ನಗರಸಭೆ ಚುನಾವಣೆ; ತಮ್ಮ ಅನುಪಸ್ಥಿತಿಯಲ್ಲೂ ಪ್ರಾಬಲ್ಯ ಕಾಯ್ದುಕೊಂಡ ಡಿ.ಕೆ. ಬ್ರದರ್ಸ್
ಕನಕಪುರ, ನವೆಂಬರ್ 5: ತಮ್ಮ ಅನುಪಸ್ಥಿತಿಯಲ್ಲೂ ಕನಕಪುರ ನಗರಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಏಳು ಅಭ್ಯರ್ಥಿಗಳನ್ನು ಅವಿರೋಧವಾಗಿ ಗೆಲ್ಲಿಸಿಕೊಳ್ಳುವ ಮೂಲಕ ಡಿ.ಕೆ. ಬ್ರದರ್ಸ್ ತಮ್ಮ ಪ್ರಾಬಲ್ಯ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟು 31 ವಾರ್ಡ್ ಗಳನ್ನು ಹೊಂದಿರುವ ನಗರಸಭೆಯಲ್ಲಿ ಎರಡು ನಾಮಪತ್ರಗಳು ತಿರಸ್ಕೃತಗೊಂಡಿದ್ದು ಅಂತಿಮವಾಗಿ ಪಕ್ಷೇತರರು ಸೇರಿದಂತೆ ಮೂರು ಪಕ್ಷದ ಒಟ್ಟು 67 ಮಂದಿ ಚುನಾವಣಾ ಕಣದಲ್ಲಿದ್ದಾರೆ.
ವಾರ್ಡ್ ನಂ.2 ಕಾಂತರಾಜು, ವಾರ್ಡ್ ನಂ.12 ಕೆ.ರಾಜು, ವಾರ್ಡ್ ನಂ.19 ಮಕ್ಬಲ್ ಪಾಷ, ವಾರ್ಡ್ ನಂ.23 ಪುಟ್ಟಲಕ್ಷ್ಮಿ, ವಾರ್ಡ್ ನಂ. 27 ಮೋಹನ, ವಾರ್ಡ್ ನಂ 31 ಸುಲ್ತಾನ್ ಬಾನು ಅವಿರೋಧವಾಗಿ ಆಯ್ಕೆಯಾದ ಕಾಂಗ್ರೆಸ್ ಅಭ್ಯರ್ಥಿಗಳು. ಇನ್ನು ವಾರ್ಡ್ ನಂ.10 ಜೆಡಿಎಸ್ ಅಭ್ಯರ್ಥಿ ನೀಲಮ್ಮ ಕೂಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ದಾವಣಗೆರೆ, ಮಂಗಳೂರು ಮಹಾನಗರ ಪಾಲಿಕೆಗೆ ನ. 12ಕ್ಕೆ ಚುನಾವಣೆ ಘೋಷಣೆ
ನಗರಸಭೆ ಚುನಾವಣೆಗೆ ಜೆಡಿಎಸ್ 13 ಮಂದಿ, ಕಾಂಗ್ರೆಸ್ 31 ಮಂದಿ, ಬಿಜೆಪಿ ಪಕ್ಷದಿಂದ 27 ಮಂದಿ ಹಾಗೂ 19 ಜನ ಪಕ್ಷೇತರರು ನಾಮ ಪತ್ರ ಸಲ್ಲಿಸಿದ್ದರು. ವಾರ್ಡ್ ನಂ 3ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಆನಂದ್ ಮತ್ತು 27ನೇ ವಾರ್ಡಿನ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಕೃಷ್ಣಯ್ಯಶೆಟ್ಟಿ ಅವರ ನಾಮ ಪತ್ರಗಳಲ್ಲಿ ದೋಷಗಳು ಇರುವುದರಿಂದ 2 ನಾಮಪತ್ರಗಳು ತಿರಸ್ಕೃತಗೊಂಡಿವೆ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ಕಾಂಗ್ರೆಸ್ - ಜೆಡಿಎಸ್ ಪಕ್ಷಗಳು ಸ್ಥಳೀಯ ಮಟ್ಟದಲ್ಲಿ ಹೊಂದಾಣಿಕೆ ಮಾಡಿಕೊಂಡಿವೆ ಎನ್ನಲಾಗಿದೆ. ಈ ಬಗ್ಗೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ರವಿ (ಡಿಕೆಶಿ ಸಂಬಂಧಿ) ಸ್ಥಳೀಯ ಸಂಸ್ಥೆಯ ಚುನಾವಾಣೆಯಾದ ಕಾರಣ ನಿರ್ಧಾರ ಕೂಡ ಸ್ಥಳೀಯ ನಾಯಕರೇ ತೆಗೆದುಕೊಳ್ಳಬಹುದು, ಪಕ್ಷಕ್ಕೆ ಯಾವುದೇ ಮುಜುಗರವಿಲ್ಲ. ಎರಡು ಪಕ್ಷದ ಸ್ಥಳೀಯ ಮಟ್ಟದ ಮುಖಂಡರು ಪರಸ್ಪರ ಚರ್ಚಿಸಿ ನಿರ್ಧಾರ ತೆಗೆದುಕೊಂಡಿದ್ದಾರೆ, ಇದರಲ್ಲಿ ನಮ್ಮ ಪಾತ್ರ ಏನೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.