ರಮೇಶ್ ಜಾರಕಿಹೊಳಿ ವಿರುದ್ಧ ನೀಡಿದ್ದ ದೂರು ವಾಪಸ್: ದಿನೇಶ್ ಕಲ್ಲಹಳ್ಳಿ ಪತ್ರದಲ್ಲಿ ಏನಿದೆ?
ರಾಮನಗರ, ಮಾರ್ಚ್ 7: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ನೀಡಿದ್ದ ದೂರನ್ನು ವಾಪಸ್ಸು ಪಡೆಯುವ ಬಗ್ಗೆ ಸಾಮಾಜಿಕ ಕಾರ್ಯಕರ್ತ ಹಾಗೂ ಪ್ರಮುಖ ದೂರುದಾರ ದಿನೇಶ್ ಕಲ್ಲಹಳ್ಳಿ ನಿರ್ಧರಿಸಿದ್ದಾರೆ.
ಜಲಸಂಪನ್ಮೂಲ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
Breaking: ರಮೇಶ್ ಜಾರಕಿಹೊಳಿ ವಿರುದ್ಧ ನೀಡಿದ್ದ ದೂರು ವಾಪಸ್ ಪಡೆದ ದಿನೇಶ್ ಕಲ್ಲಹಳ್ಳಿ?
ಬದಲಾದ ಸನ್ನಿವೇಶದಲ್ಲಿ ದೂರುದಾರ ದಿನೇಶ್ ಕಲ್ಲಹಳ್ಳಿ ಅವರು ಜಾರಕಿಹೊಳಿ ವಿರುದ್ಧ ನೀಡಿದ್ದ ದೂರನ್ನು ವಾಪಸ್ ಪಡೆಯುವ ಬಗ್ಗೆ ವಕೀಲರೊಂದಿಗೆ ಮಾತನಾಡಿರುವುದಾಗಿ ಹೇಳಿದ್ದಾರೆ. ಈ ಕುರಿತು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಅವರಿಗೆ ದಿನೇಶ್ ಕಲ್ಲಹಳ್ಳಿ ಪತ್ರ ಬರೆದಿದ್ದಾರೆ.
ಪತ್ರದಲ್ಲೇನಿದೆ?
ಮಾಜಿ ನೀರಾವರಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ನೀಡಿದ ಲೈಂಗಿಕ ಕಿರುಕುಳ ದೂರನ್ನು ಹಿಂಪಡೆಯುತ್ತಿರುವ ಬಗ್ಗೆ..
ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಮಾಜಿ ನೀರಾವರಿ ಮಂತ್ರಿ ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡಿದ್ದು ಸರಿಯಷ್ಟೆ. ಬಟ್ಟೆಯ ಮೇಲೆ ಮುಳ್ಳು ಬಿದ್ದರೂ, ಮುಳ್ಳಿನ ಮೇಲೆ ಬಟ್ಟೆ ಬಿದ್ದರೂ ಹರಿಯುವುದು ಬಟ್ಟೆಯೇ, ಎಂಬ ನಾಣ್ಣುಡಿಯನ್ನು ಈ ಹಿಂದೆ ಮಹಿಳೆಯರ ವಿಷಯದಲ್ಲಿ ಬಳಕೆ ಮಾಡಲಾಗುತ್ತಿತ್ತು.
ಮಹಿಳೆಯ ಚಾರಿತ್ರ್ಯ ಹರಣ
ಸಚಿವರದ್ದೆನ್ನಲಾದ ಲೈಂಗಿಕ ದೌರ್ಜನ್ಯದ ಸಿಡಿಯನ್ನು ಪೊಲೀಸರಿಗೆ ದೂರಿನ ಜೊತೆಗೆ ಒಪ್ಪಿಸಿದ್ದೆ. ಆದರೆ ಈಗ ಇಡೀ ಸಮಾಜದಲ್ಲಿ ಮಹಿಳೆಯ ಚಾರಿತ್ರ್ಯ ಹರಣ ನಡೆಯುತ್ತಿದೆಯೇ ಹೊರತು ಇದನ್ನು ಹೊರತುಪಡಿಸಿ ಬೇರೇನು ನಡೆಯುತ್ತಿಲ್ಲ. ಈವರೆಗಿನ ನನ್ನ ರಾಜಿ ರಹಿತ ಹೋರಾಟವನ್ನು ನಮ್ಮ ಸಮಾಜ ನೋಡಿಕೊಂಡು ಬಂದಿದೆ. ರಾಜ್ಯ ಹಾಗೂ ರಾಷ್ಟ್ರದ ಹಲವು ತನಿಖಾ ಸಂಸ್ಥೆಗಳು ನನ್ನ ದೂರಿನ ಆಧಾರದಲ್ಲಿ ಹಲವು ಭ್ರಷ್ಟರ, ಸಮಾಜ ವಿರೋಧಿ ರಾಜಕಾರಣಿಗಳು ಹಾಗೂ ಅಧಿಕಾರಿಗಳ ವಿರುದ್ಧ ತನಿಖೆ ಈಗಲೂ ನಡೆಯುತ್ತಿದೆ.
ಓರ್ವ ಅಸಹಾಯಕಳ ಜೊತೆ ನಿಲ್ಲಲಿಲ್ಲ
ಸಾಮಾಜಿಕ ಜಾಲತಾಣದಲ್ಲಿ ಯುವತಿಯ ಫೋಟೋಗಳಿಗೆ ಅತ್ಯಂತ ಕೆಟ್ಟದಾಗಿ ಕ್ಯಾಪ್ಶನ್ ಕೊಡಲಾಯಿತು. ಸಾಮಾಜಿಕ ಹೊಣೆಗಾರಿಕೆಯಿಂದ ಪೊಲೀಸರಿಗೆ ನೀಡಿದ ಮಾಹಿತಿಯೇ ಸಾಮಾಜಿಕ ಪೀಡೆಯಾಗಿ ಪರಿವರ್ತನೆಯಾಯಿತು. ಜಾತಿ ಸಂಘಟನೆಗಳು ಹಲವಾರು ರೀತಿಯಲ್ಲಿ ವ್ಯಾಖ್ಯಾನ ನಡೆಸಿತೇ ಹೊರತು, ಓರ್ವ ಅಸಹಾಯಕಳ ಜೊತೆ ನಿಲ್ಲಲಿಲ್ಲ. ಸಿಡಿಯಲ್ಲಿರುವ ಮಾಹಿತಿಯನ್ನು ಕೂಲಂಕುಷವಾಗಿ ವಿಚಾರಣೆ ನಡೆಸದೇ, ಪೊಲೀಸ್ ಹೇಳಿಕೆ ಇಲ್ಲದೆಯೇ, ಅವರ ಬಗ್ಗೆ ತೀರ್ಪು ಕೊಡುವ ಹುನ್ನಾರಗಳು ಮಾಧ್ಯಮದ ಮೂಲಕ ನಡೆದವು.
Recommended Video
ಪ್ರಕರಣವನ್ನು ಇಲ್ಲಿಗೆ ಮುಕ್ತಾಯಗೊಳಿಸಲು ಬಯಸಿದ್ದೇನೆ
ವಿಚಾರಣೆ ಇಲ್ಲದೆ ಜನರ ಬಾಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಯುವತಿಯೊಬ್ಬಳು ಅಪರಾಧಿಯಾದಳು. ಒಂದು ಕಡೆ ಮಾಹಿತಿದಾರನನ್ನು ಮುಗಿಸಿಬಿಡು ಎಂಬ ಸಿದ್ದಾಂತವಾದರೆ, ಮತ್ತೊಂದೆಡೆ ರಾಜಕೀಯ ಕೇಂದ್ರಿತ ಅಧಿಕಾರದಿಂದಾಗಿ ಅಪರಾಧಿಯಾದ ಸಂತ್ರಸ್ಥೆ. ಒಟ್ಟಾರೆಯಾಗಿ ನಾನು ದೂರು ನೀಡಿದ ಉದ್ದೇಶವೇ ಮಹಿಳೆಗೆ ಮತ್ತು ಮಾಹಿತಿದಾರನಾದ ನನಗೆ ತಿರುಗುಬಾಣವಾಗಿದ್ದು, ಸಾಮಾಜಿಕ ಹಿತದೃಷ್ಟಿಯಿಂದ ಈ ಪ್ರಕರಣವನ್ನು ಇಲ್ಲಿಗೆ ಮುಕ್ತಾಯಗೊಳಿಸಲು ಬಯಸಿದ್ದು, ನಾನು ನೀಡಿರುವ ದೂರನ್ನು ಹಿಂಪಡೆಯ ಬಯಸುತ್ತೇನೆ ಎಂದು ದಿನೇಶ್ ಕಲ್ಲಹಳ್ಳಿ ಪತ್ರದಲ್ಲಿ ವಿವರಿಸಿದ್ದಾರೆ.