ಮ್ಯಾನ್ಹೋಲ್ ದುರಂತದ ಮೃತ ಕುಟುಂಬಗಳಿಗೆ ಪರಿಹಾರದ ಚೆಕ್ ವಿತರಣೆ
ರಾಮನಗರ, ಜೂನ್ 5: ರಾಮನಗರದ ಐಜೂರು ಬಡವಾಣೆಯ ಬಳಿ ಇರುವ ನೇತಾಜಿ ಪಾಪ್ಯುಲರ್ ಶಾಲೆ ಮುಂಭಾಗ ಜೂನ್ 4 ರಂದು ಮ್ಯಾನ್ಹೋಲ್ ದುರಸ್ತಿಗೆ ಇಳಿದು ಮೂರು ಕಾರ್ಮಿಕರು ಮೃತಪಟ್ಟಿದ್ದರು.
ಶನಿವಾರ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ವೆಂಕಟೇಶನ್ ಹಾಗೂ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಎಂ.ಶಿವಣ್ಣ, ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ಚೆಕ್ ವಿತರಿಸಿದರು.
ಘಟನೆಯಲ್ಲಿ ಮೃತಪಟ್ಟ ಮಂಜುನಾಥ್ (32) ಮತ್ತು ಮಂಜುನಾಥ್ (30) ಎಂಬ ಇಬ್ಬರು ವ್ಯಕ್ತಿಯ ಕುಟುಂಬದ ವರ್ಗದವರಿಗೆ ಚೆಕ್ ವಿತರಿಸಿದ್ದು, ರಾಜೇಶ್ ಎಂಬ ವ್ಯಕ್ತಿಯ ಕುಟುಂಬ ವರ್ಗದವರನ್ನು ಸರಿಯಾಗಿ ಗುರುತಿಸಿ ಪರಿಶೀಲಿಸಿದ ನಂತರ ಅವರಿಗೆ ಪರಿಹಾರ ಚೆಕ್ ನೀಡಲಾಗುವುದು ಎಂದರು.
ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಪಿ.ವೆಂಕಟೇಶನ್ ಅವರು ಮಾತನಾಡಿ, ಘಟನೆ ಗಮನಕ್ಕೆ ಬಂದ ತಕ್ಷಣ ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಗುತ್ತಿಗೆದಾರರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದರು.
ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಎಂ.ಶಿವಣ್ಣ ಮಾತನಾಡಿ, ಮ್ಯಾನ್ಹೋಲ್ನಲ್ಲಿ ಕೆಲಸ ಮಾಡಲು ಇಳಿದು 3 ಜನ ಕಾರ್ಮಿಕರು ಸಾವನ್ನಪ್ಪಿರುವುದು ವಿಷಾದನೀಯ ವಿಷಯ. ಮ್ಯಾನ್ಹೋಲ್ನಲ್ಲಿ ಯಾರನ್ನು ಕೂಡ ಇಳಿಸಬಾರದು. ಇಂದು ತುಂಬ ಆಧುನಿಕ ಯಂತ್ರಗಳಿವೆ ಅವನ್ನು ಬೆಳಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಘಟನೆಯ ಹಿನ್ನೆಲೆ ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ, ಜಿಲ್ಲಾಧಿಕಾರಿಗಳು ಹಾಗೂ ಇನ್ನಿತರ ಅಧಿಕಾರಿಗಳೊಂದಿಗೆ ಇಂದು ಸಭೆ ನಡೆಸಿ ಮುಂದಿನ ಕ್ರಮಗಳ ಬಗ್ಗೆ ಸೂಚನೆ ನೀಡಲಾಗುವುದು. ಮೃತಪಟ್ಟ ಕುಟುಂಬದವರಿಗೆ 10 ಲಕ್ಷ ರೂ. ಪರಿಹಾರ ನೀಡಲಾಗುವುದು. ಘಟನೆಯಲ್ಲಿ ಮೃತಪಟ್ಟವರು ಅಟ್ರಾಸಿಟಿ ವ್ಯಾಪ್ತಿಗೆ ಬಂದಲ್ಲಿ ಅದರಡಿ ನೀಡಲಾಗುವ ಪರಿಹಾರವನ್ನು ಸಹ ಒದಗಿಸಲಾಗುವುದು ಎಂದರು.
ಮ್ಯಾನುಯಲ್ ಸ್ಕ್ಯಾವಂಜರ್ ಆಕ್ಟ್ ಅಡಿಯಲ್ಲಿ ಪರಿಶೀಲನೆ ನಡೆಸಿ, ಕೇವಲ ಗುತ್ತಿಗೆದಾರ ಮಾತ್ರವಲ್ಲ ನಗರಸಭೆಯ ಜವಾಬ್ದಾರಿ ಸಹ ಇದೆ. ಈ ಕುರಿತಂತೆ ಪರಿಶೀಲನೆ ನಡೆಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತಿಳಿಸಲಾಗಿದೆ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
Recommended Video
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಿರೀಶ್, ಉಪವಿಭಾಗಾಧಿಕಾರಿ ಮಂಜುನಾಥ್, ನಗರಸಭೆ ಆಯುಕ್ತ ನಂದಕುಮಾರ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಲಲಿತಾ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತಿರಿದ್ದರು. ಸಭೆಗೂ ಮುನ್ನ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ವೆಂಕಟೇಶನ್ ಹಾಗೂ ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷರಾದ ಎಂ.ಶಿವಣ್ಣ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.