ಡಿ.ಕೆ.ಸುರೇಶ್-ಎಸ್ಪಿ ಜಟಾಪಟಿ; ಸಭೆಯಲ್ಲಿ ಆಗಿದ್ದೇನು?, ಎಸ್ಪಿ ಉತ್ತರವೇನು?
ಕನಕಪುರ, ನವೆಂಬರ್ 30: ರಾಮನಗರ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಇಂದು ಹತ್ತು ತಿಂಗಳ ನಂತರ ಅಧಿಕಾರಿಗಳ ಸಭೆ ಕರೆಯಲಾಗಿತ್ತು. ಆದರೆ ಸಭೆಯಲ್ಲಿ ಸಂಸದ ಡಿ.ಕೆ.ಸುರೇಶ್ ಅಧಿಕಾರಿಗಳ ಮೇಲೆ ರೇಗಾಡಿದ ಘಟನೆ ನಡೆದಿದ್ದು, ಸಭೆಗೆ ಗೈರಾಗಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನೂಪ್ ಎ ಶೆಟ್ಟಿ ಅವರ ಮೇಲೂ ಆಕ್ರೋಶದಿಂದ ಮಾತನಾಡಿದ್ದಾರೆ. ಪಿಎಸ್ ಐ ಮುಖಾಂತರ ವಾರ್ನಿಂಗ್ ಕೊಟ್ಟಿದ್ದಾರೆ.
ಆದರೆ ಡಿಕೆ ಸುರೇಶ್ ವಾರ್ನಿಂಗ್ ಗೆ ಡಾ.ಅನೂಪ್ ಎ ಶೆಟ್ಟಿ ಕೂಡ ತಿರುಗೇಟು ನೀಡಿದ್ದು, "ಪೊಲೀಸರಿಗೆ ಅಲ್ಲಿ ಏನ್ ಕೆಲಸ? ಅವರು ನನ್ನ ಬಗ್ಗೆ ಯಾಕೆ ಟಾರ್ಗೆಟ್ ಮಾಡ್ತಿದ್ದಾರೆ ಅಂತ ಅವರನ್ನೇ ಕೇಳಬೇಕು" ಎಂದಿದ್ದಾರೆ.
ಸಭೆಯಲ್ಲಿ ಗರಂ ಆದ ಡಿ.ಕೆ.ಸುರೇಶ್
ಇಂದು ಜಿಲ್ಲೆಯಲ್ಲಿ ದಿಶಾ ಸಭೆಯನ್ನು ಆಯೋಜಿಸಲಾಗಿತ್ತು. ಆ ಸಂದರ್ಭ ಅಧಿಕಾರಿಗಳ ಮೇಲೆ ಗರಂ ಆಗೇ ಮಾತನಾಡಿದ್ದಾರೆ. ಆ ಸಭೆಗೆ ಎಸ್ಪಿ ಅನೂಪ್ ಶೆಟ್ಟಿ ಅವರು ಕೂಡ ಬಂದಿರಲಿಲ್ಲ. ಇದನ್ನು ಗಮನಿಸಿದ ಸಂಸದ ಡಿ.ಕೆ.ಸುರೇಶ್, ಪಿಎಸೈ ಹೇಮಂತ್ ಕುಮಾರ್ ಅವರನ್ನು ವಿಚಾರಿಸಿದ್ದಾರೆ. ಆಗ, ಯಶವಂತಪುರ ಎಲೆಕ್ಷನ್ ಡ್ಯೂಟಿಗೆ ಎಸ್ ಪಿ ಹೋಗಿರುವುದಾಗಿ ಹೇಮಂತ್ ಉತ್ತರಿಸಿದ್ದು, ಇದರಿಂದ ಕೆರಳಿದ ಸುರೇಶ್ ಸಭೆಗೆ ಎಸ್ಪಿ ಯಾಕೆ ಬಂದಿಲ್ಲ, ಇದು ರಾಮನಗರ ಜಿಲ್ಲೆ. ಬೇರೆಲ್ಲ ಮಾತನಾಡೋಕೆ ಆಗುತ್ತೆ, ಸಭೆಗೆ ಬರಕಾಗಲ್ವ?" ಎಂದು ಪ್ರಶ್ನಿಸಿದ್ದಾರೆ.
"ಮಂತ್ರಿಗಿರಿಗಷ್ಟೇ ಈ ಉಪಚುನಾವಣೆ" ಎಂದು ಬಿಜೆಪಿ ಜರಿದ ಡಿ ಕೆ ಸುರೇಶ್
"ಮೊದಲು ಶಿಸ್ತು ಕಲಿತುಕೊಳ್ಳಲಿ"
ಎಸ್ ಪಿ ಬಗ್ಗೆಯೇ ಮಾತನಾಡುತ್ತಾ, "ಎಲೆಕ್ಷನ್ ಡ್ಯೂಟಿ ಬೇಕಿದ್ರೆ ಅವರು ಮಾಡ್ಲಿ, ಆದರೆ ಮೊದಲು ಸಭೆಗೆ ಬರಬೇಕು. ಪೊಲೀಸ್ ಇಲಾಖೆಯಲ್ಲಿದ್ದಾರೆ. ಮೊದಲು ಡಿಸಿಪ್ಲೀನ್ ಕಲಿತುಕೊಳ್ಳಲಿ" ಎಂದಿದ್ದಾರೆ. ಪಿಎಸ್ ಐಗೆ ಏಕವಚನದಲ್ಲಿ ಮಾತನಾಡಿದ ಅವರು, "ಮೊದಲು ಎಸ್ ಪಿಗೆ ಡಿಸಿಪ್ಲೀನ್ ಕಲಿತುಕೊಳ್ಳಲು ಹೇಳು, ನಾನು ಹೇಳ್ದೇ ಅಂತಾನೆ ಹೇಳು. ಗೊತಾಯ್ತ" ಎಂದು ಗದರಿದಂತೆ ಮಾತನಾಡಿದ್ದಾರೆ.
ತಿರುಗು ಉತ್ತರ ನೀಡಿದ ಅನೂಪ್
ಸುರೇಶ್ ಅವರ ಈ ನಡೆಗೆ ಪ್ರತಿಕ್ರಿಯಿಸಿರುವ ಎಸ್ ಪಿ ಅನೂಪ್ ಶೆಟ್ಟಿ, "ನಾನು ಅವರ ಬಗ್ಗೆ ಮಾತನಾಡಲ್ಲ. ಆ ವಿಚಾರವಾಗಿ ನನ್ನದು ಸ್ಪೀಚ್ ಲೆಸ್. ನಾನೇನು ಅವರನ್ನು ಟಾರ್ಗೆಟ್ ಮಾಡಿಲ್ಲ. ಅವರು ನನ್ನನ್ನು ಯಾಕೆ ಟಾರ್ಗೆಟ್ ಮಾಡಿದ್ದಾರೆ ಅವರನ್ನೇ ಕೇಳಬೇಕು" ಎಂದು ತಿರುಗು ಉತ್ತರ ನೀಡಿದ್ದಾರೆ.
ರಾಜ್ಯದ ಹಾಲು ಉತ್ಪಾದಕರ ಪಾಲಿನ ಮರಣ ಶಾಸನ ಆರ್ ಸಿ ಇ ಪಿ: ಡಿಕೆ ಸುರೇಶ್
"ಜಿಲ್ಲಾ ಪಂಚಾಯಿತಿ ದಿಶಾ ಮೀಟಿಂಗ್ ಗೆ ನಾನ್ಯಾಕೆ ಹೋಗಬೇಕು? ದಿಶಾ ಮೀಟಿಂಗ್ ಕಮಿಟಿಯ ಮೆಂಬರ್ ನಾನಲ್ಲ. ಅಷ್ಟಕ್ಕೂ ನಮ್ಮ ಪಿಎಸ್ ಐ ಕೂಡಾ ಒಳಗೆ ಹೋಗುವಂತಹ ಅವಶ್ಯಕತೆ ಇರಲಿಲ್ಲ" ಎಂದು ಹೇಳಿದ್ದಾರೆ.
ಮಾಧ್ಯಮದವರಿಗೂ ದುರಹಂಕಾರದ ಮಾತು
ಸಂಸದ ಡಿ.ಕೆ.ಸುರೇಶ್ ಮಾಧ್ಯಮದ ಮುಂದೆಯೂ ಗರಂ ಆಗಿ ಉತ್ತರಿಸಿದ್ದಾರೆ. ಜಿಲ್ಲೆಯಲ್ಲಿ ಅಧಿಕಾರಿಗಳು ನಿಮ್ಮ ಹಿಡಿತಕ್ಕೆ ಸಿಗುತ್ತಿಲ್ಲವೆಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಇಲ್ಲಿ ನನ್ನನ್ನ ಬಿಟ್ಟು ಯಾರು ಏನು ಮಾಡಕಾಗಲ್ಲ. ನೀನು ಕೂಡ ಅಲ್ಲಾಂಡಂಗಿಲ್ಲ. ನೀನೇ ಏನು ಮಾಡಕಾಗಲ್ಲ, ಇನ್ನು ಅಧಿಕಾರಿಗಳು ಮಾಡ್ತಾರ? "ಎಂದು ಮಾಧ್ಯಮದವರ ಮೇಲೂ ಮಾತನಾಡಿದ್ದಾರೆ.