ರಾಮನಗರದಲ್ಲಿ ಬಿಜೆಪಿ ಶೂನ್ಯದಿಂದ ಮೂರಂಕಿಗೆ: ಆದರೂ ಜಿಲ್ಲೆಯಲ್ಲಿ ಪಕ್ಷದ ಗುಂಪುಗಾರಿಕೆ, ಆತ್ಮಾವಲೋಕನ ಯಾವಾಗ?
ಕಮಲದ ನಾಯಕರು ಹೇಳುವಂತೆ ಜೆಡಿಎಸ್ಸಿನ ಭದ್ರಕೋಟೆ ರಾಮನಗರ ಜಿಲ್ಲೆಯಲ್ಲಿ ಬಿಜೆಪಿ ಗಮನಾರ್ಹ ಸಾಧನೆಯನ್ನು ಮಾಡಿದೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಮೂರಂಕಿಯನ್ನು ದಾಟಿದೆ ಎಂದು ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ಹೇಳಿದ್ದಾರೆ.
ಯಡಿಯೂರಪ್ಪನವರು ಇತ್ತೀಚೆಗೆ ತಮ್ಮ ವಿವೇಚನೆಯ ಕೋಟಾದಿಂದ ವಿವಿಧ ನಿಗಮ ಮಂಡಳಿಗೆ ಅಧ್ಯಕ್ಷರನ್ನು ನೇಮಿಸಿದ್ದರು. ಸಂಘ ಪರಿವಾರದವರನ್ನು ಗಣನೆಗೆ ತೆಗೆದುಕೊಂಡಿಲ್ಲ ಎನ್ನುವ ಕೂಗು ಆ ವೇಳೆ ಜೋರಾಗಿತ್ತು, ಆಮೇಲೆ ಅದು ತಣ್ಣಗಾಗಿತ್ತು.
ಗ್ರಾ.ಪಂ ಚುನಾವಣೆ: ರಾಮನಗರದಲ್ಲಿ ಶೂನ್ಯದಿಂದ ಮೂರಂಕಿ ದಾಟಿದ ಬಿಜೆಪಿ ಬೆಂಬಲಿತರು
ಆದರೂ, ಅಸಮಾಧಾನದ ಹೊಗೆ ತಣ್ಣಗೆ ಬೀಸುತ್ತಲೇ ಇದೆ ಎನ್ನುವುದಕ್ಕೆ ಹಲವು ನಿದರ್ಶನಗಳು ಎದುರಾದವು. ಇತ್ತೀಚೆಗೆ, ಬಿಜೆಪಿಯ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್, ಬೆಂಗಳೂರಿಗೆ ಭೇಟಿ ನೀಡಿದ ಸಂದರ್ಭದಲ್ಲೂ ಈ ವಿಚಾರ ಪ್ರಸ್ತಾವನೆಗೆ ಬಂದಿತ್ತು.
ರಾಮನಗರ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆಯನ್ನು ಮಾಡಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ಸಿನ ಮತಬ್ಯಾಂಕಿಗೆ ನೇರವಾಗಿ ಬಿಜೆಪಿ ಲಗ್ಗೆಯಿಟ್ಟಿದೆ ಎನ್ನುವ ಗ್ರೌಂಡ್ ರಿಪೋರ್ಟ್ ಇದ್ದರೂ, ಬಿಜೆಪಿಯ ಎರಡು ಬಣಗಳ ನಡುವೆ ಗುಂಪುಗಾರಿಕೆ ಇಲ್ಲದೇ ಇದ್ದ ಪಕ್ಷದಲ್ಲಿ, ಬಿಜೆಪಿ ಇನ್ನಷ್ಟು ಸಾಧನೆಯನ್ನು ಮಾಡಬಹುದಿತ್ತು ಎನ್ನುವುದು ಆ ಪಕ್ಷದ ಮುಖಂಡರ ವಾದ..
ಡಿಸಿಎಂ ಡಾ.ಅಶ್ವಥ್ ನಾರಾಯಣ್ ಮಾಡಿದ್ದ ಟ್ವೀಟ್
"ರಾಮನಗರ ಜಿಲ್ಲೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು ನೆಲೆ ಕಳೆದುಕೊಳ್ಳುತ್ತಿವೆ. ಬಂಡೆಗಳು ಛಿದ್ರವಾಗುತ್ತಿವೆ. ಚನ್ನಪಟ್ಟಣದಲ್ಲಿ 142, ರಾಮನಗರದಲ್ಲಿ 22, ಮಾಗಡಿಯಲ್ಲಿ 40 ಕಡೆ ಬಿಜೆಪಿ ವಿಜಯ ಸಾಧಿಸಿದೆ. ಇದು ಶೂನ್ಯದಿಂದ ಶುರುವಾದ ಸಾಧನೆ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಮೊದಲ ಬಾರಿಗೆ ರಾಮನಗರ ಜಿಲ್ಲೆಯಲ್ಲಿ @BJP4Karnataka ಹೊಸ ಇತಿಹಾಸ ಬರೆದಿದೆ. ಜಿಲ್ಲೆಯಲ್ಲಿ ಶೂನ್ಯದಿಂದ ಬಿಜೆಪಿ ಇಂದು 4 ತಾಲೂಕುಗಳಲ್ಲಿ 234ಕ್ಕೂ ಹೆಚ್ಚು ಕಡೆ ಗೆಲುವು ಸಂಪಾದಿಸಿದೆ. ಇದಕ್ಕೆ ಕಾರಣೀಕರ್ತರಾದ ಎಲ್ಲಾ ನಾಯಕರಿಗೂ, ಕಾರ್ಯಕರ್ತರಿಗೂ ಅಭಿನಂದನೆಗಳು" ಇದು ಡಿಸಿಎಂ ಡಾ.ಅಶ್ವಥ್ ನಾರಾಯಣ್ ಮಾಡಿದ್ದ ಟ್ವೀಟ್.
ಗ್ರಾಮೀಣಾಭಿವೃದ್ದಿ ನಿಗಮದ ಅಧ್ಯಕ್ಷರನ್ನಾಗಿ ರುದ್ರೇಶ್
ಇತ್ತೀಚೆಗೆ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸುವ ವಿಚಾರದಲ್ಲಿ ಬಿಎಸ್ವೈ ಏಕಪಕ್ಷೀಯ ನಿರ್ಧಾರ ತೆಗೆದುಕೊಂಡರು ಎನ್ನುವುದು ಬಿಜೆಪಿ ವಲಯದಲ್ಲೇ ಇರುವ ಮಾತು. ತಮ್ಮ ಪರಮಾಪ್ತ ವಲಯದಲ್ಲಿ ಕಾಣಿಸಿಕೊಳ್ಳುವ ಎಂ..ರುದ್ರೇಶ್ ಅವರನ್ನು ಯಡಿಯೂರಪ್ಪ, ಗ್ರಾಮೀಣಾಭಿವೃದ್ದಿ ನಿಗಮದ (KRIDL) ಅಧ್ಯಕ್ಷರನ್ನಾಗಿ ನೇಮಿಸಿದ್ದರು. ಇದೊಂದು, ಆಶ್ಚರ್ಯಕರ ನಿರ್ಧಾರವಾಗಿತ್ತು.
ವಿಜಯೇಂದ್ರ ಅವರ ನಿಕಟವರ್ತಿಯಾಗಿರುವ ರುದ್ರೇಶ್
ಈ ಭಾಗದ ಪ್ರಬಾವಿ ಮುಖಂಡರಾಗಿರುವ ಬಿಎಸ್ವೈ ಅವರ ಪುತ್ರ ವಿಜಯೇಂದ್ರ ಅವರ ನಿಕಟವರ್ತಿಯಾಗಿರುವ ರುದ್ರೇಶ್, ಪ್ರಮುಖವಾಗಿ ಯುವಕರನ್ನು ಸೆಳೆಯಲು ಯಶಸ್ವಿಯಾಗಿದ್ದರು. ಆದರೆ, ಜಿಲ್ಲೆಯಲ್ಲಿನ ಎರಡು ಬಣಗಳ ನಡುವಿನ ಗುಂಪುಗಾರಿಕೆ, ಪಕ್ಷಕ್ಕೆ ಮುಳುವಾಗುತ್ತಾ ಸಾಗುತ್ತಿದೆ ಎನ್ನುವುದು ಸ್ಥಳೀಯ ಬಿಜೆಪಿ ಕಾರ್ಯಕರ್ತರ ನೋವಿನ ಮಾತಾಗಿದೆ.
ನಮ್ಮ ಪಕ್ಷದವರೇ ಹಲವು ಕ್ಷೇತ್ರಗಳಲ್ಲಿ ನಮಗೆ ಶತ್ರುಗಳಾದರು
"ನಮ್ಮ ಪಕ್ಷದವರೇ ಹಲವು ಕ್ಷೇತ್ರಗಳಲ್ಲಿ ನಮಗೆ ಶತ್ರುಗಳಾದರು, ಇಲ್ಲದೇ ಇದ್ದಲ್ಲಿ ನಮ್ಮ ಸಾಧನೆ ಇನ್ನೂ ಗಣನೀಯವಾಗುತ್ತಿತ್ತು. ನಮಗೆ ಇದು ಆತ್ಮಾವಲೋಕನದ ಕಾಲ. ನಾವೆಲ್ಲರೂ ಒಗ್ಗಟ್ಟಾಗಿ ಮುಂದೆ ಸಾಗಬೇಕಾಗಿದೆ"ಎಂದು ಖುದ್ದು ರುದ್ರೇಶ್ ಗೌಡ ಹೇಳಿರುವುದು, ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದೆ.
Recommended Video