"ಡಿಕೆಶಿ, ನಾನು ಆತ್ಮೀಯ ಸ್ನೇಹಿತರು" ಎಂದ ಯಡಿಯೂರಪ್ಪ
Recommended Video
ರಾಮನಗರ, ನವೆಂಬರ್ 8: ಸಿಎಂ ಯಡಿಯೂರಪ್ಪ ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಮಹಾ ಸ್ವಾಮೀಜಿಗಳ 111 ಅಡಿ ಪ್ರತಿಮೆ ನಿರ್ಮಾಣಕ್ಕೆ ಇಂದು ರಾಮನಗರದಲ್ಲಿ ಶಂಕುಸ್ಥಾಪನೆ ನೆರವೇರಿಸಿದರು.
ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ವೀರಾಪುರ ಗ್ರಾಮದಲ್ಲಿ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಇನ್ನೆರಡು ವರ್ಷದ ಒಳಗೆ ಪುತ್ಥಳಿ ನಿರ್ಮಾಣ ಕಾರ್ಯ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು. "25 ಕೋಟಿ ವೆಚ್ಚದಲ್ಲಿ ಪುತ್ಥಳಿ ನಿರ್ಮಾಣವಾಗಲಿದೆ, ಜೊತೆಗೆ ಉತ್ತಮ ರಸ್ತೆ ಕೂಡ ನಿರ್ಮಾಣವಾಗಲಿದೆ. ಪ್ರಧಾನಿ ಮೋದಿಯವರು ಸರ್ದಾರ್ ವಲ್ಲಭಬಾಯ್ ಪಟೇಲ್ ಪುತ್ಥಳಿ ನಿರ್ಮಾಣ ಮಾಡಿದ್ದಾರೆ, ಆ ರೀತಿ ವೀರಾಪುರದಲ್ಲಿ ಶ್ರೀಗಳ ಪುತ್ಥಳಿ ನಿರ್ಮಾಣವಾಗಲಿದೆ. ಇನ್ನೆರೆಡು ವರ್ಷದಲ್ಲಿ ನಿರ್ಮಾಣ ಮುಗಿಸಿ 50 ಸಾವಿರ ಜನರನ್ನು ಕರೆಸಿ ದೊಡ್ಡ ಕಾರ್ಯಕ್ರಮ ಮಾಡ್ತೇವೆ" ಎಂದರು.
ಡಿಕೆಶಿ, ನಾನು ಆತ್ಮೀಯ ಸ್ನೇಹಿತರು ಎಂದ ಸಿಎಂ
ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಿಎಂ ಯಡಿಯೂರಪ್ಪ, "ನನಗೆ ಸಂಸದ ಸುರೇಶ್ ಅವರು ಅನೇಕ ಸಲಹೆಗಳನ್ನು ನೀಡಿದ್ದಾರೆ. ಡಿಕೆಶಿ ಹಾಗೂ ನಾನು ಆತ್ಮೀಯ ಸ್ನೇಹಿತರು. ಡಿ.ಕೆ.ಶಿವಕುಮಾರ್ ಅವರ ಜತೆಗೆ ಮಾತುಕತೆ ಮಾಡಿ ಸೂಕ್ತ ಸ್ಥಳ ನಿಗದಿ ಮಾಡಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಲಾಗುವುದು" ಎಂದು ತಿಳಿಸಿದರು.
ದೇವೇಗೌಡರು ಮತ್ತು ನಮ್ಮ ಸಂಬಂಧ ಚೆನ್ನಾಗಿದೆ: ಯಡಿಯೂರಪ್ಪ
ಜಿಲ್ಲಾ ಉಸ್ತುವಾರಿ ಸಚಿವರ ಭರವಸೆ
ಇದೇ ಸಂದರ್ಭ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಿಸಿಎಂ ಅಶ್ವಥ್ ನಾರಾಯಣ್, "ವೀರಾಪುರ ಗ್ರಾಮವನ್ನು ಸಮಗ್ರ ರೀತಿಯಲ್ಲಿ ಅಭಿವೃದ್ಧಿ ಮಾಡುತ್ತೇವೆ. ಶ್ರೀಗಳ ಪುತ್ಥಳಿ ಸೇರಿದಂತೆ ಪಾರ್ಕ್, ಶಿವಕುಮಾರ ಮಹಾಸ್ವಾಮಿಗಳ ಮ್ಯುಸಿಯಂ ಕೂಡ ನಿರ್ಮಾಣ ಮಾಡಲಾಗುವುದು. ನಾವು ಅಧಿಕಾರಕ್ಕೆ ಬಂದ ಕಡಿಮೆ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಮಾಡಿದ್ದೇವೆ. 80 ಕೋಟಿ ವೆಚ್ಚದಲ್ಲಿ ಶ್ರೀಗಳ ಸ್ವಗ್ರಾಮ ವೀರಾಪುರವನ್ನು ಅಭಿವೃದ್ಧಿ ಪಡೆಸುತ್ತೇವೆ" ಎಂದು ತಿಳಿಸಿದರು.
ಕಡೆಗಣಿಸಬೇಡಿ ಎಂದ ಡಿಕೆ ಸುರೇಶ್
"ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ನಮ್ಮನ್ನು ಕಡೆಗಣನೆ ಮಾಡಬೇಡಿ. ಅಭಿವೃದ್ಧಿ ವಿಚಾರದಲ್ಲಿ ನಾವು ರಾಜಕೀಯ ಮಾಡುವುದಿಲ್ಲ. ಕನಕಪುರದ ಮೆಡಿಕಲ್ ಕಾಲೇಜನ್ನು ಚಿಕ್ಕಬಳ್ಳಾಪುರಕ್ಕೆ ಇವತ್ತು ಸಿಎಂ ತಗೆದುಕೊಂಡು ಹೋಗುತ್ತಿದ್ದಾರೆ. ಚಿಕ್ಕಬಳ್ಳಾಪುರಕ್ಕೆ ಬೇಕಾದರೆ ನೂತನ ಮೆಡಿಕಲ್ ಕಾಲೇಜು ಘೋಷಣೆ ಮಾಡಿ. ಆದರೆ ಕನಕಪುರಕ್ಕೆ ಮಂಜೂರಾಗಿರುವ ಮೆಡಿಕಲ್ ಕಾಲೇಜನ್ನು ಸ್ಥಳಾಂತರ ಮಾಡಬೇಡಿ" ಎಂದು ಸಿಎಂಗೆ ವೇದಿಕೆಯಲ್ಲೇ ಹೇಳಿದರು ಡಿ.ಕೆ.ಸುರೇಶ್. ಹಾಗೆಯೇ, ಸರಕಾರಿ ಕಾರ್ಯಕ್ರಮಗಳಿಗೆ ಜನಪ್ರತಿನಿಧಿಗಳನ್ನು ಆಹ್ವಾನ ಮಾಡಿ ಎಂದು ನಿಮ್ಮ ಅಧಿಕಾರಿಗಳಿಗೆ ಹೇಳಿ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಗೆ ತಿಳಿಸಿದರು.
ಸಿಎಂ ಆಡಿಯೋ ಪ್ರಕರಣ; ಸಭಾ ಕೊಠಡಿಯಲ್ಲಿ ಸಿಸಿ ಟಿವಿಯೂ ಇರಲಿಲ್ಲ
ಪಕ್ಷಬೇಧ ಮರೆತು ನಡೆದ ಕಾರ್ಯ
"ಎಲ್ಲಾ ಕಾರ್ಯಗಳಿಗೂ ಈಗಾಗಲೇ ಹಣ ಬಿಡುಗಡೆಗೊಳಿಸಲಾಗಿದೆ. ಪಕ್ಷ ಬೇಧ ಮರೆತು ಶ್ರೀಗಳ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇವೆ. ಶ್ರೀಗಳು ಬೆಳೆದ ಈ ವೀರಾಪುರದಲ್ಲಿ ಗ್ರಾಮದಲ್ಲಿರುವ ನೀವು ಧನ್ಯರು, ದೇಶಕ್ಕೆ ಮಾದರಿಯ ಕೆಲಸ ಮಾಡಿರುವವರು ಶ್ರೀಗಳು" ಎಂದರು.
ಯಡಿಯೂರಪ್ಪ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಡಿಸಿಎಂ ಅಶ್ವಥ್ ನಾರಾಯಣ್, ಸಿದ್ದಗಂಗಾ ಮಠದ ಸಿದ್ದಲಿಂಗಾ ಮಹಾ ಸ್ವಾಮಿ, ಸಂಸದ ಡಿ.ಕೆ.ಸುರೇಶ್, ಶಾಸಕ ಎ.ಮಂಜುನಾಥ್ ಸಾಥ್ ನೀಡಿದರು.