ರಾಮನಗರ: ವರದಕ್ಷಿಣೆ ಕೂಪಕ್ಕೆ ನವವಿವಾಹಿತೆ ಬಲಿ
ರಾಮನಗರ, ಜನವರಿ 27: ನವವಿವಾಹಿತೆಯೊಬ್ಬಳು ನನ್ನ ಸಾವಿಗೆ ಪತಿ ಮತ್ತು ಅತ್ತೆ ಕಾರಣ ಎಂದು ಡೆತ್ನೋಟ್ ಬರೆದಿಟ್ಟು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಟವಾಳ್ ಗ್ರಾಮದಲ್ಲಿ ನಡೆದಿದೆ.
ತಟವಾಳ್ ಗ್ರಾಮದ ರೈತ ಗಂಗನರಸಿಂಹಯ್ಯ ಹಾಗೂ ಪುಷ್ಪ ದಂಪತಿ ಪುತ್ರಿ ರಮ್ಯ(24) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈಕೆಯನ್ನು ಕಳೆದ ಎಂಟು ತಿಂಗಳ ಹಿಂದೆ ಬೆಂಗಳೂರಿನ ಮೂಡಲಪಾಳ್ಯದ ನಿವಾಸಿ ಚಾಲಕ ಮಂಜುನಾಥ ಎಂಬಾತನಿಗೆ ಮದುವೆ ಮಾಡಿಕೊಡಲಾಗಿತ್ತು. ವರದಕ್ಷಿಣೆಯಾಗಿ 4 ಲಕ್ಷ ನಗದು ಹಾಗೂ 100 ಗ್ರಾಂ ಚಿನ್ನದ ಅಭರಣಗಳನ್ನು ನೀಡಿದ್ದಲ್ಲದೆ, ಅದ್ಧೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು.
ಮದುವೆಯಾದ ಕೆಲವು ದಿನಗಳ ಕಾಲ ಚೆನ್ನಾಗಿ ನೋಡಿಕೊಂಡರಾದರೂ ಬಳಿಕ ಗಂಡ ಮಂಜುನಾಥ ಸೇರಿದಂತೆ ಅತ್ತೆ ಜಯಮ್ಮ ಇನ್ನಿತರರು ವರದಕ್ಷಿಣೆ ತರುವಂತೆ ಕಿರುಕುಳ ನೀಡಲು ಆರಂಭಿಸಿದ್ದರು. ಅಲ್ಲದೆ ರಥಸಪ್ತಮಿಯಂದು ಅವಳನ್ನು ಗಂಡ ಮಂಜುನಾಥ ತವರಿಗೆ ತಂದು ಬಿಟ್ಟಿದ್ದಲ್ಲದೆ, ವರದಕ್ಷಿಣೆ ತಂದರೆ ಮಾತ್ರ ತನ್ನೊಂದಿಗೆ ಬರುವಂತೆ ಹೇಳಿದ್ದನು. ತವರಿನಲ್ಲಿದ್ದ ರಮ್ಯ ಹೆತ್ತವರೊಂದಿಗೆ ಅತ್ತೆ ಮನೆಯವರು ನೀಡುತ್ತಿದ್ದ ಕಿರುಕುಳವನ್ನು ಹೇಳಿಕೊಂಡಿದ್ದಳು. ಈ ಸಂದರ್ಭ ಅವರು ಸಮಾಧಾನಿಸಿ, ಧೈರ್ಯ ತುಂಬಿದ್ದರು.
ಆದರೆ ಜ.26 ರ ಬೆಳಿಗ್ಗೆ 8.30ರ ಸಮಯದಲ್ಲಿ ಅತ್ತೆ, ಪತಿಯೇ ತನ್ನ ಸಾವಿಗೆ ಕಾರಣ ಎಂದು ಡೆತ್ನೋಟ್ ಬರೆದಿಟ್ಟು ದನದ ಕೊಟ್ಟಿಗೆಗೆ ತೆರಳಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿ ರಮ್ಯ ಕಾಣಿಸದೆ ಇದ್ದಾಗ ಪೋಷಕರು ಎಲ್ಲೆಡೆ ಹುಡುಕಾಡಿದ್ದಾರೆ. ಕೊನೆಗೆ ದನದ ಕೊಟ್ಟಿಗೆಗೆ ಹೋಗಿ ನೋಡಿದಾಗ ಅಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ.
ವಿಷಯ ತಿಳಿದು ಮಾಗಡಿ ಪೊಲೀಸ್ ಠಾಣೆಯ ಪಿಎಸ್ ಐ ರವಿ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಮಧ್ಯೆ ರಮ್ಯಳ ಸಾವಿನ ಸುದ್ದಿ ತಿಳಿದು ಬಂದಿದ್ದ ಪತಿ ಮಂಜುನಾಥ್ ಹಾಗೂ ಅತ್ತೆ ಜಯಮ್ಮಳಿಗೆ ಗ್ರಾಮಸ್ಥರು ಧರ್ಮದೇಟು ನೀಡಿದ್ದಾರೆ. ಇದರಿಂದ ಹೆದರಿದ ಮಂಜುನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ನಾಟಕವಾಡಿದ್ದು, ಆತನನ್ನು ಮತ್ತು ಅತ್ತೆ ಜಯಮ್ಮಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.