ಆ ಎರಡು ಆಘಾತದಿಂದ ಸಿ.ಪಿ.ಯೋಗೇಶ್ವರ್ ಹೊರಬಂದಿಲ್ವಾ?
ರಾಮನಗರ, ಮಾರ್ಚ್ 17: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಡಿ.ಕೆ.ಸುರೇಶ್ ವಿರುದ್ಧ ಮಾಜಿ ಸಚಿವ, ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ಸ್ಪರ್ಧಿಸುತ್ತಾರಾ? ಹೀಗೊಂದು ಪ್ರಶ್ನೆ ಸದ್ಯ ಎಲ್ಲರನ್ನೂ ಕಾಡುತ್ತಿದೆ. ಏಕೆಂದರೆ ಯಾರು ಏನೇ ಹೇಳಿದರೂ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಕುರಿತಂತೆ ಸಿ.ಪಿ.ಯೋಗೇಶ್ವರ್ ಎಲ್ಲೂ ಬಹಿರಂಗವಾಗಿ ಹೇಳಿಕೆ ನೀಡಿಲ್ಲ.
ಹೀಗಾಗಿ ಬಿಜೆಪಿ ನಾಯಕರು ಬಿಡುಗಡೆ ಮಾಡುವ ಲೋಕಸಭಾ ಅಭ್ಯರ್ಥಿಗಳ ಪಟ್ಟಿಯಲ್ಲಿ ಅವರ ಹೆಸರು ಇರುತ್ತಾ, ಇರಲ್ವಾ ಎಂದು ಜನ ಕುತೂಹಲದಿಂದ ಕಾಯುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಡಿಕೆಶಿ ಸಹೋದರರು ಪ್ರಾಬಲ್ಯ ಸಾಧಿಸಿದ್ದು, ಅವರಿಗೆ ಪ್ರಬಲ ಪೈಪೋಟಿ ನೀಡುವ ತಾಕತ್ತು ಇರುವ ಬಿಜೆಪಿಯ ಏಕೈಕ ನಾಯಕ ಅಂದರೆ ಅದು ಸಿ.ಪಿ.ಯೋಗೇಶ್ವರ್ ಎನ್ನುವುದರಲ್ಲಿ ಎರಡು ಮಾತಿಲ್ಲ.
ಡಿಕೆಎಸ್ ಸಹೋದರರಿಗೆ ಸೋಲುಣಿಸಲು ಬಿಜೆಪಿ ತಂತ್ರ: ಯಶಸ್ವಿಯಾಗುವುದೇ?
ಆದರೆ, ಅವರಿಗೆ ರಾಜ್ಯ ರಾಜಕಾರಣದಲ್ಲಿರುವಷ್ಟು ಆಸಕ್ತಿ ಅವರಿಗೆ ಕೇಂದ್ರದ ರಾಜಕೀಯದಲ್ಲಿಲ್ಲ ಎಂಬುದು ಅವರನ್ನು ಹತ್ತಿರದಿಂದ ಬಲ್ಲವರಿಗೆಲ್ಲ ಗೊತ್ತಿರುವ ವಿಚಾರವೇ. ಸದ್ಯದ ಪರಿಸ್ಥಿತಿಯಲ್ಲಿ ಡಿಕೆಶಿ ಸಹೋದರರಿಗೆ ಪ್ರಬಲ ಪೈಪೋಟಿ ನೀಡಲೇ ಬೇಕಾದ ಅನಿವಾರ್ಯ ಬಿಜೆಪಿಗೆ ಬಂದಿರುವುದರಿಂದಾಗಿ ಸಿ.ಪಿ.ಯೋಗೇಶ್ವರ್ ಅವರಿಗೆ ಟಿಕೆಟ್ ನೀಡಬಹುದು ಎಂಬುದು ರಾಜಕೀಯ ಮೂಲಗಳಿಂದ ಬರುತ್ತಿರುವ ಮಾಹಿತಿಯಾಗಿದೆ.
ಬಿಜೆಪಿ ಹೈ ಕಮಾಂಡ್ ಗೆ ಮಣಿದು ಕಣಕ್ಕಿಳಿಯಬಹುದು
ಈ ಕುರಿತಂತೆ ಮಾಧ್ಯಮದವರ ಮುಂದೆ ಮಾತನಾಡಿರುವ ಸಿ.ಪಿ.ಯೋಗೇಶ್ವರ್, ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಂತೆ ಪಕ್ಷದ ಹೈಕಮಾಂಡ್ ಅಧಿಕೃತವಾಗಿ ಆದೇಶಿಸಿದರೆ ಮಾತ್ರ ಕಣಕ್ಕೆ ಇಳಿಯುವುದಾಗಿ ಹೇಳಿದ್ದಾರೆ. ಅಲ್ಲದೆ, ನನಗೆ ರಾಜ್ಯದ ರಾಜಕಾರಣದಲ್ಲಿರುವಷ್ಟು ಆಸಕ್ತಿ ದೆಹಲಿಯ ರಾಜಕೀಯದಲ್ಲಿಲ್ಲ ಎಂಬುದನ್ನು ಕೂಡ ಒಪ್ಪಿಕೊಂಡಿದ್ದಾರೆ. ಜತೆಗೆ ರಾಜ್ಯ ರಾಜಕಾರಣದಲ್ಲಿ ಉಳಿದುಕೊಳ್ಳುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಹೀಗಿರುವಾಗ ಬಹುಶಃ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಅಭ್ಯರ್ಥಿಯಾಗಿ ಕಣಕ್ಕಿಳಿದರೂ ಅದು ಬಿಜೆಪಿಯ ಹೈಕಮಾಂಡ್ ಗೆ ಮಣಿದೇ ಕಣಕ್ಕಿಳಿದಿರುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ವಿಧಾನಸಭಾ ಚುನಾವಣೆಯಲ್ಲಿ ತಕ್ಕ ಬೆಲೆ ತೆರುವಂತಾಗಿತ್ತು
ಸೋಲಿಲ್ಲದ ಸರದಾರನಂತೆ ಬೀಗಿದ್ದ ಸಿ.ಪಿ.ಯೋಗೇಶ್ವರ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಎಚ್.ಡಿ.ಕುಮಾರಸ್ವಾಮಿ ಎದುರು ಸೋಲನ್ನಪ್ಪಿದ್ದರು. ಬಹುಶಃ ಅವರು ಆ ಸೋಲಿನ ಆಘಾತದಿಂದ ಹೊರಬಂದಿಲ್ಲ ಎಂದರೂ ತಪ್ಪಾಗಲಾರದು. ಹೀಗಾಗಿ ಅವರು ಅದ್ಯಾಕೋ ಚುನಾವಣೆಯತ್ತ ಹೆಚ್ಚಿನ ಆಸಕ್ತಿಯನ್ನು ತೋರಿಸಿದಂತೆ ಕಂಡು ಬರುತ್ತಿಲ್ಲ. ಹಿಂದಿನ ಅವರ ಸೋಲಿಗೂ ಕಾರಣವಿದೆ. ಅದು ಅವರ ಪಕ್ಷಾಂತರದ ನಾಗಾಲೋಟಕ್ಕೆ ಜನ ಹಾಕಿದ ಬ್ರೇಕ್ ಎಂದರೆ ಅಚ್ಚರಿ ಪಡಬೇಕಾಗಿಲ್ಲ. ಅವರ ಅನುಕೂಲಕ್ಕೆ ತಕ್ಕಂತೆ ಪಕ್ಷದಿಂದ ಪಕ್ಷಕ್ಕೆ ನೆಗೆಯುತ್ತಾ ಬಂದರೂ ಜನ ಗೆಲ್ಲಿಸುತ್ತಲೇ ಬಂದಿದ್ದರು. ಆದರೆ ಅದಕ್ಕೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಕ್ಕ ಬೆಲೆ ತೆರುವಂತಾಗಿತ್ತು.
ಎರಡು ಆಘಾತ ಅನುಭವಿಸುವಂತಾಗಿತ್ತು
ಆ ಚುನಾವಣೆಯ ಸೋಲಿನ ಬಳಿಕ ಚುನಾವಣೆಯಿಂದ ಸ್ವಲ್ಪ ದೂರವೇ ಇದ್ದರೆಂಬುದನ್ನು ನಾವು ಒಪ್ಪಿಕೊಳ್ಳಲೇ ಬೇಕು. ಇದೀಗ ಲೋಕಸಭಾ ಚುನಾವಣೆ ಹತ್ತಿರ ಬಂದಿದೆ. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸಿ.ಪಿ.ಯೋಗೇಶ್ವರ್ ಬಿಜೆಪಿ ಅಭ್ಯರ್ಥಿ ಎಂಬಂತೆ ಬಿಂಬಿತವಾಗತೊಡಗಿದೆ. ಆದರೆ ಅವರಿಗೆ ಕಳೆದ ಬಾರಿ ಆದ ಎರಡು ಆಘಾತಗಳನ್ನು ಮರೆಯುವಂತೆಯೇ ಇಲ್ಲ. ಒಂದು ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದು, ಮತ್ತೊಂದು ರಾಮನಗರ ಉಪಚುನಾವಣೆಯಲ್ಲಿ ತಾನೇ ಖುದ್ದು ಮುಂದೆ ನಿಂತು ಕಾಂಗ್ರೆಸ್ ನಿಂದ ಎಳೆದು ತಂದು ಚುನಾವಣಾ ಕಣಕ್ಕಿಳಿಸಿದ್ದ ಚಂದ್ರಶೇಖರ್ ಕೊನೆ ಗಳಿಗೆಯಲ್ಲಿ ಕಣದಿಂದ ಸರಿದು ಕೈಕೊಟ್ಟಿದ್ದು.
ಪ್ರಬಲ ಪೈಪೋಟಿ ನೀಡಲು ರಣತಂತ್ರ
ಇದೀಗ ಸಿ.ಪಿ.ಯೋಗೇಶ್ವರ್, ನನಗೆ ಚುನಾವಣೆ ಹೊಸದೇನಲ್ಲ. ಹಾಗಂತ ಎಲ್ಲ ಚುನಾವಣೆಗಳಿಗೂ ಮೈಯೊಡ್ಡಲು ಆಗಲ್ಲ. ನಾನು ಅದಕ್ಕೆ ಸಿದ್ಧತೆಯನ್ನು ಮಾಡಿಕೊಂಡಿಲ್ಲ ಎನ್ನುತ್ತಿರುವುದರ ಹಿಂದಿನ ಮರ್ಮವೇನು ಎಂಬುದೇ ಅರ್ಥವಾಗುತ್ತಿಲ್ಲ. ಸಿ.ಪಿ.ಯೋಗೇಶ್ವರ್ ಅವರು ಡಿ.ಕೆ.ಶಿ ಸಹೋದರರ ಮೇಲೆ ವ್ಯಕ್ತಪಡಿಸುತ್ತಿರುವ ಅಸಮಾಧಾನವನ್ನು ಗಮನಿಸಿದರೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಮೂಲಕ ಅವರಿಗೆ ಪ್ರಬಲ ಪೈಪೋಟಿ ನೀಡಲು ತಂತ್ರಗಳನ್ನು ರೂಪಿಸುತ್ತಿರುವಂತೆ ಕಾಣುತ್ತಿದೆ. ಯಾವುದಕ್ಕೂ ನಾವು ಕಾದು ನೋಡಲೇಬೇಕಾಗಿದೆ. ಕರ್ನಾಟಕದಲ್ಲಿ ಎರಡು ಹಂತದಲ್ಲಿ (ಏಪ್ರಿಲ್ ಹದಿನೆಂಟು, ಇಪ್ಪತ್ಮೂರು) ಲೋಕಸಭಾ ಚುನಾವಣೆ ನಡೆಯಲಿದೆ. ದೇಶದಾದ್ಯಂತ ಏಳು ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮೇ ಇಪ್ಪತ್ಮೂರಕ್ಕೆ ಫಲಿತಾಂಶ ಪ್ರಕಟ ಆಗಲಿದೆ.