ಸಂಕಷ್ಟದಲ್ಲಿದ್ದ ಚನ್ನಪಟ್ಟಣ ರೈತನ ಫಸಲು ಖರೀದಿಸಿದ ಸಂಸದ ಡಿ.ಕೆ.ಸುರೇಶ್
ಚನ್ನಪಟ್ಟಣ, ಏಪ್ರಿಲ್ 07: ಕೊರೊನಾ ವೈರಸ್ ಭೀತಿಯಿಂದಾಗಿ ಇಡೀ ದೇಶ ಲಾಕ್ ಡೌನ್ ಆಗಿದೆ. ಇದರಿಂದಾಗಿ ರಾಜ್ಯದ ಎಲ್ಲಾ ಎಪಿಎಂಸಿ ಮಾರುಕಟ್ಟೆಗಳು ಬಂದ್ ಆಗಿವೆ. ಹೀಗಾಗಿ ರಾಜ್ಯದ ಬಹುತೇಕ ರೈತರು ಬೆಳೆದಿರುವ ಬೆಳೆಗಳು ಕೊಳೆತು ಹಾಳಾಗುತ್ತಿವೆ.
Recommended Video
ಇನ್ನಷ್ಟು ರೈತರು ತಾವು ಬೆಳೆದ ಬೆಳೆಗಳನ್ನು ಏನೂ ಮಾಡಲು ಸಾಧ್ಯವಾಗದೇ ರಸ್ತೆಗೆ ಸುರಿದು ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವು ರೈತರು ಪ್ರಾಣಿಗಳಿಗೆ ನೀಡುತ್ತಿದ್ದಾರೆ. ರಾಮನಗರದಲ್ಲೂ ರೈತರೊಬ್ಬರು ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದ್ದು, ಬೆಂಗಳೂರು ಗ್ರಾಮಾಂತರ ಕ್ಷೇತ್ರ ಸಂಸದ ಡಿ.ಕೆ.ಸುರೇಶ್ ಅವರು ಆ ರೈತನಿಗೆ ಸಹಾಯ ಮಾಡಿದ್ದಾರೆ.
ಎರಡು ಎಕರೆ ತೋಟದಲ್ಲಿ ಎಲೆಕೋಸು
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಗಡಿಗ್ರಾಮವಾದ ಇಗ್ಗಲೂರು ಗ್ರಾಮಕ್ಕೆ ಭೇಟಿ ಕೊಟ್ಟಿದ್ದ ಡಿ.ಕೆ.ಸುರೇಶ್, ದೇವರಾಜ್ ಎಂಬುವರ ಎಲೆಕೋಸು ತೋಟಕ್ಕೆ ಭೇಟಿ ನೀಡಿದ್ದಾರೆ. 2 ಎಕರೆ ಪ್ರದೇಶದಲ್ಲಿ ದೇವರಾಜ್ ಎಲೆಕೋಸು ಬೆಳೆಯನ್ನು ಬೆಳೆದಿದ್ದರು. ಎಕರೆಗೆ 40 ಸಾವಿರದಂತೆ 80 ಸಾವಿರ ಖರ್ಚು ಮಾಡಿ ಎಲೆಕೋಸು ಬೆಳೆದಿದ್ದರು. ಎಲ್ಲವೂ ಸರಿಯಿದ್ದರೆ ಮೈಸೂರಿನ ಎಪಿಎಂಸಿ ಮಾರ್ಕೆಟ್ ನಲ್ಲಿ ತಮ್ಮ ಬೆಳೆಯನ್ನ ದೇವರಾಜ್ ಉತ್ತಮ ಬೆಲೆಗೆ ಮಾರಾಟ ಮಾಡುತ್ತಿದ್ದರು. ಆದರೆ ಕೊರೊನಾ ಲಾಕ್ ಡೌನ್ ಯಿಂದ ಬೆಳೆಯನ್ನು ಮಾರಾಟ ಮಾಡಲಾಗದೇ ಕಂಗಾಲಾಗಿದ್ದರು.
'ರೈತರಿಗೆ ಆತಂಕ ಬೇಡ, ಬಿತ್ತನೆ ಬೀಜ-ಗೊಬ್ಬರದ ದಾಸ್ತಾನು ಇದೆ'
ರೈತನ ಕಷ್ಟಕ್ಕೆ ಸ್ಪಂದಿಸಿದ ಡಿ.ಕೆ.ಸುರೇಶ್
ರೈತ ದೇವರಾಜು ಕಷ್ಟಕ್ಕೆ ಸ್ಪಂದಿಸಿದ ಸಂಸದ ಡಿ.ಕೆ.ಸುರೇಶ್ ತೋಟಕ್ಕೆ ಭೇಟಿ ಕೊಟ್ಟು ಕೆ.ಜಿ ಎಲೆಕೋಸಿಗೆ 4 ರೂಪಾಯಿಯಂತೆ ಖರೀದಿ ಮಾಡಿದ್ದಾರೆ. ತೋಟದಲ್ಲಿ ಒಟ್ಟು 70 ಟನ್ ಬೆಳೆಯಿದ್ದು, ಈಗಾಗಲೇ 10 ಟನ್ ಬೆಳೆಯನ್ನು ಕಟಾವು ಮಾಡಲಾಗಿದೆ. ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಉಳಿದ ಬೆಳೆಯನ್ನು ಕಟಾವು ಮಾಡಲಾಗುತ್ತದೆ ಎಂದು ರೈತ ದೇವರಾಜ್ ತಿಳಿಸಿದ್ದಾರೆ.
ನಿರೀಕ್ಷೆ ಹುಸಿಯಾದ ಬೇಸರದಲ್ಲಿ ರೈತ
ಈ ಬಗ್ಗೆ ಮಾತನಾಡಿರುವ ರೈತ ದೇವರಾಜ್, ಮೈಸೂರಿನ ಮಾರ್ಕೆಟ್ ನಲ್ಲಿ ಕೆ.ಜಿ ಗೆ 10 ರಿಂದ 15 ರೂಪಾಯಿ ನಿರೀಕ್ಷೆ ಮಾಡಿದ್ದೆ. ಆದರೆ ಈಗ ಕೊರೊನಾದಿಂದಾಗಿ ನನ್ನ ನಿರೀಕ್ಷೆ ಸಂಪೂರ್ಣ ಹುಸಿಯಾಗಿದೆ ಎಂದು ಅಳಲು ತೊಡಿಕೊಂಡರು. ಈಗ ನಾನೇ ಮಾರಾಟ ಮಾಡಲು ಹೊರಟಿದ್ದರೆ 6 ರೂಪಾಯಿಯಷ್ಟು ಸಿಗುತ್ತಿತ್ತು. ವಾಹನದ ಬಾಡಿಗೆ ಸೇರಿ ನನಗೆ ಕೊನೆಗೆ 4 ರೂಪಾಯಿ ಲಾಭ ಸಿಗುತ್ತಿತ್ತು. ಆದರೆ ಸಂಸದರಾದ ಡಿ.ಕೆ.ಸುರೇಶ್ ರವರು ನೇರವಾಗಿ ಕೆ.ಜಿಗೆ 4 ರೂಪಾಯಿಯಂತೆ ನೀಡಿ ಬೆಳೆ ಖರೀದಿ ಮಾಡಿದ್ದಾರೆ. ಇದರಿಂದಾಗಿ ನನಗೆ ಕೊಂಚ ಸಮಾಧಾನವಾಗಿದೆ ಎಂದಿದ್ದಾರೆ.
ಬೆಳೆದ ಸೀಬೆಯನ್ನೆಲ್ಲಾ ಮಂಗ, ನವಿಲುಗಳಿಗೆ ಕೊಟ್ಟುಬಿಟ್ಟ ಕೋಲಾರ ರೈತ
ಜನರಿಗೆ ಹಂಚಿಕೆ ಮಾಡಲಿರುವ ಸಂಸದ
2 ಎಕರೆಯಿಂದ ಕೆ.ಜಿಗೆ 4 ರೂಪಾಯಿಯಂತೆ ಕೆಲ ಕೊಳೆತವು, ಬಲಿತ ಎಲೆಕೋಸುಗಳನ್ನ ಕಳೆದು 2 ಲಕ್ಷದಷ್ಟು ಹಣ ಸಿಗುತ್ತದೆ. ನಮ್ಮಿಂದ ಬೆಳೆಯನ್ನ ಖರೀದಿ ಮಾಡಿ ಜನರಿಗೆ ಹಂಚಲು ಸಂಸದರು ನಿರ್ಧರಿಸಿದ್ದಾರೆ. ಇನ್ನು ಟೊಮೆಟೊ, ಕಲ್ಲಂಗಡಿ ಇದ್ದರೂ ತಿಳಿಸಿ ಖರೀದಿ ಮಾಡುತ್ತೇನೆಂದು ಡಿ.ಕೆ.ಸುರೇಶ್ ಇಲ್ಲಿನ ರೈತರಿಗೆ ತಿಳಿಸಿದ್ದಾರೆ. ಇದು ನಿಜಕ್ಕೂ ಉತ್ತಮವಾದ ಕೆಲಸ ಎಂದು ಡಿ.ಕೆ.ಸುರೇಶ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಇಗ್ಗಲೂರಿನ ರೈತರು.