ಈಗಲ್ ಟನ್ ರೆಸಾರ್ಟ್ ಸರ್ಕಾರಕ್ಕೆ ಪಾವತಿಸಬೇಕಿದೆ 980 ಕೋಟಿ ರೂ
ರಾಮನಗರ, ಫೆಬ್ರವರಿ 04: ಈಗಲ್ ಟನ್ ರೆಸಾರ್ಟ್ 208 ಎಕರೆ ಸರ್ಕಾರಿ ಜಮೀನು ಒತ್ತುವರಿ ಮಾಡಿದ್ದು, 980 ಕೋಟಿ ರೂಪಾಯಿಯನ್ನು ಸರ್ಕಾರಕ್ಕೆ ಪಾವತಿ ಮಾಡಬೇಕಿದೆ ಎಂದು ಸಾರ್ವಜನಿಕ ಲೆಕ್ಕ ಪತ್ರಗಳ ಸಮಿತಿ ಆರೋಪಿಸಿದೆ.
ಬಿಡದಿಯ ಈಗಲ್ ಟನ್ ಗಾಲ್ಫ್ ರೆಸಾರ್ಟ್ ಸರ್ಕಾರಿ ಜಮೀನು ಒತ್ತುವರಿ ಮಾಡಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಸಾರ್ವಜನಿಕ ಲೆಕ್ಕ ಪತ್ರಗಳ ಸಮಿತಿ ಇಂದು ರೆಸಾರ್ಟ್ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ವಿಧಾನ ಸೌಧದಿಂದ ಖಾಸಗಿ ಬಸ್ ನಲ್ಲಿ ಆಗಮಿಸಿದ ತನಿಖಾ ತಂಡ ಬಿಡದಿಯ ಈಗಲ್ ಟನ್ ಗಾಲ್ಫ್ ರೆಸಾರ್ಟ್ ಗೆ ಭೇಟಿ ನೀಡಿ ಮಾಹಿತಿ ಪಡೆದಿದೆ. ಮಾಜಿ ಸಚಿವ ಎಚ್.ಕೆ.ಪಾಟೀಲ್ ಅಧ್ಯಕ್ಷತೆಯಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್, ಎಂಎಲ್ಸಿ ಶರವಣ ಸೇರಿ ಹಲವರು ರೆಸಾರ್ಟ್ಗೆ ಆಗಮಿಸಿ, ಸರ್ಕಾರಿ ಜಾಗದ ನಕ್ಷೆಯನ್ನು ವೀಕ್ಷಣೆ ಮಾಡಿ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಹಾಗೂ ರಾಮನಗರ ತಹಶೀಲ್ದಾರ್ ನರಸಿಂಹಮೂರ್ತಿ ಅವರಿಂದ ಮಾಹಿತಿ ಪಡೆದರು.
ಪರಿಶೀಲನೆಯ ನಂತರ ಮಾತನಾಡಿದ ಸಾರ್ವಜನಿಕ ಲೆಕ್ಕ ಪತ್ರಗಳ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್, "ಈಗಲ್ ಟನ್ ಹೋಟೆಲ್ 509 ಎಕರೆ ಪೈಕಿ ಸರ್ಕಾರದ 208 ಎಕರೆ ಜಮೀನು ಸೇರಿದೆ. ತಕ್ಷಣ 28 ಎಕರೆ ಜಮೀನು ಸರ್ಕಾರಕ್ಕೆ ವಾಪಸ್ಸು ನೀಡಬೇಕು, ಇನ್ನುಳಿದ ಜಮೀನಿಗೆ 980 ಕೋಟಿ ರೂ, ಹಣ ನೀಡಬೇಕಿದೆ" ಎಂದರು.
"ಮಿಣಿಮಿಣಿ ಪೌಡರ್' ಹೇಳಿಕೆ ಟ್ರೋಲ್ ಮಾಡಿದ್ದಕ್ಕೆ ಎಚ್ಡಿಕೆ ಸಿಡಿಮಿಡಿ
"ಈ ಬಗ್ಗೆ ಸರ್ಕಾರ ಅದೇಶ ಮಾಡಿದೆ. ಆದರೂ ರೆಸಾರ್ಟ್ ನವರು ಹಣ ಪಾವತಿಸಿಲ್ಲ. ಕಾನೂನನ್ನು ತಿರುಚಿ ಸರ್ಕಾರದ ಜಮೀನನ್ನು ಯಾರೂ ಒತ್ತುವರಿ ಮಾಡುವುದು ಸರಿಯಲ್ಲ. ಈ ನಿಟ್ಟಿನಲ್ಲಿ ಸದನ ಸಮಿತಿ ರೆಸಾರ್ಟ್ ನಲ್ಲಿ ಪರಿಶೀಲನೆ ಮಾಡಿ ಸಾಕಷ್ಟು ವಿಷಯಗಳನ್ನು ಕಲೆ ಹಾಕಿದ್ದೇವೆ. ಈ ಬಗ್ಗೆ ಸರ್ಕಾರಕ್ಕೆ ಹಲವು ಶಿಫಾರಸ್ಸುಗಳನ್ನು ನೀಡುತ್ತೇವೆ ಎಂದು ತಿಳಿಸಿದರು.
ಈ ಕುರಿತು ಮಾತನಾಡಿರುವ ರಾಮನಗರ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಈಗಲ್ಟನ್ ರೆಸಾರ್ಟ್ನಲ್ಲಿ ಸರ್ಕಾರದ ಭೂಮಿ ಒತ್ತುವರಿಯಾಗಿರುವ ಬಗ್ಗೆ ಈ ಹಿಂದೆಯೇ ವರದಿಯಾಗಿತ್ತು. ಈಗ ಸಾರ್ವಜನಿಕ ಲೆಕ್ಕಪತ್ರ ಪರಿಶೋಧನಾ ಸಮಿತಿ ತಂಡ ಆಗಮಿಸಿ ವರದಿ ಪಡೆದಿದೆ ಎಂದು ತಿಳಿಸಿದರು.
ರಾಮನಗರದಲ್ಲಿ ಜೂನ್1ಕ್ಕೆ ರಾಜೀವ್ ಗಾಂಧಿ ವಿವಿ ಕ್ಯಾಂಪಸ್ ಶಂಕುಸ್ಥಾಪನೆ
208 ಎಕರೆ ಸರ್ಕಾರಿ ಭೂಮಿಯಲ್ಲಿ ಈಗ 28 ಎಕರೆ ಭೂಮಿಯನ್ನು ಸರ್ಕಾರದ ವಶಕ್ಕೆ ಪಡೆದಿದ್ದೇವೆ, 77 ಎಕರೆ ಭೂಮಿಗೆ ರೆಸಾರ್ಟ್ ಮಾಲೀಕರು ಸರ್ಕಾರಕ್ಕೆ ಹಣ ಕಟ್ಟಬೇಕಿತ್ತು. ಆದರೆ ನ್ಯಾಯಾಲಯಕ್ಕೆ ಹೋಗಿದ್ದಾರೆ ಎಂದು ಮಾಹಿತಿ ನೀಡಿದರು.