ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆಗೆ ಇಳಿದ ಡಿಕೆಶಿ
ಕನಕಪುರ, ಡಿಸೆಂಬರ್ 23: "ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಉಂಟಾಗಿರುವ ಗಲಭೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಮತ್ತು ಗೃಹ ಸಚಿವರ ವಿರುದ್ಧ ಎಫ್ ಐಆರ್ ದಾಖಲಿಸಬೇಕು" ಎಂದು ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಒತ್ತಾಯಿಸಿದರು. ಕನಕಪುರದಲ್ಲಿ ನಡೆದ ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
"ರಾಜ್ಯದಲ್ಲಿ ಎನ್ಆರ್ ಸಿ ಮತ್ತು ಸಿಎಎ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಗಳಲ್ಲಿ ಕೆಲವೆಡೆ ಲಾಠಿ ಚಾರ್ಜ್ ಆಗಿದೆ. ನೂರಾರು ಜನರ ಮೇಲೆ ಎಫ್ ಐಆರ್ ದಾಖಲಾಗಿದೆ. ಇದು ಪೊಲೀಸರ ತಪ್ಪು ಎಂದು ನಾ ಹೇಳಲ್ಲ. ಅವರಿಗೆ ಕೆಲಸ ಕೊಟ್ಟು, ಅಧಿಕಾರ ಕೊಟ್ಟಿರುವವರು ನಾವು. ಒಂದು ಸರ್ಕಾರ ಹೇಳಿದ ಹಾಗೆ ಪೊಲೀಸರು ಕೇಳ್ತಾರೆ. ಹಾಗಾಗಿ ರಾಜ್ಯದ ಸಿಎಂ ಹಾಗೂ ಗೃಹ ಸಚಿವರ ವಿರುದ್ಧ ಎಫ್ ಐಆರ್ ದಾಖಲಾಗಬೇಕು, ಅಮಾಯಕ ಜನರ ವಿರುದ್ಧ ಅಲ್ಲ" ಎಂದು ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಬೂದಿ ಮುಚ್ಚಿದ ಕೆಂಡ ಮಂಗಳೂರಿಗೆ ಸಿದ್ದರಾಮಯ್ಯ ಭೇಟಿ
ಇದೇ ವೇಳೆ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಹಾರಿಹಾಯ್ದು, "ಪೌರತ್ವ ವಿರೋಧಿ ಪ್ರತಿಭಟನೆಯನ್ನು ಕೆಲವರು ಪಂಕ್ಚರ್ ಹಾಕೋರು, ಕಸ ಗುಡಿಸೋರು ಪ್ರತಿಭಟನೆ ಮಾಡ್ತಿದ್ದಾರೆಂದು ಹೇಳಿದ್ದಾರೆ. ನೀವು ಬಡವರಿಗೆ ವಿದ್ಯಾಭ್ಯಾಸ ಕೊಡಿ, ಉದ್ಯೋಗ ಕೊಡಿ ಸ್ವಾಮಿ. ಅವರು ಯಾಕೆ ಪಂಕ್ಚರ್ ಹಾಕ್ತಾರೆ, ಅವರು ಕಸ ಗುಡಿಸದಿದ್ದರೆ ನೀವು ಇರಲು ಸಾಧ್ಯನಾ? ಅವರೇ ಇವತ್ತು ಸ್ವಚ್ಛ ಭಾರತ ಮಾಡ್ತಿರೋದು" ಎಂದರು.
"ಯಾರೂ ಎನ್.ಆರ್.ಸಿಗೆ ಹೆದರಬೇಕಿಲ್ಲ. ನಾನು ಇದಕ್ಕೆ ಅರ್ಜಿ ಹಾಕುವುದಿಲ್ಲ. ಬೇಕಿದ್ದರೆ ನನ್ನನ್ನೇ ಬಂಧಿಸಲಿ. ನಾವು ಅಧಿಕಾರ ಕೊಟ್ಟಿರುವುದು ನಮ್ಮ ಹಿತ ಕಾಯಲಿ ಎಂದು. ಆದರೆ ಕೇಂದ್ರ ಸರ್ಕಾರ ತನ್ನ ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಇತಂಹ ಕಾಯ್ದೆಗಳ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿದೆ" ಎಂದು ದೂರಿದರು.