ವಿಧಾನಸೌಧದ ಮುಂದೆ ಜಾನಪದ ಜಾತ್ರೆ ನಡೆಸಲು ಆಗ್ರಹ
ರಾಮನಗರ, ಮೇ 17: ಹಿಂದೆ ಸರ್ಕಾರಗಳು ಕಲಾವಿದರಿಗೆ ನೆರವಾಗುವ ಉದ್ದೇಶದಿಂದ ಬೆಂಗಳೂರಿನ ವಿಧಾನಸೌಧದ ಮುಂದೆ ಜಾನಪದ ಜಾತ್ರೆ ಆಯೋಜನೆ ಮಾಡುತ್ತಿದ್ದರು. ಪ್ರಸ್ತುತ ಸರ್ಕಾರ ಜಾನಪದ ಜಾತ್ರೆ ಆಯೋಜನೆ ಮಾಡುವ ಮೂಲಕ ಕಲಾವಿದರ ಸಂಕಷ್ಟಕ್ಕೆ ನೆರವಾಗುವಂತೆ ಸರ್ಕಾರವನ್ನು ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಟಿ. ತಿಮ್ಮೇಗೌಡ ಆಗ್ರಹಿಸಿದರು.
ಜಾನಪದ ಕಲೆಯನ್ನು ಉಳಿಸಿ ಬೆಳಸುವಲ್ಲಿ ಶ್ರಮಿಸುತ್ತಿರುವ ಜನಪದರ ಕಾಶಿ ಖ್ಯಾತಿಯ ಜಾನಪದ ಲೋಕ ಹಮ್ಮಿಕೊಳ್ಳುವ ತಿಂಗಳ ಅಥಿತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, "ಮಹಾ ಮಾರಿ ಕೊರೋನಾ ಹಾವಳಿಯಿಂದ ಕಲಾವಿದರ ಬದುಕು ಸಂಕಷ್ಟದಲ್ಲಿದೆ" ಎಂದರು.
"ಜಾನಪದ ಲೋಕ ಪ್ರತಿ ತಿಂಗಳು ನಾಡಿನ ಮೂಲೆ ಮೂಲೆಗಳಿಂದ ವಿಶಿಷ್ಟ ಕಲಾವಿದರನ್ನು ಕರೆಸಿ ಗೌರವಿಸುವ ಕೆಲಸವನ್ನು ಪರಿಷತ್ತು ನಿರಂತರವಾಗಿ ಮಾಡುತ್ತಿದೆ. ಯಾವುದೇ ಕಲಾವಿದರು ಗೌರವ, ಸನ್ಮಾನಕ್ಕಾಗಿ ಕಲೆಯನ್ನು ಕಲಿತು ಪ್ರದರ್ಶಿಸುತ್ತಿಲ್ಲ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಪರಂಪರೆಯಿಂದ ಬಂದ ಕಲೆಯನ್ನು ಕಲಿತು ಪ್ರದರ್ಶಿಸುತ್ತಿದ್ದಾರೆ ಹಾಗಾಗಿ ಸರ್ಕಾರ ಅವರ ನೆರವಿಗೆ ಧಾವಿಸಬೇಕು" ಎಂದು ಕರೆ ನೀಡಿದರು.
"ಹಿಂದೆ ಬ್ರಿಟಿಷರ ಸ್ವಾಗತ ಕಾರ್ಯಕ್ರಮಗಳಿಗೆ ಅತಿಥಿಗಳನ್ನು ಬ್ಯಾಂಡ್ಸೆಟ್ಗಳೊಂದಿಗೆ ಮೆರವಣಿಗೆ ಹೋಗುತ್ತಿದ್ದರು. ಇಂದು ಜಾನಪದ ಕಲಾತಂಡಗಳೊಂದಿಗೆ ರಾಜಕೀಯ ನೇತಾರರ ಮೆರವಣಿಗೆ, ಜಾತ್ರೆ ಹಾಗೂ ಉತ್ಸವಗಳಲ್ಲಿ ಭಾಗವಹಿಸಿ ಜೀವನ ನಿರ್ವಹಣೆ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ" ಎಂದು ಟಿ. ತಿಮ್ಮೇಗೌಡ ಬೇಸರ ವ್ಯಕ್ತಪಡಿಸಿದರು.
"ದೆಹಲಿ ಗಣರಾಜ್ಯೋತ್ಸವದ ಪಥಸಂಚಲನದಿಂದ ಹಿಡಿದು ಮೈಸೂರು ದಸರಾ ಮೆರವಣಿಗೆವರೆಗೂ ಕಲಾವಿದರು ಭಾಗವಹಿಸಿ ಜಾನಪದ ಕಲೆಗಳನ್ನು ಪ್ರದರ್ಶನ ಮಾಡುವ ಮೂಲಕ ನಾಡಿನ ಹಿರಿಮೆಯನ್ನು ಹೆಚ್ಚಿಸಿದ್ದಾರೆ. ನಾಡೋಜ ಎಚ್. ಎಲ್. ನಾಗೇಗೌಡರ ಹೆಸರಿನಲ್ಲಿ ಕಲಾಶಾಲೆ ಕಲಾಸಕ್ತರಿಗೆ ತರಬೇತಿ ನೀಡುತ್ತಿದೆ, ಜಿಲ್ಲಾ ಘಟಕಗಳು ಪರಿಷತ್ತಿಗೆ ಬಲವನ್ನು ನೀಡುತ್ತಿವೆ" ಎಂದರು.
ಧನುರಾಮ್ ಅಲ್ಯಪ್ಪ ಲಮಾಣಿ ಬೆಳಕಿಗೆ ಬಾರದ ನೂರಾರು ಜಾನಪದ ಕಲಾವಿದರನ್ನು ಗುರುತಿಸಿ, ಗೌರವಿಸುವ ಮೂಲಕ ಜಾನಪದ ಕಲೆಯ ಬೆಳವಣಿಗೆಗೆ ಜಾನಪದ ಲೋಕ ಉತ್ತೇಜನ ನೀಡುತ್ತಿದೆ. ಇನ್ನೂ ಅಪರೂಪದ ಕಲೆಯಾದ ನಂಗಾರ ಮತ್ತು ಬಯಲಾಟ ಕಲಾವಿದರಾದ ನಮ್ಮನ್ನು ಗುರುತಿಸಿ ಗೌರವಿಸುತ್ತಿರುವುಕ್ಕೆ ಜಾನಪದ ಲೋಕ, ಪರಿಷತ್ ಅಧ್ಯಕ್ಷರಿಗೆ ಮತ್ತು ಪರಿಷತ್ತಿಗೆ ಕೃತಜ್ಞತೆ ಸಲ್ಲಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕರಾದ ಟಿ.ಜಿ.ರಮೇಶ್ ಬಾಬು ಮಾತನಾಡಿ, "ರಾಮನಗರ ಎಂದರೆ ರೇಷ್ಮೆಯ ನಾಡು ಎಂದು ಖ್ಯಾತಿ ಪಡೆದಿರುವಂತೆ ಜಾನಪದ ಕಲೆಗಳಿಗೂ ತವರೂರಾಗಿದೆ, ಅಲ್ಲದೆ ಆಧುನಿಕತೆಯ ಒಡೆತಕ್ಕೆ ಸಿಲುಕಿ ಕಣ್ಮರೆ ಮರೆಯಾಗುತ್ತಿರುವ ಜಾನಪದದ ಹಲವಾರು ಕಲೆಗಳನ್ನು ಗುರುತಿಸಿ, ಉತ್ತೇಜನ ನೀಡುವುದರ ಜೊತೆ ನಾಡಿಗೆ ಅವುಗಳನ್ನು ಪರಿಚಯಿಸುತ್ತಿರುವ ಜಾನಪದ ಲೋಕದ ಕಾರ್ಯ ಜನಮೆಚ್ಚುಗೆ ಪಾತ್ರವಾಗಿದೆ" ಎಂದರು
ಸರ್ಕಾರಿ ಪಾಲಿಟೆಕ್ನಿಕ್ ಸಿವಿಲ್ ಇಂಜಿನಿಯರಿಂಗ್ ವಿಭಾಗದ ವಿಭಾಗ ಅಧಿಕಾರಿಯಾದ ಶ್ರೀನಿವಾಸ ಹೆಚ್. ಎನ್. ಮಾತನಾಡಿ, "ಪ್ರತಿ ತಿಂಗಳು ವಿಭಿನ್ನ ಕಲೆಗಳನ್ನು, ಕಲಾವಿದರನ್ನು ಗುರುತಿಸಿ ಗೌರವಿಸುತ್ತಿರುವುದು ತುಂಬಾ ಸಂತೋಷವಾಗುತ್ತಿದೆ. ನಮ್ಮ ಹಳ್ಳಿಯ ಸಮಗ್ರ ಚಿತ್ರಣವನ್ನು ಜಾನಪದ ಲೋಕದಲ್ಲಿ ಬರುವ ಪ್ರವಾಸಿಗರಿಗೆ ಉಣಬಡಿಸುತ್ತಿದೆ. ಜಾನಪದ ಲೋಕಕ್ಕೆ ಕಾಲಿಟ್ಟರೆ ಹಳ್ಳಿಯ ಹಳೆಯ ನೆನಪುಗಳನ್ನು ತರುತ್ತಿದೆ" ಎಂದರು.
Recommended Video