ರಾಮನಗರ: ಇಡಿ ವಿಚಾರಣೆಗೆ ಗೈರಾದ ಡಿಕೆಶಿ ಆಪ್ತ ಇಕ್ಬಾಲ್ ಹುಸೇನ್
ರಾಮನಗರ, ಅಕ್ಟೋಬರ್ 9: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಸಹೋದರ ಡಿ.ಕೆ ಸುರೇಶ್ ಅವರ ಆಪ್ತ, ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ರಾಮನಗರ ಜಿಲ್ಲಾ ಪಂಚಾಯತಿ ಅಧ್ಯಕ್ಷ ಇಕ್ಬಾಲ್ ಹುಸೇನ್ಗೆ ಜಾರಿ ನಿರ್ದೇಶನಾಲಯ ಮತ್ತೆ ಸಮನ್ಸ್ ಜಾರಿ ಮಾಡಿದೆ.
ದೆಹಲಿಯ ಇಡಿ ಕಚೇರಿಯಲ್ಲಿ ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಕೋವಿಡ್-19 ಹಿನ್ನೆಲೆಯಲ್ಲಿ ಇಡಿ ವಿಚಾರಣೆಗೆ ಕಾಂಗ್ರೆಸ್ ಮುಖಂಡ ಹಾಗೂ ಡಿಕೆಶಿ ಪರಮಾಪ್ತ ಇಕ್ಬಾಲ್ ಹುಸೇನ್ ಗೈರಾಗಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಅವರ ಸಹೋದರ ಸಂಸದ ಡಿ.ಕೆ ಸುರೇಶ್ ಅವರ ರಾಮನಗರ ಜಿಲ್ಲೆಯ ದೊಡ್ಡಾಲಹಳ್ಳಿ ಮನೆ ಮೇಲೆ ಇತ್ತೀಚಿಗೆ ಸಿಬಿಐ ದಾಳಿ ಮಾಡಿ ಹಲವು ದಾಖಲೆ ಹಾಗೂ ನಗದು ವಶಪಡಿಸಿಕೊಂಡಿದೆ.
ಎರಡು ಬಾರಿ ಇಡಿ ಅಧಿಕಾರಿಗಳ ಮುಂದೆ ಹಾಜರು
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮತ್ತು ಅವರ ಸಹೋದರ ಸಂಸದ ಡಿ.ಕೆ ಸುರೇಶ್ ಆಪ್ತರಾದ ಇಕ್ಬಾಲ್ ಈಗಾಗಲೇ ಕಳೆದ ಸೆಪ್ಟೆಂಬರ್ 12 ಹಾಗೂ ಇದೇ ತಿಂಗಳ ಅ.1 ರಂದು ಎರಡು ಬಾರಿ ಇಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಇಕ್ಬಾಲ್ ಹುಸೇನ್ ಆದಾಯದ ಮೂಲಗಳ ಬಗ್ಗೆ ಇಡಿ ಮಾಹಿತಿ ಸಂಗ್ರಹ ಮಾಡಿದೆ. ಬ್ಯಾಂಕ್ ವಿವರ, ಕಾರ್ಖಾನೆ, ವ್ಯವಹಾರದ ಕುರಿತು ಮಾಹಿತಿಯನ್ನು ಇಡಿ ಕೇಳಿದೆ.
ಡಿಕೆಶಿ ಆಪ್ತರಿಗೆ ಇಡಿ ಸಮನ್ಸ್; ದೆಹಲಿಗೆ ವಿಚಾರಣೆಗೆ ಬರಲು ಸೂಚನೆ
ಮೂರನೇ ವಿಚಾರಣೆಗೆ ಇಂದು ಹಾಜರಾಗುವಂತೆ ಸಮನ್ಸ್
ಮೊದಲ ವಿಚಾರಣೆ ಸಂದರ್ಭಲ್ಲಿ ಇಡಿ ಅಧಿಕಾರಿಗಳು, ಕಳೆದ 10 ವರ್ಷದಲ್ಲಿನ ಆದಾಯದ ಮೂಲ ಹಾಗೂ ಬ್ಯಾಂಕ್ ವಿವರಗಳನ್ನು ಒದಗಿಸುವಂತೆ ಇಕ್ಬಾಲ್ ಹುಸೇನ್ ಸೂಚಿಸಿದ್ದರು. ಅದರಂತೆ ಎರಡನೇ ವಿಚಾರಣೆ ಸಂದರ್ಭ ಅಗತ್ಯ ದಾಖಲೆಗಳನ್ನು ಅವರು ಅಧಿಕಾರಿಗಳ ಮುಂದೆ ಹಾಜರು ಪಡಿಸಿದ್ದರು. ಅದರಲ್ಲಿ ಕೆಲವು ಸ್ಪಷ್ಟನೆ ಬಯಸಿ ಇಡಿ ಮೂರನೇ ವಿಚಾರಣೆಗೆ ಇಂದು ಹಾಜರಾಗುವಂತೆ ಸಮನ್ಸ್ ನೀಡದ್ದರು. 2018 ರ ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. 69,990 ಮತಗಳನ್ನು ಪಡೆದು ಜೆಡಿಎಸ್ನ ಎಚ್. ಡಿ. ಕುಮಾರಸ್ವಾಮಿ ವಿರುದ್ಧ ಸೋಲು ಕಂಡಿದ್ದರು.
ಐಶ್ವರ್ಯಗೆ ಇಕ್ಬಾಲ್ ವೈಯಕ್ತಿಕವಾಗಿ 11.75 ಕೋಟಿ ಸಾಲ
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕುಟುಂಬದೊಂದಿಗೆ ಇಕ್ಬಾಲ್ ಹಣಕಾಸು ವ್ಯವಹಾರ ಹೊಂದಿದ್ದು, 2018 ರ ವಿಧಾನಸಭೆ ಚುನಾವಣೆ ಸಂದರ್ಭ ಡಿ.ಕೆ ಶಿವಕುಮಾರ್ ಸಲ್ಲಿಸಿದ ಅಫಿಡವಿಟ್ ನಲ್ಲಿ ತಮ್ಮ ಪುತ್ರಿ ಐಶ್ವರ್ಯಗೆ ಇಕ್ಬಾಲ್ ವೈಯಕ್ತಿಕವಾಗಿ 11.75 ಕೋಟಿ ಸಾಲ ಹಾಗೂ ಅವರು ಪಾಲುದಾರಿಕೆ ಹೊಂದಿರುವ ಎನ್.ಎಂ ಗ್ರಾನೈಟ್ಸ್ ನಿಂದ 1.25 ಕೋಟಿ ರೂಪಾಯಿ ಸಾಲ ನೀಡಿರುವುದಾಗಿ ಘೋಷಿಸಿದ್ದರು. ಈ ಸಂಬಂಧ ಇಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ ಎನ್ನಲಾಗಿದೆ.
Recommended Video
ಕೋವಿಡ್-19 ಹಿನ್ನೆಲೆ ವಿಚಾರಣೆಗೆ ಕಾಲಾವಕಾಶ ಕೋರಿದ ಇಕ್ಬಾಲ್
ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದ ಡಿ.ಕೆ ಸುರೇಶ್ಗೆ ಕೋವಿಡ್ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ, ಇಕ್ಬಾಲ್ ಹುಸೇನ್ ಸಂಸದರ ಪ್ರಾಥಮಿಕ ಸಂಪರ್ಕದಲ್ಲಿದ್ದ ಕಾರಣ ಕ್ವಾರಂಟೈನ್ ಗೆ ಒಳಗಾಗಿದ್ದಾರೆ. ಹೀಗಾಗಿ ವಿಚಾರಣೆಗೆ ಕಾಲಾವಕಾಶ ಕೊಡುವಂತೆ ಕೋರಿ ಇಡಿ ಅಧಿಕಾರಿಗಳಿಗೆ ಈ ಸಂಬಂಧ ಇ-ಮೇಲ್ ಮೂಲಕ ಮನವಿ ಮಾಡಿದ್ದೇನೆ. ಅವರ ಉತ್ತರಕ್ಕಾಗಿ ಕಾಯುತ್ತಿದ್ದೇನೆ ಎಂದು ಇಕ್ಬಾಲ್ ಹುಸೇನ್ ತಿಳಿಸಿದ್ದಾರೆ.