ರೈತರ ಟ್ರಾಕ್ಟರ್ ಪರೇಡ್ ತಡೆಯಬೇಡಿ; ಪೊಲೀಸರಿಗೆ ಎಚ್ಚರಿಕೆ
ರಾಮನಗರ, ಜನವರಿ 24: "ರೈತರು ಹಮ್ಮಿಕೊಂಡಿರುವ ಟ್ರಾಕ್ಟರ್ ಪರೇಡ್ ಹಿನ್ನಲೆಯಲ್ಲಿ ರೈತರು ಮತ್ತು ಟ್ರಾಕ್ಟರ್ ಬೆಂಗಳೂರು ಪ್ರವೇಶ ಮಾಡದಂತೆ ಪೋಲಿಸರು ತಡೆದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ" ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಭಾನುವಾರ ರಾಮನಗರದಲ್ಲಿ ಮಾತನಾಡಿದ ಬಡಗಲಪುರ ನಾಗೇಂದ್ರ, "ಜನವರಿ 26ರಂದು ಗಣರಾಜ್ಯೋತ್ಸವದ ದಿನ ಬೆಂಗಳೂರಿನಲ್ಲಿ ನಡೆಯುವ ರೈತರ ಪರೇಡ್ನಲ್ಲಿ ಭಾಗವಹಿಸಲು ರಾಜ್ಯದ ನಾಲ್ಕು ಭಾಗಗಳಿಂದ ರೈತರು ತಮ್ಮ ವಾಹನಗಳೊಂದಿಗೆ ಆಗಮಿಸಲಿದ್ದಾರೆ" ಎಂದರು.
ರಾಷ್ಟ್ರಪತಿ, ಪ್ರಧಾನಮಂತ್ರಿಗೆ ಪತ್ರ ಬರೆದ ಮಂಡ್ಯದ ರೈತ: ಕಾರಣವೇನು?
"ಸುಮಾರು 25 ಸಾವಿರ ರೈತರು ಮತ್ತು ಸಾವಿರಾರು ಸಂಖ್ಯೆಯಲ್ಲಿ ಟ್ರಾಕ್ಟರ್ಗಳ ಮೂಲಕ ಬೆಂಗಳೂರು ಪ್ರವೇಶ ಮಾಡಲಿದ್ದಾರೆ. ಮೆರವಣಿಗೆ ಮೂಲಕ ಸ್ವಾತಂತ್ರ್ಯ ಉದ್ಯಾನವದಲ್ಲಿ ಧ್ವಜಾರೋಹಣ ಮಾಡುತ್ತೇವೆ" ಎಂದು ಬಡಗಲಪುರ ನಾಗೇಂದ್ರ ತಿಳಿಸಿದರು.
ಜ.26ರ ರೈತರ ಟ್ರಾಕ್ಟರ್ ಜಾಥಾಕ್ಕೆ ದೆಹಲಿ ಪೊಲೀಸರ ಅನುಮತಿ
"ಸರ್ಕಾರ ಪೋಲಿಸರನ್ನು ಬಳಸಿಕೊಂಡು ಗಣರಾಜ್ಯೋತ್ಸವದ ರೈತ ಪೆರೇಡ್ ವಿಫಲಗೊಳಿಸಲು ಹುನ್ನಾರ ನಡೆಸಿದೆ. ಶಾಂತಿಯುತವಾಗಿ ನಡೆಯುವ ರೈತ ಪೆರೇಡ್ಗೆ ಪೋಲಿಸರು ಅವಕಾಶ ಮಾಡಿಕೊಡಬೇಕು, ಒಂದು ವೇಳೆ ರೈತ ಹೋರಾಟ ವಿಫಲಗೊಳಿಸಲು ರೈತರು ತಮ್ಮ ವಾಹನದೊಂದಿಗೆ ಬೆಂಗಳೂರು ಪ್ರವೇಶಮಾಡದಂತೆ ಪೋಲಿಸರು ತಡೆದರೆ ರೈತರು ರಾಜ್ಯದ ಎಲ್ಲಾ ರಸ್ತೆಗಳನ್ನು ಬಂದ್ ಮಾಡುತ್ತಾರೆ" ಎಂದು ಎಚ್ಚರಿಸಿದರು.
ಜ.26 ರಂದು ಬೆಂಗಳೂರಿನಲ್ಲಿ ಬೃಹತ್ ರೈತ ಪರ್ಯಾಯ ಪರೇಡ್
"ರಾಜ್ಯದ ರೈತ ಸಂಘಟನೆಗಳು, ದಲಿತ ಸಂಘಟನೆಗಳು ಮತ್ತು ಕಾರ್ಮಿಕ ಸಂಘಟನೆಗಳು ಸೇರಿದಂತೆ ಸುಮಾರು 48 ಸಂಘಟನೆಗಳು ರೈತರ ಪರವಾಗಿ ಹೋರಾಟ ಮಾಡುತ್ತಿದ್ದೇವೆ. ನಮ್ಮ ಹೋರಾಟ ರಾಜ್ಯ, ಕೇಂದ್ರ ಸರ್ಕಾರದ ವಿರುದ್ಧವಲ್ಲ. ಅವರು ತೆಗೆದುಕೊಂಡಿರುವ ರೈತ ವಿರೋಧಿ ಮತ್ತು ಕಾರ್ಮಿಕ ವಿರೋಧಿ ಕಾಯ್ದೆಗಳ ವಿರುದ್ದ" ಎಂದು ಸ್ಪಷ್ಟಪಡಿಸಿದರು.
Recommended Video
"ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು. ನಮ್ಮ ಹೋರಾಟ ಮುಂದೆ ಇನ್ನು ಹೆಚ್ಚಾಗಲಿದೆ. ದೆಹಲಿ, ಬೆಂಗಳೂರು ಎರಡೂ ಕಡೆ ಬೃಹತ್ ಹೋರಾಟ ನಡೆಯಲಿದೆ" ಎಂದು ಹೇಳಿದರು.