"ಫಾದರ್ ಮುಲ್ಲಾ ಆಸ್ಪತ್ರೆಗೆ ಸೇರ್ತಾರೆ, ಟ್ರಂಪ್ ಹತ್ತಿರ ಕೆಲಸ ಮಾಡ್ತಾರೆ, ಇವರು ನಮ್ಮ ಸಂಸ್ಕೃತಿ ಬಗ್ಗೆ ಹೇಳ್ತಾರೆ"
ಕನಕಪುರ, ಜನವರಿ 16: ಹಿಂದೂ ಜಾಗರಣಾ ವೇದಿಕೆಯ "ಕನಕಪುರ ಚಲೋ" ವಿಚಾರವಾಗಿ ಕನಕಪುರದ ಖಾಸಗಿ ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ.ಸುರೇಶ್, ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಕಿಡಿಕಾರಿದ್ದಾರೆ.
"ಹಿರಿಯರು ಅಂತ ಅವರ ಬಗ್ಗೆ ಗೌರವವಿದೆ ನನಗೆ. ಆದರೆ ವಯಸ್ಸಾದ ಮೇಲೆ ಅರಳೋ ಮರಳೋ ಅಂತಾರಲ್ಲ ಹಾಗಾಗಿದೆ ಇವರಿಗೆ" ಎಂದು ವ್ಯಂಗ್ಯ ಮಾಡಿದ್ದಾರೆ. ಜೊತೆಗೆ ಕನಕಪುರದಲ್ಲಿ ಬೆಂಕಿ ಹಚ್ಚಿ ಏನು ಸಾಧನೆ ಮಾಡಲು ಹೊರಟಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
"ಫಾದರ್ ಮುಲ್ಲಾ ಆಸ್ಪತ್ರೆಗೆ ಹೋದಾಗ ಇದು ನೆನಪಿರಲಿಲ್ವಾ?"
"ಇವರು ಭಾರತದ ಇತಿಹಾಸ, ಸಂಸ್ಕೃತಿ ಬಗ್ಗೆ ಹೇಳುವಂಥವರು. ಆದರೆ ಇವರ ಮಕ್ಕಳು ಟ್ರಂಪ್ ಹತ್ತಿರ ಹೋಗಿ ಕೈ ಒಡ್ಡಿಕೊಂಡು ಅಮೆರಿಕಾದಲ್ಲಿ ಕೆಲಸ ಮಾಡ್ತಾರೆ. ಇವರಿಗೆ ಹಾರ್ಟ್ ಅಟ್ಯಾಕ್ ಆಗಿದ್ದ ವೇಳೆ ಫಾದರ್ ಮುಲ್ಲಾ ಆಸ್ಪತ್ರೆಗೆ ದಾಖಲಾಗಿ ಆಪರೇಷನ್ಗೆ ಮಾಡಿಸಿಕೊಳ್ಳುತ್ತಾರೆ. ಆಗೆಲ್ಲಾ ಜಾತಿಯಿರಲಿಲ್ಲ, ಧರ್ಮ ಬರೋದಿಲ್ಲ" ಎಂದು ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಸಂಸದ ಡಿ.ಕೆ.ಸುರೇಶ್ ಕಿಡಿಕಾರಿದ್ದಾರೆ.
ಡಿಕೆ ಶಿವಕುಮಾರ್ ರಾಜಕೀಯ ಭವಿಷ್ಯ ನಾಶ: ಕನಕಪುರ ಚಲೋದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್
ಕಲ್ಲಡ್ಕ ಪ್ರಭಾಕರ್ ಗೆ ಪ್ರಶ್ನೆಗಳೆಸೆದ ಸಂಸದ
"ಇಂತಹವರೆಲ್ಲ ಬಂದು ಕನಕಪುರದಲ್ಲಿ ಭಾಷಣ ಮಾಡಿಬಿಟ್ಟು ಹೋಗ್ತಾರೆ. ಕ್ರಿಶ್ಚಿಯನ್ ದೇಶದಲ್ಲಿ ಹೋಗಿ ಇವರ ಮಕ್ಕಳು ಕೈ ಒಡ್ಡುತ್ತಾರೆ. ಚಿಲ್ಲರೆ ರಾಜಕೀಯ, ನೀಚ ಹೊಲಸಿನ ಭಾಷೆಯಲ್ಲಿ ಮಾತನಾಡುವ ಸಂಸ್ಕೃತಿ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಕೆಂಪುಬಟ್ಟೆ ಹಾಕಿಕೊಂಡರೆ ಮಾತ್ರ ಹಿಂದುಗಳಾ? ಬೇರೆಯವರು ಯರು ಹಿಂದುಗಳಲ್ಲವಾ? ಬಿಜೆಪಿ ಜೊತೆಗಿದ್ರೆ ಮಾತ್ರ ಹಿಂದುಗಳಾ, ಕೇಸರಿ ಟವಲ್ ಹಾಕಿಕೊಂಡ್ರೆ ಮಾತ್ರ ಹಿಂದುಗಳಾ ಎಂದು ಪ್ರಶ್ನಿಸಿದ್ದಾರೆ.
"ಮೂರು ತತ್ವಗಳನ್ನೂ ಬಿಟ್ಟು ಭಾಷಣ ಮಾಡ್ತಾರೆ"
"ನಾಲಿಗೆಗೆ ಮೂಳೆ ಇಲ್ಲ ಎಂದು ಬಾಯಿಗೆ ಬಂದದ್ದನ್ನೆಲ್ಲಾ ಮಾತನಾಡುವುದಲ್ಲ. ಗಾಂಧೀಜಿ ಶಾಂತಿ ತತ್ವ ಹೇಳಿದ್ರು, ಅಂಬೇಡ್ಕರ್ ಸಮಾನತೆ ಸಾರಿದ್ರು, ಬಸವಣ್ಣ ಮನುಷ್ಯ ಧರ್ಮ ಅಂತ ಹೇಳಿದ್ರು. ಇವು ಮೂರನ್ನು ಬಿಟ್ಟವರು ಯಾರು? ಇವು ಮೂರು ಲೆಕ್ಕ ಇಲ್ಲ ಇವರತ್ರ. ಗಾಂಧೀಜಿ ಹೆಸರೇಳ್ತಾರೆ. ಅದ್ರೆ ಅವರ ತತ್ವವಿಲ್ಲ, ಬಸವಣ್ಣನ ಪೂಜೆ ಮಾಡ್ತಾರೆ, ಅವರ ಆದರ್ಶಗಳಿಲ್ಲ. ಅಂಬೇಡ್ಕರ್ ಅವರ ಸಂವಿಧಾನದ ಬಗ್ಗೆ ಹೊಗಳುವಂತೆ ಮಾತಾಡ್ತಾರೆ. ಆದರೆ ಗೌರವಿಸುವುದಿಲ್ಲ, ಇವರು ಬಂದು ನಮಗೆ ಹಿತವಚನ ಹೇಳುವಂತಹ ಕೆಲಸ ಮಾಡ್ತಾರೆ" ಎಂದು ವ್ಯಂಗ್ಯ ಮಾಡಿದರು.
ಆರ್ಎಸ್ಎಸ್ ರ್ಯಾಲಿಯಿಂದ ಗಢಗಢ ನಡುಗುತ್ತಿದ್ದೇನೆ: ಡಿಕೆ ಶಿವಕುಮಾರ್
ರಾಜಕೀಯ ಸನ್ಯಾಸತ್ವದ ಸವಾಲ್
ಡಿಕೆ ಸಹೋದರರು ಮತಾಂತರ ಮಾಡಿದ್ದಾರೆ ಎನ್ನುವ ಆರೋಪ ಮಾಡಿದ್ದಾರೆ. ನಾವು ಮತಾಂತರ ಮಾಡಿದ್ದರೆ ರಾಜಕೀಯ ಸನ್ಯಾಸ ಸ್ವೀಕರಿಸುವುದಾಗಿ ಸವಾಲ್ ಹಾಕುತ್ತೇನೆ. ನಾನು ಮತ್ತು ನಮ್ಮ ನಾಯಕರಾದ ಡಿ.ಕೆ.ಶಿವಕುಮಾರ್ ಅವರು ಇಷ್ಟು ವರ್ಷಗಳ ಅಧಿಕಾರ ಮತ್ತು ರಾಜಕೀಯ ಜೀವನದಲ್ಲಿ ಒಬ್ಬನೇ ಒಬ್ಬ ಹಿಂದೂವನ್ನು ಮತಾಂತರ ಮಾಡಿದ್ದರೆ, ನೀವು ಅದನ್ನು ತೋರಿಸಿದರೆ ನಾನು ರಾಜಕೀಯವಾಗಿ ಸನ್ಯಾಸ ಸ್ವೀಕರಿಸುತ್ತೇವೆ. ಬನ್ನಿ ಕನಕಪುರದಲ್ಲಿ ಎಷ್ಟು ದೇವಾಲಯಗಳಿವೆ, ಎಷ್ಟು ಬೆಟ್ಟಗಳಿವೆ ಅಲ್ಲಿ ಬಂದು ಮುನೇಶ್ವರನ ಮಂದಿರ ಕಟ್ಟಿ ಯಾರು ಬೇಡ ಎಂದರು. ಏನು ಮಾಡಲಾಗದವರು ಅಶಾಂತಿಗೆ ಕೈಹಾಕುತ್ತಿದೀರಿ ಎಂದು ಏಸುಪ್ರತಿಮೆ ನಿರ್ಮಾಣವನ್ನು ಸಮರ್ಥನೆ ಮಾಡಿಕೊಂಡರು.