ರಮೇಶ್ ಜಾರಕಿಹೊಳಿ ವಿರುದ್ಧ ನೀಡಿದ್ದ ದೂರು ವಾಪಸ್ ಪಡೆದ ದಿನೇಶ್ ಕಲ್ಲಹಳ್ಳಿ?
ರಾಮನಗರ, ಮಾರ್ಚ್ 7: ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ನೀಡಿದ್ದ ದೂರನ್ನು ವಾಪಸ್ಸು ಪಡೆಯುವ ಬಗ್ಗೆ ಸಾಮಾಜಿಕ ಕಾರ್ಯಕರ್ತ ಹಾಗೂ ದೂರುದಾರ ದಿನೇಶ್ ಕಲ್ಲಹಳ್ಳಿ ನಿರ್ಧರಿಸಿದ್ದಾರೆ. ಈ ಬಗ್ಗೆ ಖುದ್ದು ದಿನೇಶ್ ಅವರು ಖಾಸಗಿ ವಾಹಿನಿಯೊಂದಕ್ಕೆ ಮಾತನಾಡಿ ತಮ್ಮ ಪತ್ರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಜಲಸಂಪನ್ಮೂಲ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ದೂರುದಾರ ದಿನೇಶ್ ಕಲ್ಲಹಳ್ಳಿ ಅವರು ದೂರನ್ನು ವಾಪಸ್ ಪಡೆಯುವ ಬಗ್ಗೆ ವಕೀಲರೊಂದಿಗೆ ಮಾತನಾಡುವುದಾಗಿ ಹೇಳಿದ್ದಾರೆ.
ಈ ಕುರಿತು ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ದಿನೇಶ್ ಕಲ್ಲಹಳ್ಳಿ, "ನನ್ನ ಮೇಲೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು 5 ಕೋಟಿ ರೂ. ಡೀಲ್ ನಡೆದಿದೆ ಎಂದು ಆರೋಪಿಸಿದ್ದಾರೆ. ಅವರ ಈ ಹೇಳಿಕೆಯಿಂದ ಜನ ನನ್ನನ್ನು ಸಂಶಯದಿಂದ ನೋಡುವಂತಾಗಿದೆ."
"ಮಾಜಿ ಸಿಎಂ ಕುಮಾರಣ್ಣರ ಹೇಳಿಕೆ ನನ್ನ ಸಾಮಾಜಿಕ ಹೋರಾಟಕ್ಕೆ ಹಿನ್ನಡೆಯೆಂದೇ ಹೇಳಬಹುದು. ಮಾಹಿತಿ ಕೊಡುವವರನ್ನು ಟಾರ್ಗೆಟ್ ಮಾಡುತ್ತಿರುವುದು ನೋವಿನ ಸಂಗತಿ" ಎಂದು ದಿನೇಶ್ ಕಲ್ಲಹಳ್ಳಿ ಹೇಳಿದರು.
Recommended Video
ಮಾಜಿ ಸಚಿವರ ವಿರುದ್ಧದ ದೂರು ವಾಪಸ್ ಪಡೆದಿದ್ದೀರಾ? ಯಾವಾಗ ಪಡೆಯುತ್ತೀರಿ? ಎಂಬ ಪ್ರಶ್ನೆಗೆ, "ನಾನೀಗ ನನ್ನ ವಕೀಲರೊಂದಿಗೆ ಮಾತನಾಡಿದ್ದೇನೆ. ವಕೀಲರು ಹೋಗುತ್ತಿದ್ದಾರೆ. ವಕೀಲರು ನನಗೆ ತಿಳಿಸಿದ ನಂತರ ಅದರ ಬಗ್ಗೆ ನಿಮಗೆ ಹೇಳುತ್ತೇನೆ" ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಪ್ರತಿಕ್ರಿಯೆ ನೀಡಿದರು.