ಮುಂದುವರೆದ ಟೊಯೊಟಾ ಆಡಳಿತ ಮಂಡಳಿ- ನೌಕರರ ನಡುವಿನ ಬಿಕ್ಕಟ್ಟು
ರಾಮನಗರ, ನವೆಂಬರ್ 18: ಬಿಡದಿಯ ಟೊಯೊಟಾ ಕಾರು ತಯಾರಿಕಾ ಘಟಕದ ಆಡಳಿತ ಮಂಡಳಿ ಹಾಗೂ ನೌಕರರ ನಡುವಿನ ಬಿಕ್ಕಟ್ಟು ಮುಂದುವರೆದಿದೆ. ಈ ಕುರಿತು ಮಂಗಳವಾರ ಸರ್ಕಾರ ಮಧ್ಯ ಪ್ರವೇಶಿಸಿದ್ದು, ಡಿಸಿಎಂ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥ ನಾರಾಯಣ್ ನೇತೃತ್ವದಲ್ಲಿ ಸಭೆ ನಡೆದಿತ್ತು. ಕಂಪನಿಯ ಲಾಕ್ ಔಟ್ ಹಾಗೂ ಮುಷ್ಕರ ಎರಡನ್ನೂ ನಿಷೇಧಿಸಲು ಅಶ್ವತ್ಥ ನಾರಾಯಣ್ ಸೂಚಿಸಿದ್ದರು.
ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಮಾಗಡಿ ಶಾಸಕ ಮಂಜುನಾಥ, ಕೈಗಾರಿಕೆ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ಸಭೆಯಲ್ಲಿ ಹಾಜರಿದ್ದು, ಬುಧವಾರದಿಂದ ಕಾರ್ಖಾನೆ ಆರಂಭಿಸಲು ಆಡಳಿತ ಮಂಡಳಿ ಪ್ರತಿನಿಧಿಗಳಿಗೆ ಡಿಸಿಎಂ ಸೂಚನೆ ನೀಡಿದ್ದರು. ಆದರೆ ಮಂಗಳವಾರ ನಡೆದ ಮಾತುಕತೆಯು ವಿಫಲವಾಗಿದ್ದು, ಮುಷ್ಕರವನ್ನು ಮುಂದುವರೆಸುವುದಾಗಿ ಕಾರ್ಮಿಕ ಸಂಘಟನೆ ತಿಳಿಸಿದೆ. ಬುಧವಾರ ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ್ ಸ್ವಾಮೀಜಿ ಅವರು ಮುಷ್ಕರದಲ್ಲಿ ಭಾಗವಹಿಸಿದ್ದರು.
ಟೊಯೊಟಾ ಕಂಪನಿ ಲಾಕೌಟ್ ತೆರವುಗೊಳಿಸುವಂತೆ ಡಿಸಿಎಂ ಸೂಚನೆ
ಈ ಸಂದರ್ಭ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ನಮ್ಮ ನೆಲದಲ್ಲಿ ಕಾರ್ಖಾನೆ ನಿರ್ಮಾಣಗೊಂಡಿದ್ದು, ಇಲ್ಲಿನ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅವರಿಗೆ ಅನ್ಯಾಯವಾದರೆ ಧ್ವನಿಯೆತ್ತುವುದು ಸಹಜ. ಸುಮಾರು 17 ಸಾವಿರ ಕುಟುಂಬಗಳು ಬೀದಿಗೆ ಬಿದ್ದರೆ ಅವರನ್ನು ರಕ್ಷಿಸುವ ಜವಾಬ್ದಾರಿ ನಮ್ಮದಾಗಿರುತ್ತದೆ. ಇದರಿಂದ ಸಮಸ್ಯೆಯನ್ನು ಚರ್ಚಿಸಿ ಬಗೆಹರಿಸುವುದು ಸೂಕ್ತ ಹಾಗೂ ಇದರ ಮಧ್ಯಸ್ಥಿಕೆಯನ್ನು ತಾವು ವಹಿಸಲು ಸಿದ್ಧ ಎಂದು ತಿಳಿಸಿದರು.
ಬೇಡಿಕೆಯನ್ನು ಈಡೇರಿಸಿದರೆ ಮಾತ್ರ ಕೆಲಸಕ್ಕೆ ಹಾಜರಾಗಲು ಸಿದ್ಧ ಎಂದು ಕಾರ್ಮಿಕರ ಸಂಘವು ತಿಳಿಸಿದೆ. ಕಂಪನಿಯು ಕಾರ್ಮಿಕವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಕಳೆದ ಒಂಬತ್ತು ದಿನಗಳಿಂದಲೂ ಕಾರ್ಮಿಕರು ಧರಣಿ ನಡೆಸುತ್ತಿದ್ದಾರೆ.
Recommended Video