ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಈಗ 50 ಎಕರೆ ವ್ಯಾಪ್ತಿಯಲ್ಲಿ ಹಿಪ್ಪುನೇರಳೆ ಬೆಳೆಯುವ ಕೃಷಿಕ
ರಾಮನಗರ, ಆಗಸ್ಟ್ 13: ಕಾಂಗ್ರೆಸ್ ಪಕ್ಷದ ಟ್ರಬಲ್ ಶೂಟರ್ ಎಂದೇ ಹೆಸರಾಗಿರುವ ಡಿ.ಕೆ.ಶಿವಕುಮಾರ್ ಇದೀಗ ಕೃಷಿಯತ್ತ ಆಸಕ್ತಿ ಹೊರಳಿಸಿದ್ದಾರೆ. ರಾಜಕೀಯದ ಹೊರತಾಗಿಯೂ, ಕೃಷಿ ಕುಟುಂಬದ ಹಿನ್ನೆಲೆಯಿರುವ ಡಿಕೆಶಿ ಅವರು ರಾಮನಗರದಲ್ಲಿ ಸುಮಾರು 50 ಎಕರೆ ಪ್ರದೇಶದಲ್ಲಿ ಹಿಪ್ಪು ನೇರಳೆ ಬೆಳೆಸುತ್ತಿದ್ದು, ವೈಜ್ಞಾನಿಕ ಪದ್ಧತಿಗಳೊಂದಿಗೆ ರೇಷ್ಮೆ ಕೃಷಿ ಅಭಿವೃದ್ಧಿಪಡಿಸುವ ಪ್ರಯತ್ನಗಳನ್ನೂ ಅಳವಡಿಸಿಕೊಳ್ಳುತ್ತಿದ್ದಾರೆ.
ಪ್ರವಾಹ ಪರಿಹಾರದ ವಿಚಾರದಲ್ಲಿ ರಾಜಕೀಯವಿಲ್ಲ: ಡಿಕೆಶಿ
ಸಂತೆ ಕೋಡಿಹಳ್ಳಿ ಮತ್ತು ದೊಡ್ಡಾಲಹಳ್ಳಿಯಲ್ಲಿ ಹಿಪ್ಪುನೇರಳೆ ತೋಟಗಳಿವೆ. ರೇಷ್ಮೆ ಕೃಷಿ ಕ್ಷೇತ್ರದಲ್ಲಿ ಆಧುನಿಕತೆಯನ್ನು ಅಳವಡಿಸಿಕೊಂಡು ಅಲ್ಪ ಶ್ರಮದಲ್ಲಿ ಹೆಚ್ಚು ರೇಷ್ಮೆ ಗೂಡು ಇಳುವರಿ ಪಡೆಯುವ ಮೂಲಕ ರೇಷ್ಮೆ ಕೃಷಿಯನ್ನು ಇನ್ನಷ್ಟು ಬೆಳೆಸಬೇಕೆಂಬ ಉದ್ದೇಶದೊಂದಿಗೆ ಡಿ.ಕೆ.ಶಿವಕುಮಾರ್ ರೇಷ್ಮೆ ಕೃಷಿಯತ್ತ ಮನಸ್ಸು ಮಾಡಿದ್ದಾರೆ.
ವೈಜ್ಞಾನಿಕ ಪದ್ಧತಿಯನ್ನು ಅನುಸರಿಸಿ ಸುಮಾರು 50 ಎಕರೆ ಪ್ರದೇಶದಲ್ಲಿ ಹಿಪ್ಪು ನೇರಳೆ ಮಾದರಿ ತೋಟವನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ರೇಷ್ಮೆ ಬೇಸಾಯದಲ್ಲಿ ರಾಜ್ಯ ಪ್ರಶಸ್ತಿ ವಿಜೇತ ಕೀರಣಗೆರೆ ಜಗದೀಶ್ ಮಾರ್ಗದರ್ಶನದಲ್ಲಿ ಜಿ4 ಎಂಬ ರೇಷ್ಮೆಯ ಹೊಸತಳಿಯನ್ನು ರೇಷ್ಮೆ ಕೃಷಿಗೆ ಬಳಸಿಕೊಂಡಿದ್ದಾರೆ. ಚೀನಾ ದೇಶದಲ್ಲಿ ಅನುಸರಿಸುತ್ತಿರುವಂತೆ ಚಂದ್ರಿಕೆ ಬಳಸದೇ ಹುಳುಗಳು ಸ್ವಯಂ ಗೂಡು ಕಟ್ಟಲು ಅನುವಾಗುವಂತಹ ಮತ್ತು ರೈತರ ಶ್ರಮ ಕಡಿಮೆ ಮಾಡುವ ತಾಂತ್ರಿಕತೆಯನ್ನು ಅಳವಡಿಸಿಕೊಂಡಿದ್ದಾರೆ.
ಈ ವಿಶಿಷ್ಟ ಮಾದರಿಯಲ್ಲಿ ಹತ್ತು ಎಕರೆಯಲ್ಲಿ ಸುಮಾರು 2500 ರಿಂದ 3000 ಮೊಟ್ಟೆ ಸಾಕಾಣಿಕೆ ಮಾಡಬಹುದು. ಪ್ರತಿ ಎಕರೆ ರೇಷ್ಮೆ ತೋಟದಲ್ಲಿ 200 ರಿಂದ 250 ಕೆಜಿ ರೇಷ್ಮೆ ಗೂಡು ಉತ್ಪಾದನೆ ಮಾಡಬಹುದು.
ಮೇಕೆದಾಟು ಯೋಜನೆ : ಕೇಂದ್ರದ ವಿರುದ್ಧ ಡಿಕೆಶಿ ಅಸಮಾಧಾನ!
"ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರು ರೇಷ್ಮೆ ಕೃಷಿಯಲ್ಲಿ ಆಧುನಿಕ ಮತ್ತು ವೈಜ್ಞಾನಿಕ ಪದ್ಧತಿಯನ್ನು ಅನುಸರಿಸಿ 50 ಎಕರೆ ಹಿಪ್ಪುನೇರಳೆ ತೋಟವನ್ನು ಮಾದರಿಯಾಗಿ ಅಭಿವೃದ್ಧಿಪಡಿಸುತ್ತಿದ್ದಾರೆ. ಹೀಗೆ ಅಭಿವೃದ್ಧಿಯಾಗುವ ತೋಟವನ್ನು ರೈತರು ವೀಕ್ಷಿಸಿ, ಮಾಹಿತಿ ಪಡೆದುಕೊಂಡು ತಾವು ಸಹ ಅದನ್ನು ಅನುಸರಿಸಿ ರೇಷ್ಮೆ ಕೃಷಿಯಲ್ಲಿ ಕಡಿಮೆ ಶ್ರಮ ಹಾಕಿ ಹೆಚ್ಚು ರೇಷ್ಮೆ ಬೆಳೆದು ಹೆಚ್ಚು ಆದಾಯ ಗಳಿಸಬಹುದು" ಎಂದು ಪ್ರತಿಕ್ರಿಯೆ ನೀಡಿದ್ದಾರೆ ಸಚಿವರ ಮಾಧ್ಯಮ ವಕ್ತಾರ ಮರಸಪ್ಪ ರವಿ.