ರಾಮನಗರ; ಶನಿವಾರದಿಂದ ಪುಂಡಾನೆ ಸೆರೆಗೆ ಕಾರ್ಯಾಚರಣೆ
ರಾಮನಗರ, ಆಗಸ್ಟ್, 12: ರಾಮನಗರ ಜಿಲ್ಲೆಯ ತೆಂಗಿನಕಲ್ಲು ಅರಣ್ಯದಲ್ಲಿ ಆನೆಗಳು ಬೀಡು ಬಿಟ್ಟಿದ್ದು, ರಾಮನಗರ ಹಾಗೂ ಚನ್ನಪಟ್ಟಣ ಭಾಗದ ರೈತರ ಜಮೀನುಗಳಲ್ಲಿ ಬೆಳೆಗಳನ್ನು ನಾಶ ಮಾಡಿವೆ. ರೈತರ ಮೇಲೂ ದಾಳಿ ಮಾಡುತ್ತಿದ್ದ ಪುಂಡಾನೆಗಳ ಸೆರೆಗೆ ಅರಣ್ಯ ಇಲಾಖೆ ಮುಂದಾಗಿದೆ.
ಗುರುವಾರ ರಾತ್ರಿಯೇ ಮತ್ತಿಗೋಡು ಹಾಗೂ ದುಬಾರೆ ಶಿಬಿರಗಳಿಂದ 5 ಸಾಕಾನೆಗಳನ್ನು ಕರೆತರಲಾಗಿತ್ತು. ಪುಂಡಾನೆ ಸೆರೆಗೆ ಜಿಲ್ಲೆಯ ಚನ್ನಪಟ್ಟಣದ ಬಿ. ವಿ. ಹಳ್ಳಿ ಗ್ರಾಮದ ತೆಂಗಿನಕಲ್ಲು ಅರಣ್ಯ ಪ್ರದೇಶದ ಸಮೀಪ ಸಾಕಾನೆಗಳು ಬೀಡು ಬಿಟ್ಟಿವೆ. ಈಗಾಗಲೇ ಅರಣ್ಯ ಇಲಾಖೆಯ ಸಿಬ್ಬಂದಿಗಳು ಪುಂಡಾನೆಗಳನ್ನು ಗುರುತಿಸುವ ಕಾರ್ಯ ಪ್ರಾರಂಭಿಸಿದ್ದಾರೆ.
ವಿಶ್ವ ಆನೆ ದಿನ: ದೈತ್ಯ, ಸಂವೇದನಾಶೀಲ ಪ್ರಾಣಿ ಬಗ್ಗೆ ತಿಳಿಯಿರಿ
ವಿಶ್ವ ಆನೆ ದಿನಾಚರಣೆ : ಕಾಡಾನೆ ಸೆರೆಗೆ ಆಗಮಿಸಿರುವ ಆನೆಗಳಿಗೆ ಶುಕ್ರವಾರ ವಿಶ್ವ ಆನೆ ದಿನಾಚರಣೆಯ ಪ್ರಯುಕ್ತ ಬಿಡುವು ನೀಡಲಾಗಿತ್ತು. ದುಬಾರೆ ಮತ್ತು ಮತ್ತಿಗೋಡು ಶಿಬಿರದಿಂದ ಆಗಮಿಸಿದ ಸಾಕಾನೆಗಳಿಗೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಮಾವುತರು ಸ್ನಾನ ಮಾಡಿಸಿ, ಸಿಂಗಾರ ಮಾಡಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಕಾಡಾನೆ ಸೆರೆ ಕಾರ್ಯಚರಣೆಗೆ ಆಗಮಿಸಿರುವ ದುಬಾರೆ ಶಿಬಿರದ ಪ್ರಶಾಂತ್, ಹರ್ಷ, ಲಕ್ಷ್ಮಣ ಹಾಗೂ ಮತ್ತಿಗೋಡು ಶಿಬಿರದ ಭೀಮ, ಗಣೇಶ ಆನೆಗಳಿಗೆ ಬಿ. ವಿ. ಹಳ್ಳಿ ಗ್ರಾಮದ ಬಸವೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಯಿತು.'
4 ದಿನಗಳ ಹಿಂದೆ ಕಾಡಾನೆ ದಾಳಿಗೆ ಮಹಿಳೆ ಬಲಿ: ಚನ್ನಪಟ್ಟಣ ತಾಲೂಕಿನ ಚೆನ್ನಿಗನಹೊಸಹಳ್ಳಿ ಆಗಸ್ಟ್ 9ರಂದು ಗ್ರಾಮದಲ್ಲಿ ಬೆಳಗಿನ ಜಾವ ಆನೆಗಳು ದಾಳಿ ಮಾಡಿ 55 ವರ್ಷದ ಚನ್ನಮ್ಮ ಎಂಬ ವೃದ್ಧೆಯನ್ನು ಸಾಯಿಸಿದ್ದವು. ಘಟನೆ ನಡೆದ ಸ್ಥಳಕ್ಕೆ ಜಿಲ್ಲಾಧಿಕಾರಿ, ಹಿರಿಯ ಅರಣ್ಯಾಧಿಕಾರಿಗಳು, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸೇರಿದಂತೆ ಹಲವು ಅಧಿಕಾರಿಗಳು ಭೇಟಿ ನೀಡಿದ ಸಮಯದಲ್ಲಿ ಗ್ರಾಮಸ್ಥರು ಪ್ರತಿಭಟನೆ ಮಾಡಿದ್ದರು.
ಕಾಡನೆ ದಾಳಿಗೆ ಹೆದರಿ ಅಲ್ಲಿನ ಬಹುತೇಕ ರೈತರು ವ್ಯವಸಾಯ ಮಾಡುವುದನ್ನೇ ಬಿಟ್ಟಿದ್ದಾರೆ. ಅದರೂ ಕಾಡನೆಗಳು ಗ್ರಾಮದ ಸಮೀಪವೇ ಬಂದು ಜನ, ಜಾನುವಾರುಗಳ ಮೇಲೆ ದಾಳಿ ಮಾಡುತ್ತಿವೆ. ಹಾಗಾಗಿ ಆನೆ ಉಪಟಳಕ್ಕೆ ಶಾಶ್ವತ ಪರಿಹಾರ ನೀಡಬೇಕು ಹಾಗೂ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಆಗ್ರಹಿಸಿದ ಗ್ರಾಮಸ್ಥರು ಸ್ಥಳದಿಂದ ಮೃತದೇಹ ತೆಗೆಯಲು ನಿರಾಕರಿಸಿ ಪ್ರತಿಭಟನೆ ನಡೆಸಿದ್ದರು.
25ಕ್ಕೂ ಹೆಚ್ಚು ಕಾಡಾನೆಗಳಿಂದ ಉಪಟಳ: ಕಳೆದ ಕೆಲ ವರ್ಷಗಳಿಂದ ಕಾವೇರಿ ವನ್ಯಜೀವಿ ವಲಯದಿಂದ ವಲಸೆ ಬಂದಿರುವ ಸುಮಾರು 25ಕ್ಕೂ ಹೆಚ್ಚಿನ ಸಂಖ್ಯೆಯ ಕಾಡನೆಗಳು ಐದಾರು ಗುಂಪುಗಳಾಗಿ ಜಿಲ್ಲೆಯಲ್ಲಿ ಹಲವೆಡೆ ಶಾಶ್ವತವಾಗಿ ನೆಲೆಯೂರಿವೆ. ನಿರಂತರವಾಗಿ ರೈತರ ಜಮೀನುಗಳ ಮೇಲೆ ದಾಳಿ ಮಾಡಿ, ಶ್ರಮಪಟ್ಟು ಬೆಳೆದ ಬೆಳೆಗಳನ್ನು ನಾಶ ಮಾಡುತ್ತಿವೆ.
ಆನೆಗಳ ಉಪಟಳ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಎಷ್ಟು ಪ್ರಯತ್ನ ಪಟ್ಟರು ಅದು ಸಫಲವಾಗುತ್ತಿಲ್ಲ. ಒಂದು ಭಾಗದಿಂದ ಆನೆಗಳನ್ನು ಓಡಿಸಿದರೆ ಮತ್ತೊಂದು ಕಡೆ ದಾಗುಂಡಿ ಇಡುತ್ತಿವೆ. ಜಿಲ್ಲೆಯ ತೆಂಗಿನಕಲ್ಲು ಅರಣ್ಯ ಪ್ರದೇಶ, ಹಾಗೂ ಕಬ್ಬಾಳು ಅರಣ್ಯ ಪ್ರದೇಶಗಳಲ್ಲಿ ಕಾಡನೆಗಳು ಬೀಡು ಬಿಟ್ಟಿವೆ. ಅವುಗಳು ಆಹಾರ ಹರಸಿ ರೈತರ ಜಮೀನಿಗೆ ಲಗ್ಗೆ ಇಟ್ಟು, ಬೆಳೆಗಳನ್ನು ಹಾಳು ಮಾಡುತ್ತಿವೆ. ಇದರ ಜೊತೆಗೆ ರೈತರನ್ನು ಬಲಿ ಪಡೆಯುತ್ತಿದ್ದು, ಅಲ್ಲಿನ ಜನರಲ್ಲಿ ಆತಂಕ ಮನೆಮಾಡಿದೆ.