ಎರಡನೇ ಹಂತದ ಮೇಕೆದಾಟು ಪಾದಯಾತ್ರೆಗೆ ಡಿಕೆ ಸಹೋದರರು ಸಜ್ಜು
ರಾಮನಗರ, ಫೆಬ್ರವರಿ 20: ರಾಜ್ಯದಲ್ಲಿ ಕೋವಿಡ್ ಸೋಂಕು ಹೆಚ್ಚಾದ ಹಿನ್ನಲೆಯಲ್ಲಿ ಮೇಕೆದಾಟು ಪಾದಯಾತ್ರೆಯನ್ನು ಸ್ಥಗಿತಗೊಳಿಸಿದ್ದ ಡಿಕೆ ಸಹೋದರರು, ಎರಡನೇ ಹಂತದ ಮೇಕೆದಾಟು ಪಾದಯಾತ್ರೆಯನ್ನು ರಾಮನಗರದಿಂದಲೇ ಪ್ರಾರಂಭ ಮಾಡುವ ಘೋಷಣೆ ಮಾಡಿದ್ದು, ಮೇಕೆದಾಟು ಪಾದಯಾತ್ರೆ ಇದೇ ತಿಂಗಳ 27 ರಂದು ರಾಮನಗರದಿಂದ ಪ್ರಾರಂಭವಾಗಲಿದೆ.
ಎರಡನೇ ಹಂತದ ಮೇಕೆದಾಟು ಪಾದಯಾತ್ರೆ ಪ್ರಾರಂಭಿಸುವ ನಿಟ್ಟಿನಲ್ಲಿ, ಚನ್ನಪಟ್ಟಣದ ಕೆಂಗಲ್ ಬಳಿಯ ಖಾಸಗಿ ಕಲ್ಯಾಣ ಮಂಟಪದಲ್ಲಿ ಸಂಸದ ಡಿ.ಕೆ.ಸುರೇಶ್ ಪೂರ್ವಭಾವಿ ಸಭೆ ನಡೆಸಿದರು. ನಂತರ ಮಾಧ್ಯಮಗಳೊಂದಿಗೆ ಮಾತನಾಡಿ ಮೊದಲ ಹಂತದ ಮೇಕೆದಾಟು ಪಾದಯಾತ್ರೆಗಿಂತ ಎರಡನೇ ಹಂತದ ಪಾದಯಾತ್ರೆಗೆ ಹೆಚ್ಚಿನ ಜನ ಬೆಂಬಲ ದೊರೆಯುವ ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಫೆ.27ರಿಂದ ಕಾಂಗ್ರೆಸ್ಸಿನ ಮೇಕೆದಾಟು ಪಾದಯಾತ್ರೆ ಪುನಾರಂಭ
ಇದೇ ತಿಂಗಳ ಪೆ .27 ರಿಂದ ಮೇಕೆದಾಟು ಎರಡನೇ ಹಂತದ ಪಾದಯಾತ್ರೆ ಪ್ರಾರಂಭ ಮಾಡುತ್ತೇವೆ. ಫೆ. 27ರ ಬೆಳಗ್ಗೆ 9 ಗಂಟೆಗೆ ರಾಮನಗರದಿಂದ ಪ್ರಾರಂಭವಾಗುವ ಪಾದಯಾತ್ರೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ರಾಜ್ಯದ ಹಲವು ಕೈ ನಾಯಕರು ಪಾದಯಾತ್ರೆಯಲ್ಲಿ ಭಾಗವಹಿಸುತ್ತಾರೆ ಎಂದು ಸಂಸದ ಡಿ.ಕೆ.ಸುರೇಶ್ ಮಾಹಿತಿ ನೀಡಿದರು.
ಪಾದಯಾತ್ರೆ ಮೊದಲ ದಿನ ರಾಮನಗರಿಂದ ಹೊರಟು ಬಿಡದಿಯಲ್ಲಿ ರಾತ್ರಿ ವಾಸ್ತವ್ಯ ಮಾಡಲಿದೆ. ಎರಡನೇ ದಿನ ಬಿಡದಿ ಯಿಂದ ಹೊರಟುವ ಪಾದಯಾತ್ರೆ ಕೆಂಗೇರಿ ಮೂಲಕ ಬೆಂಗಳೂರು ಪ್ರವೇಶ ಮಾಡಲಿದೆ. ಮೊದಲು ಬೆಂಗಳೂರಿನಲ್ಲೇ 5 ದಿನ ಪಾದಯಾತ್ರೆ ಮಾಡಲು ನಿರ್ಧಾರ ಮಾಡಿದ್ದೋ ಎಂದರು.
ಆದರೆ ಬಜೆಟ್ ಇರುವ ಕಾರಣ 5 ದಿನದ ಬದಲು 3 ದಿನ ಬೆಂಗಳೂರಿನಲ್ಲಿ ಪಾದಯಾತ್ರೆ ಮಾಡುವ ನಿರ್ಧಾರ ಮಾಡಿದ್ದೇವೆ. ಅಲ್ಲದೇ ಬೆಂಗಳೂರಿನಲ್ಲಿಯೂ ಕೆಲ ಮಾರ್ಗಗಳ ಬದಲಾವಣೆ ಮಾಡುತ್ತೇವೆ. ಕಳೆದ ಬಾರಿ ಬಂದ ಜನರಿಗೆ ಆತಿಥ್ಯ ನೀಡಿದ್ದೇವೆ, ಈ ಬಾರಿಯು ಸಹ ಪಾದಯಾತ್ರಿಗಳಿಗೆ ಉತ್ತಮ ಆತಿಥ್ಯ ನೀಡುತ್ತೇವೆ ಅದರ ಸಿದ್ಧತೆಗಾಗಿ ಸಭೆ ಮಾಡುತ್ತಿದ್ದೇವೆ ಎಂದು ಸಂಸದ ಡಿ.ಕೆ.ಸುರೇಶ್ ಮಾಹಿತಿ ಹಂಚಿಕೊಂಡರು.
ಮೇಕೆದಾಟು ಯೋಜನೆಗೆ ಅನುಮತಿ ಪಡೆಯುವುದು ಸರ್ಕಾರದ ಜವಾಬ್ದಾರಿ
ಸಿಎಂ ಬಸವರಾಜ ಬೊಮ್ಮಾಯಿ ಯವರು ದೆಹಲಿಗೆ ಬಂದಾಗ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಒತ್ತಾಯ ಮಾಡಿದ್ದೇ,ಅವರು ನಾವು ಮಾಡುತ್ತೇವೆ ಎಂದಿದ್ದರು, ಆದರೆ ಇದುವರೆಗೆ ಮೇಕೆದಾಟು ಯೋಜನೆ ಬಗ್ಗೆ ಚಕಾರ ಎತ್ತುತಿಲ್ಲ, ಯೋಜನೆ ಅನುಷ್ಟಾನಕ್ಕೆ ಕೇಂದ್ರ ಸರ್ಕಾರದ ಅನುಮತಿ ತರುವುದು ರಾಜ್ಯ ಸರ್ಕಾರದ ಜವಾಬ್ದಾರಿ.
ಹಾಗಾಗಿ ತಮ್ಮ ಜವಾಬ್ದಾರಿ ಮರೆತಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಪಾದಯಾತ್ರೆ ಮೂಲಕ ಒತ್ತಾಯ ಮಾಡುತ್ತಿದ್ದೇವೆ. ಎರಡನೇ ಹಂತದ ಮೇಕೆದಾಟು ಪಾದಯಾತ್ರೆಗೆ ಯಾವುದೇ ಅಡೆತಡೆ ಬಂದರೂ ಸಹ ಪಾದಯಾತ್ರೆ ಮುಂದುವರೆಸುತ್ತೇವೆ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು.
ಮೊದಲನೇ ಹಂತದ ಮೇಕೆದಾಟು ಪಾದಯಾತ್ರೆಯನ್ನು ಕೊರೋನಾ ಇತ್ತು ಎಂದು ನಾವು ಪಾದಯಾತ್ರೆ ಮೊಟಕು ಮಾಡಿದ್ದೇವು, ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಮೊಟಕು ಮಾಡಿದ್ದೋ, ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಬೆಂಬಲ ಸಿಗಲಿದೆ. ಬೆಂಗಳೂರಿನ ಜನರು ಈ ಪಾದಯಾತ್ರೆಗೆ ಪಕ್ಷಾತೀತವಾಗಿ ಬೆಂಬಲ ಕೊಡುತ್ತಾರೆ ಎಂದು ಸಂಸದ ಡಿ.ಕೆ.ಸುರೇಶ್ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿಗಳ ಕುಟುಂಬದವರು ಏನೇ ಹೇಳಿದರು ಕೇಳಬೇಕು ಅಷ್ಟೇ
ಮೇಕೆದಾಟು ಪಾದಯಾತ್ರೆ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಂಸದ ಡಿ.ಕೆ.ಸುರೇಶ್, ಅವರು ಪ್ರಧಾನಮಂತ್ರಿ ಕುಟುಂಬದವರು, ಅವರ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ, ಅವರಿಗಿರುವ ಬುದ್ಧಿ, ತಿಳುವಳಿಕೆ ಈ ರಾಜ್ಯದಲ್ಲಿ ಯಾರಿಗೂ ಇಲ್ಲ ಎಂದು ಹೆಚ್ಡಿಕೆ ಯವರಿಗೆ ನಯವಾಗಿ ಟಾಂಕ್ ನೀಡಿದರು.
ಪ್ರಧಾನಿ ಹಾಗೂ ಮುಖ್ಯಮಂತ್ರಿ ಕುಟುಂಬದವರು, ಅವರು ಏನೇ ಮಾತನಾಡಿದರೂ ಕೇಳಬೇಕಷ್ಟೇ, ಪ್ರಶ್ನೆ ಮಾಡಬಾರದು, ರಾಜ್ಯಕ್ಕಾಗಿ, ರಾಷ್ಟ್ರಕ್ಕಾಗಿ ಏನ್ ಹೇಳ್ತಾರೋ ಕೇಳಬೇಕು, ಪ್ರಶ್ನೆ ಮಾಡಬಾರದು ಎಂದು ಡಿ.ಕೆ.ಸುರೇಶ್ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಯವರ ಟೀಕೆಗಳಿಗೆ ನಯವಾಗೆ ಉತ್ತರಿಸಿದರು.
ಮೇಕೆದಾಟು ಯೋಜನೆಗೆ ಟೆಕ್ನಿಕಲ್ ಸಮಸ್ಯೆ ಇಲ್ಲ
Recommended Video
ಮೇಕೆದಾಟು ಪಾದಯಾತ್ರೆ ಯೋಜನೆಯನ್ನು ಅನುಷ್ಟಾನಕ್ಕೆ ತರಲು ಯಾವುದೇ ಟೆಕ್ನಿಕಲ್ ಸಮಸ್ಯೆ ಏನು ಇಲ್ಲ. ಕೇಂದ್ರ ಸರ್ಕಾರ ಇಚ್ಛಾಶಕ್ತಿ ಪ್ರದರ್ಶನ ಮಾಡಬೇಕಿದೆ. ರಾಜ್ಯ ಸರ್ಕಾರ ಕೇಂದ್ರವನ್ನು ಒಪ್ಪಿಸಿ ಅನುಮತಿ ಪಡೆಯುವಲ್ಲಿ ವಿಫಲವಾಗಿದೆ.
ಪ್ರಸ್ತುತ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಇದೇ ಮೇಕೆದಾಟು ಯೋಜನೆಗೆ ತೊಡಕಾಗಿರುವ ಎನ್ವಾರ್ನಮೆಂಟ್ ಕ್ಲಿಯರೆನ್ಸ್ ಕೊಡಲು ಅವಕಾಶ ಇರುವುದು ಕೇಂದ್ರ ಸರ್ಕಾರಕ್ಕೆ. ಕಾವೇರಿ ಪ್ರಾಧಿಕಾರ ರಚನೆಯಾಗಿದೆ, ಅದರಲ್ಲಿ ಕುಡಿಯುವ ನೀರಿನ ಯೋಜನೆ ಎಂದು ಕೇಂದ್ರ ಸರ್ಕಾರ ಅನುಮೋದನೆ ಕೊಡಬೇಕಿದೆ. ಜನರ ಒತ್ತಾಯದ ಮುಂದೆ ಬೇರೆ ಏನು ಇಲ್ಲ, ಮಾಡಲೇಬೇಕಾಗುತ್ತೆ ಹಾಗಾಗಿ ಪಾದಯಾತ್ರೆಯ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು. (ಒನ್ಇಂಡಿಯಾ ಸುದ್ದಿ)