿ ಜಮೀನಿನಲ್ಲಿ ಅಕ್ರಮವಾಗಿ ವಿದ್ಯುತ್ ತಂತಿ ಅಳವಡಿಸಿ ಆನೆ ಸಾವಿಗೆ ಕಾರಣರಾದ ಗುರುಶಾಂತಯ್ಯ ವಿರುದ್ಧ ಪ್ರಕರಣ ದಾಖಲಾಗಿದೆ.
ಚಿಕ್ಕವಿಠಲೇನಹಳ್ಳಿ ಗ್ರಾಮದ ಜಮೀನಿನಲ್ಲಿ 30 ವರ್ಷ ವಯಸ್ಸಿನ ಗಂಡಾನೆ ರಾತ್ರಿ ವೇಳೆ ಟೊಮೆಟೋ ತೋಟಕ್ಕೆ ಬಂದಿದ್ದ ಬಂದಾಗ ಸಾವನ್ನಪ್ಪಿದೆ. ಆನೆಯ ಸಾವಿಗೆ ವಿದ್ಯುತ್ ಸ್ಪರ್ಶ ಪ್ರಮುಖ ಕಾರಣ ಎಂದು ರಾಮನಗರ ಎಸಿಎಫ್ ಸುರೇಂದ್ರ ತಿಳಿಸಿದ್ದಾರೆ. ಗ್ರಾಮಸ್ಥರು ಮಾತ್ರ ವಿದ್ಯುತ್ ಶಾಕ್ ನಿಂದ ಸಾವನ್ನಪ್ಪಿಲ್ಲ ಎನ್ನುತ್ತಿದ್ದು ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ರೈತರು ಒತ್ತಾಯಿಸಿದ್ದಾರೆ.
3 ಆನೆಗಳ ಸಾವು; ಕಳೆದ ಆರು ತಿಂಗಳ ಅವಧಿಯಲ್ಲಿ ರಾಮನಗರ ಅರಣ್ಯ ವಲಯದಲ್ಲಿ ಒಂದು ಕಾಡಾನೆ, ಕಬ್ಬಾಳು ಅರಣ್ಯ ವಲಯದಲ್ಲಿ ಒಂದು ಕಾಡಾನೆ ಮತ್ತು ಚನ್ನಪಟ್ಟಣ ಅರಣ್ಯ ವಲಯದಲ್ಲಿ ಒಂದು ಕಾಡಾನೆ ಒಟ್ಟು ಮೂರು ಆನೆಗಳು ಮೃತಪಟ್ಟಿವೆ. ಆನೆಗಳು ತೆಂಗಿನ ಕಲ್ಲ ಅರಣ್ಯ ಹಾಗೂ ಕಾವೇರಿ ವನ್ಯಜೀವಿ ತಾಣಗಳಿಂದ ಬಂದಿದ್ದವು.
ಕಳೆದ 6 ತಿಂಗಳಲ್ಲಿ ವಿವಿಧ ಕಾರಣಗಳಿಂದ 3 ಕಾಡಾನೆಗಳು ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ಮೃತಪಟ್ಟಿರುವುದು ಪ್ರಾಣಿ ಪ್ರಿಯರಲ್ಲಿ ಆತಂಕ ಮೂಡಿಸಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಕಾಡು ಪ್ರಾಣಿ ಮತ್ತು ಮಾನನ ನಡುವಿನ ಸಂಘರ್ಷಕ್ಕೆ ತಡಯೊಡ್ಡಲು ಸರ್ಕಾರ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸರ್ಕಾರವನ್ನು ಪರಿಸರ ಪ್ರೇಮಿಗಳು ಆಗ್ರಹಿಸಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಕಾಡಾನೆ ದಾಳಿ ನಿರಂತರವಾಗಿದ್ದು ರಾಮನಗರ, ಚನ್ನಪಟ್ಟಣ, ಕನಕಪುರ ಭಾಗದಲ್ಲಿ ಹೆಚ್ಚಿನದಾಗಿ ಬಾಳೆ, ತೆಂಗು, ಹಲಸು, ಜೋಳದ ಮತ್ತು ರಾಗಿ ಬೆಳೆಗಳನ್ನು ಹೆಚ್ಚಾಗಿ ಬೆಳೆಯುವುದರಿಂದಾಗಿ ಕಾಡಾನೆಗಳ ಹಿಂಡು ಈ ಭಾಗದಲ್ಲಿಯೇ ಹೆಚ್ಚಾಗಿ ದಾಳಿ ಮಾಡಿ ರೈತರ ಬೆಳೆ ನಾಶ ಮಾಡುತ್ತಿವೆ.
ಕಾವೇರಿ ವನ್ಯ ಜೀವಿ ತಾಣದಿಂದ ಬಂದಿರುವ ಸುಮಾರು 25 ಆನೆಗಳ ಹಿಂಡು ನಿರಂತರವಾಗಿ ಕಾಡಂಚಿನ ಜಮೀನುಗಳ ಮೇಲೆ ದಾಳಿ ಮಾಡಿ ರೈತ ಬೆಳೆದ ಫಸಲನ್ನು ಹಾಳು ಮಾಡುತ್ತಿವೆ. ಕಾಡಾನೆ ದಾಳಿಯಿಂದ ಬೇಸತ್ತಿರುವ ರೈತರು ವ್ಯವಸಾಯ ಮಾಡುವುದನ್ನೇ ಬಿಟ್ಟಿರುವ ಹಲವು ಪ್ರಕರಣಗಳಿವೆ.
ಕಾಡು ಪ್ರಾಣಿಗಳಿಂದ ತಾವು ಬೆಳೆದ ಬೆಳೆ ರಕ್ಷಣೆ ಮಾಡಿಕೊಳ್ಳಲು ರೈತರು ವಿದ್ಯುತ್ ಲೈನ್ ಸಂಪರ್ಕವನ್ನು ನೇರವಾಗಿ ಬೆಳೆಗಳ ಮಧ್ಯೆ ಇರಿಸುವ ಕಾರಣದಿಂದಾಗಿ ಆನೆಗಳು ಸಾವನ್ನಪ್ಪುತ್ತಿವೆ ಎಂಬ ಚರ್ಚೆಗಳು ಸಹ ಹೆಚ್ಚಾಗಿ ನಡೆಯುತ್ತಿದೆ.
ಜಿಲ್ಲೆಯಲ್ಲಿ ಕಾಡಾನೆಗಳ ಜೊತೆಗೆ ಕಾಡುಹಂದಿಗಳ ಕಾಟವೂ ಸಹ ಹೆಚ್ಚಾಗಿರುವ ಕಾರಣದಿಂದ ಕೆಲ ಜನರು ಜಮೀನುಗಳಲ್ಲಿ ವಿದ್ಯುತ್ ಅಳವಡಿಸಿ ಶಾಕ್ ಕೊಟ್ಟು ಹಂದಿಗಳನ್ನು ಸಾಯಿಸಿ ಅದರ ಮಾಂಸವನ್ನ ಕೆಲವೆಡೆ ಮಾರಾಟ ಮಾಡಿ ಹಣ ಮಾಡಿಕೊಳ್ಳುವ ದಂಧೆಯಲ್ಲಿ ಮುಳುಗಿದ್ದಾರೆ.
ಕುಮಾರಸ್ವಾಮಿ ಹೇಳುವುದೇನು?; ಕಾಡಾನೆ ದಾಳಿ ಸಂಬಂಧ ಕಳೆದ ತಿಂಗಳು ಅರಣ್ಯ ಇಲಾಖೆಯ ವಿಜಯ್ ಕುಮಾರ್ ಗೂಗಿ ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, "ನಾನು ಅಧಿಕಾರದಲ್ಲಿ ಇದ್ದ ಸಮಯದಲ್ಲೇ ಆನೆ ದಾಳಿಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಬನ್ನೇರುಘಟ್ಟ ಅರಣ್ಯ ವಲಯ ಮತ್ತು ಕಾವೇರಿವನ್ಯ ಜೀವಿ ವಲಯದಲ್ಲಿ ಜಿಲ್ಲೆಯ ವ್ಯಾಪ್ತಿ ಒಟ್ಟು 299 ಕಿ. ಮೀ. ರೈಲು ಕಂಬಿ ಬೇಲಿ ನಿರ್ಮಾಣಕ್ಕೆ 100 ಕೋಟಿ ಹಣ ನೀಡಿದ್ದ ಅದರಲ್ಲಿ 110 ಕಿ. ಮೀ. ಕೆಲಸ ಅಗಿದೆ" ಎಂದು ಹೇಳಿದ್ದಾರೆ.
Recommended Video
"ಇನ್ನು ಉಳಿದ 179 ಕಿ. ಮೀ. ಬೇಲಿ ಅಳವಡಿಸಲು ಸುಮಾರ 81 ಕೋಟಿ ಹಣ ಬೇಕು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 81 ಕೋಟಿ ಹಣ ತರುವುದು ಪ್ರಸ್ತುತ ಸರ್ಕಾರದಲ್ಲಿ ಸ್ವಲ್ಪ ಕಷ್ಟ ಹಾಗಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದೇನೆ. ಸರ್ಕಾರಕ್ಕೆ ಪತ್ರ ಬರೆಯುವಂತ ಹಾಗೂ ಲಭ್ಯವಿರುವ ಬೇರೆ ಅನುದಾನದಲ್ಲಿ ಕಾಮಗಾರಿ ಕೈಗೊಳ್ಳುವಂತೆ ಮನವಿ ಮಾಡಿದ್ದೇನೆ" ಎಂದು ತಿಳಿಸಿದ್ದಾರೆ.